ಗುಜರಾತ್ ನ ಆಮ್ ಆದ್ಮಿ ಪಕ್ಷದ ಸೂರತ್ ಪೂರ್ವ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬುಧವಾರ ನಾಮಪತ್ರ ಹಿಂಪಡೆದಿದ್ದು, ಬಿಜೆಪಿ ಒತ್ತಾಯದ ಮೇರೆಗೆ ಅವರನ್ನು ಅಪಹರಿಸಲಾಗಿದೆ ಮತ್ತು ಹಾಗೆ ಮಾಡಲು ಒತ್ತಡ ಹೇರಲಾಗಿದೆ ಎಂದು ಎಎಪಿ ಆರೋಪಿಸಿದೆ.
ಆದರೆ ಆಡಳಿತ ಪಕ್ಷವು ಎಎಪಿ ಆರೋಪವನ್ನು ನಿರಾಕರಿಸಿದೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಮ್ಮ ಸೂರತ್ ಕ್ಷೇತ್ರದ ಅಭ್ಯರ್ಥಿ ಕಾಂಚನ್ ಜರಿವಾಲಾ ಮಂಗಳವಾರದಿಂದ ಅವರ ಕುಟುಂಬ ಸದಸ್ಯರೊಂದಿಗೆ ಕಾಣೆಯಾಗಿದ್ದಾರೆ ಎಂದು ಹೇಳಿದರು.
ಈ ಚುನಾವಣೆಯಲ್ಲಿ ಗುಜರಾತ್ ನಲ್ಲಿ ಬಿಜೆಪಿ ದಯನೀಯವಾಗಿ ಸೋತಿದೆ ಮತ್ತು ಸೂರತ್ ಪೂರ್ವದಿಂದ ನಮ್ಮ ಅಭ್ಯರ್ಥಿಯನ್ನು ಅಪಹರಿಸುವ ಮಟ್ಟಕ್ಕೆ ಅದು ಕುಸಿದು ಹೋಗಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ಸೋಲಿನ ಭಯದಿಂದ ಬಿಜೆಪಿ ಗೂಂಡಾಗಳು ಸೂರತ್ ನ ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಅಪಹರಿಸಿದ್ದಾರೆ ಎಂದು ಆಪಾದಿಸಿದ್ದಾರೆ.
ಬಿಜೆಪಿ ತನ್ನ ಹಾಲಿ ಶಾಸಕ ಅರವಿಂದ್ ರಾಣಾ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಿದೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8ರಂದ ಮತ ಎಣಿಕೆ ನಡೆಯಲಿದೆ.
ರಾಜ್ಯ ಎಎಪಿ ಅಧ್ಯಕ್ಷ ಗೋಪಾಲ್ ಇಟಾಲಿಯಾ ಅವರು ತಮ್ಮ ಸೂರತ್ ಪೂರ್ವದ ಅಭ್ಯರ್ಥಿ ಕಾಂಚಾನ್ ಜರಿವಾಲ ಅವರು ಬುಧವಾರ ಭಾರೀ ಪೊಲೀಸ್ ರಕ್ಷಣೆಯಲ್ಲಿ ಚುನಾವಣಾಧಿಕಾರಿ ಕಚೇರಿಗೆ ಹಾಜರಾಗಿದ್ದರು ಮತ್ತು ಆಡಳಿತ ಪಕ್ಷದ ಒತ್ತಡದ ಮೇರೆಗೆ ತಮ್ಮ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಬಿಜೆಪಿ ಗೂಂಡಾಗಳು ಸುತ್ತುವರೆದಿದ್ದರು ಎಂದು ಎಎಪಿ ಮುಖಂಡರು ದೂರಿದ್ದಾರೆ.


