ನಾನು ಲಕ್ಕಿ ಸಿಎಂ ಏನೀಗ ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯಲ್ಲಿನ ಕುಟುಂಬ ಆಡಳಿತವನ್ನು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ಕರ್ನಾಟಕದಲ್ಲಿ ನೀವು ಅಧಿಕಾರಕ್ಕೆ ಬಂದಿದ್ದೇ ಜೆಡಿಎಸ್ ಕೃಪೆಯಿಂದ. ಸ್ವಪಕ್ಷವನ್ನೇ ಒಡೆದು ನನ್ನ ಜತೆ ಬರಲು ರೆಡಿ ಇದ್ದ ಆ ನಿಮ್ಮ ನಾಯಕರನ್ನು ನಾನೇ ತಡೆಯದೇ ಇದ್ದಿದ್ದರೆ, ನೀವು ಮತ್ತು ನಿಮ್ಮ ಪಕ್ಷ ಅವತ್ತೇ ನಡುನೀರಿನಲ್ಲಿ ಮುಳುಗಿಹೋಗುತ್ತಿದ್ದಿರಿ. ಅನುಮಾನ ಇದ್ದರೆ ಒಮ್ಮೆ ಅವರನ್ನೇ ಕೇಳಿ, ನನ್ನ ನಡುಕದ ಬಗ್ಗೆ ಆಮೇಲೆ ಮಾತನಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ ‘ನಿಮ್ಮ ಸಿಎಂ ಜನಾದೇಶ ಪಡೆದು ಮುಖ್ಯಮಂತ್ರಿಯಾಗಿದ್ದಾರೆಯೇ? ನಿಮ್ಮ ಮುಖ್ಯಮಂತ್ರಿಗಳು ಕೂಡ ಲಕ್ಕಿ ಸಿಎಂ ಎಂಬುದನ್ನು ಬಿಜೆಪಿ ಮುಖಂಡರು ಮರೆತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಈಗಲೂ ಬಿಜೆಪಿಯಲ್ಲಿ ಕುಟುಂಬ ಆಡಳಿತ ಮುಂದುವರೆದಿದೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಚೈನ್ ಲಿಂಕ್ ನಂತೆ ಇದೆ. ದೇಶಾದ್ಯಂತ ಹರಡಿರುವ ಬಿಜೆಪಿಯ ಕುಟುಂಬ ರಾಜಕಾರಣವನ್ನು ಬಿಚ್ಚಿಡಲೇ ಎಂದು ಕೇಳಿದ್ದಾರೆ.
ಯಡಿಯೂರಪ್ಪ ಅಂಡ್ ಸನ್ಸ್
ರವಿ ಸುಬ್ರಮಣ್ಯ-ತೇಜಸ್ವಿ ಸೂರ್ಯ
ಅಶೋಕ-ರವಿ
ವಿ ಸೋಮಣ್ಣ – ಅರುಣ್ ಸೋಮಣ್ಣ
ಅರವಿಂದ ಲಿಂಬಾವಳಿ -ರಘು
ಎಸ್.ಆರ್.ವಿಶ್ವನಾಥ್ – ವಾಣಿ ವಿಶ್ವನಾಥ್
ಜಗದೀಶ್ ಸೆಟ್ಟರ್ – ಪ್ರದೀಪ್ ಶೆಟ್ಟರ್
ಮರುಗೇಶ್ ನಿರಾಣಿ – ಹನುಮಂತ ನಿರಾಣಿ
ಜಿ.ಎಸ್.ಬಸವರಾಜು – ಜ್ಯೋತಿ ಗಣೇಶ್
ಜಾರಕಿಹೊಳಿ ಕುಟುಂಬ
ಕತ್ತಿ ಕುಟುಂಬ
ಜೊಲ್ಲೆ ಕುಟುಂಬ
ಅಂಗಡಿ ಕುಟುಂಬ
ಶ್ರೀರಾಮಲು ಕುಟುಂಬ
ರೆಡ್ಡಿ ಸಹೋದರರು
ನಿಮ್ಮ ಪರಿವಾರ ಪುರಾಣ ಇನ್ನೂ ಇದೆ. ಬಿಜೆಪಿ ಕುಟುಂಬ ಕೊಂಡಿಗಳ ಆಡಂಬೊಲ ಎನ್ನುವುದು ಗೊತ್ತಿದೆ. ರಾಷ್ಟ್ರವ್ಯಾಪಿ ವ್ಯಾಪಿಸಿರುವ ಕಮಲದ ಕುಟುಂಬವ್ಯಾದಿ ಕೊಂಡಿಗಳನ್ನು ಬಿಚ್ಚಬೇಕೇ? ನೀವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗೌರಿಶಂಕರದಷ್ಟು ಎತ್ತರ ಕಾಣುವ ಬಿಜೆಪಿ ಪರಿವಾರ ಪರ್ವತಗಳ ಬಗ್ಗೆ ಹೇಳಬೇಕಾದರೆ ಪರಿವಾರಕೋಟಿಯನ್ನೇ ಬರೆಯಬಹುದು ಎಂದು ಲೇವಡಿ ಮಾಡಿದ್ದಾರೆ.


