ಎರ್ನಾಕುಲಂನ ಮುಳಂತುರುವತ್ತಿಯಿಂದ ಶಾಲಾ ಪ್ರವಾಸಕ್ಕೆ ತೆರಳುತ್ತಿದ್ದ ಟೂರಿಸ್ಟ್ ಬಸ್ ಗುರುವಾರ ಮುಂಜಾನೆ ಪಾಲಕ್ಕಾಡ್ ನ ವಡಕ್ಕಂಚೇರಿಯಲ್ಲಿ ಕೆೆಎಸ್ಆರ್.ಟಿ.ಸಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿರುವ ಘಟನೆ ಜರುಗಿದೆ.
ದುರಂತದಲ್ಲಿ ಶಾಲಾ ಶಿಕ್ಷಕ ಮತ್ತು ಕೆಎಸ್ಆರ್.ಟಿ.ಸಿ ಬಸ್ ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ 12 ಮಂದಿಯನ್ನು ತ್ರಿಶೂರ್ ನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಪ್ರವಾಸಿ ಬಸ್ ಮುಳಂತುರುತಿಯ ಬಸೆಲಿಯೋಸ್ ವಿದ್ಯಾನಿಕೇತನ ಹಿರಿಯ ಮಾಧ್ಯಮಿಕ ಶಾಲೆಯ 41 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಊಟಿಗೆ ಕರೆದೊಯ್ಯುತ್ತಿತ್ತು ಎಂದು ತಿಳಿದುಬಂದಿದೆ.
ಚಾಲಕನ ನಿಯಂತ್ರಣ ತಪ್ಪಿ ಹಿಂದಿನಿಂದ ಕೆಎಸ್ಆರ್.ಟಿಸಿ ಬಸ್ ಗೆ ಡಿಕ್ಕಿ ಹೊಡೆಯುವ ಮುನ್ನ ಟೂರಿಸ್ಟ್ ಬಸ್ ಅತಿ ವೇಗದಿಂದ ಬರುತ್ತಿತ್ತು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಮೃತರನ್ನು ವಿಷ್ಣು ಕೆ.ವಿ.(33), ಅಂಜನಾ ಅಜಿತ್ (17), ಇಮ್ಯಾನುಯೆಲ್ ಸಿ.ಎಸ್. (17), ಕ್ರಿಸ್ ವಿಂಟರ್ ಬಾರ್ನ್ ಥಾಮಸ್ (15), ದಿಯಾ ರಾಜೇಶ್ (15) ಮತ್ತು ಎಲ್ನಾ ಜೋಸ್ (15) ಎಂದು ಗುರುತಿಸಲಾಗಿದೆ.
ಕೆಎಸ್ಆರ್.ಟಿಸಿಯಲ್ಲಿದ್ದ ಮೃತರನ್ನು ತ್ರಿಶೂರ್ ಮೂಲದ ರೋಹಿತ್ ರಾಜ್ (24), ಅನೂಪ್ (22), ಮತ್ತು ದೀಪು (25) ಎಂದು ಗುರುತಿಸಲಾಗಿದೆ.


