ತಮಿಳುನಾಡಿನ ಕರೂರಿನಲ್ಲಿ ನಿರ್ಮಾಣ ಹಂತದ ಮನೆಯೊಂದರೆ ಸೆಪ್ಟಿಕ್ ಟ್ಯಾಂಕ್ ಗೆ ಆಸರೆಯಾಗಿದ್ದ ಮರದ ಹಲಗೆಗಳನ್ನು ತೆಗೆಯಲು ಇಳಿದ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಟ್ಟಡ ಕಾರ್ಮಿಕರಾದ ಮೋಹನ್ ರಾಜ್ ಮತ್ತು ರಾಜೇಶ್ ಸೆಪ್ಟಿಕ್ ಟ್ಯಾಂಕ್ ಗೆ ಒಳಗಿನಿಂದ ಆಸರೆಯಾಗಿದ್ದ ಮರದ ಹಲಗೆಗಳನ್ನು ತೆಗೆಯಲು ಪ್ರವೇಶಿಸಿದರು. ಇದ್ದಕ್ಕಿದ್ದಂತೆ ಇಬ್ಬರೂ ಟ್ಯಾಂಕ್ ಒಳಗಿನಿಂದ ಕೂಗಲು ಪ್ರಾರಂಭಿಸಿದರು.
ಅವರ ಕಿರುಚಾಟ ಕೇಳಿ ಸಮೀಪದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಸಹ ಕಾರ್ಮಿಕ ಶಿವಕುಮಾರ್ ಸ್ಥಳಕ್ಕೆ ಧಾವಿಸಿದಾಗ ಅವರು ಟ್ಯಾಂಕ್ ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದರು. ಆದರೆ ಅವರನ್ನು ರಕ್ಷಿಸಲು ಹೋದ ವ್ಯಕ್ತಿಯು ಸಹ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸ್ಥಳೀಯರು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದು ಅವರು ಮೂವರನ್ನು ಹೊರತೆಗೆದು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ ಅವರು ಮರಣ ಹೊಂದಿದ್ದಾರೆ ಎಂದು ಘೋಷಿಸಲಾಗಿದೆ.
ಕರೂರು ಪೊಲೀಸ್ ವರಿಷ್ಠಾಧಿಕಾರಿ ಸುಂದರವತನಂ ಅವರು ಸ್ಥಳ ಪರಿಶೀಲನೆ ನಡೆಸಿ ಕಟ್ಟಡ ಮಾಲಿಕ ಗುಣಶೇಖರನ್ ಅವರನ್ನು ವಿಚಾರಣೆ ನಡೆಸಿದರು.
ಎಂಟು ಅಡಿ ಎತ್ತರದ ಹೊಸದಾಗಿ ನಿರ್ಮಿಸಲಾದ ಸೆಪ್ಟಿಕ್ ಟ್ಯಾಂಕ್ ನಲ್ಲಿ ಮೊಣಕಾಲು ಆಳದ ನೀರು ತುಂಬಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಳೆ ನೀರು ಟ್ಯಾಂಕ್ ಗೆ ಹರಿದು ಹೋಗಿರಬಹುದು. ತೇವಾಂಶದ ಕಾರಣ ಹಳೆಯ ಮರದ ಹಲಗೆಗಳು ನೀರಿನಲ್ಲಿ ಬಿದ್ದಿರುವುದು ಕಂಡುಬಂದಿದೆ.
ಟ್ಯಾಂಕ್ ತುಂಬಾ ಹೊತ್ತು ಮುಚ್ಚಿದ್ದರಿಂದ ಹಲಗೆಗಳು ತೋಯ್ದು ಒಳಗಿನ ಗಾಳಿಯು ವಿಷಾನಿಲವಾಗಿದೆ. ಪರಿಣಾಮ ಕಾರ್ಮಿಕರು ಉಸಿರುಗಟ್ಟಿ ಸತ್ತಿರಬಹುದು ಎಂದು ಹೇಳಲಾಗಿದೆ.


