ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10 ಲಕ್ಷ ಕೋಟಿ ಹೂಡಿಕೆ ಒಪ್ಪಂದ ಮಾಡಿಕೊಂಡಿದ್ದು 7 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿರುವುದು ಶುದ್ದ ಸುಳ್ಳು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮತ್ತು ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಜಂಟಿ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ 10 ಲಕ್ಷ ಕೋಟಿ ಹೂಡಿಕೆ ಒಪ್ಪಂದ ಮಾಡಿಕೊಂಡಿದ್ದರೂ ಇಲ್ಲಿಯವರೆಗೂ ಅದರಲ್ಲಿ ಜಾರಿ ಆಗಿದ್ದು ಶೇ.14ರಷ್ಟು ಮಾತ್ರ. ಉದ್ಯೋಗ ದೊರೆತಿರುವುದು ಕೇವಲ 4 ಸಾವಿರ ಮಾತ್ರ ಎಂದು ಹೇಳಿದ್ದಾರೆ.
ಈಗ 2022ರಲ್ಲಿ ಘೋಷಣೆ ಆಗಿರುವುದು 9.89 ಲಕ್ಷ ಕೋಟಿ ಅದರಲ್ಲಿ ಮಾಡಿಕೊಂಡಿರುವ ಒಪ್ಪಂದ 2.83 ಲಕ್ಷ ಕೋಟಿ ಎಂದು ಹೇಳುತ್ತಿದ್ದು, 7 ಲಕ್ಷ ಮಂದಿಗೆ ಉದ್ಯೋಗ ಸಿಗಲಿದೆ ಎಂದು ಸರ್ಕಾರ ಹೇಳುತ್ತಿದೆ. ಇದೆಲ್ಲವೂ ರಾಜಕೀಯ ಗಿಮಿಕ್ ಆಗಿದೆ ಎಂದಿದ್ದಾರೆ.
ಬಂಡವಾಳ ಹೂಡಿಕೆದಾರರ ಕಾರ್ಯಕ್ರಮಕ್ಕಾಗಿ ವಿಶ್ವಾದ್ಯಂತ ಇವರು ಪ್ರಚಾರಕ್ಕಾಗಿ ಖರ್ಚು ಮಾಡಿರುವ ಹಣ 300 ಕೋಟಿ. ಭೂ ಬ್ಯಾಂಕ್ ಮೂಲಕ 1.5 ಲಕ್ಷ ಎಕರೆ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ. ಈ ಹಿಂದೆಯೂ ಭೂ ಬ್ಯಾಂಕ್ ಎಂದು ಮಾಡಿ ಕೈಗಾರಿಕೆಗೂ ನೀಡಲಿಲ್ಲ. ಎಲ್ಲವೂ ರಿಯಲ್ ಎಸ್ಟೇಟ್ ಪಾಲಾಯಿತು. ದೇವನಹಳ್ಳಿ ಸುತ್ತಮುತ್ತ ಸಾವಿರಾರು ಎಕರೆಯನ್ನು ರೈತರಿಂದ ಕಸಿದು ರಿಯಲ್ ಎಸ್ಟೇಟ್ ನವರಿಗೆ ನೀಡಿದ್ದಾರೆ ಎಂದು ಉಭಯ ಮುಖಂಡರು ದೂರಿದ್ದಾರೆ.
ಸಚಿವ ಮುರುಗೇಶ್ ನಿರಾಣಿ ಅವರ ಪುತ್ರ ಈ ಕಾರ್ಯಕ್ರಮದಲ್ಲಿ ದೊಡ್ಡ ಪಾತ್ರ ವಹಿಸಿದ್ದರು. ಆ ಸಮಿತಿಯಲ್ಲಿ ಅವರು ಇದ್ದು, ಕಾರ್ಯಕ್ರಮದ ಆಯೋಜನೆಯಲ್ಲೂ ಅವರ ಪಾತ್ರವಿತ್ತು. ಸಚಿವರ ಪುತ್ರ ಎನ್ನುವುದು ಹೊರತಾಗಿ ಉಳಿದ ಯಾವುದೇ ಅರ್ಹತೆ ಅವರಿಗೆ ಇಲ್ಲವಾಗಿದೆ. ಅವರನ್ನು ಯಾಕೆ ಇದರಲ್ಲಿ ಭಾಗವಹಿಸಲು ಅವಕಾಶ ನೀಡಿ ಅವರ ಮೂಲಕ ಯಾರಿಗೆ ಎಷ್ಟು ಎಕರೆ ಜಮೀನು ಕೊಡಿಸಿದ್ದೀರಿ ಎಂದು ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಈ ಕಾರ್ಯಕ್ರಮಕ್ಕೆ ಅತಿಥಿಗಳ ವಾಸ್ತವ್ಯಕ್ಕೆ ಸ್ಟಾರ್ ಹೋಟೆಲ್ ಗಳಿಗಾಗಿ 85 ಕೋಟಿಯಷ್ಟು ಖರ್ಚು ಮಾಡಿದ್ದಾರೆ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ 4 ಗಂಟೆ ಆಗಮಿಸಿದ್ದಕ್ಕೆ ಜಾಹಿರಾತು ಹೊರತುಪಡಿಸಿ 48 ಕೋಟಿ ಖರ್ಚ ಮಾಡಲಾಗಿದೆ. ಇದು ಜನಸಾಮಾನ್ಯರ ಹಣವಾಗಿದೆ. ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ ಸರ್ಕಾರ ಎಂದು ಟೀಕಾಪ್ರಹಾರ ನಡೆಸಿದರು.


