ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾಧ್ಯಕ್ಷ ಹಾಗೂ ನಿವೃತ್ತ ಪ್ರಾಧ್ಯಾಪಕ ಡಿ.ಚಂದ್ರಪ್ಪ ಇಂದು ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಕಳೆದ ಒಂದು ವಾರದಿಂದ ಮೇಜರ್ ಚಂದ್ರಪ್ಪ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ತುಮಕೂರು ನಗರದ ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಚಂದ್ರಪ್ಪ ಅವರು ಸಿದ್ದಗಂಗಾ ಪದವಿ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಉತ್ತಮ ಕೆಲಸ ಕೆಲಸ ಮಾಡಿದ್ದರು. ನಿವೃತ್ತಿ ನಂತರ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅವರ ಅವಧಿಯಲ್ಲಿ ಜನಸಾಮಾನ್ಯರಿಗೂ ಕನ್ನಡ ಸಾಹಿತ್ಯ ಪರಿಷತ್ ನ ಸದಸ್ಯರನ್ನಾಗಿ ಮಾಡಿದ್ದರು. ಗುಬ್ಬಿ ತಾಲೂಕಿನವರಾದ ಚಂದ್ರಪ್ಪ ಗುಬ್ಬಿ ತಾಲ್ಲೂಕಿನಲ್ಲಿ ಕಸಾಪಗೆ ಅತಿ ಹೆಚ್ಚು ಸದಸ್ಯತ್ವವನ್ನು ನೋಂದಾಯಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋಲನ್ನು ಕಂಡಿದ್ದರು. ಸಾಹಿತ್ಯ ಚಟುವಟಿಕೆಯಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದರು.
ಸದಾ ಚಟುವಟಿಕೆಯಿಂದ ಇದ್ದ ಚಂದ್ರಪ್ಪ ಅವರು ಎಲ್ಲರನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಕಳೆದ ವಾರ ಅನಾರೋಗ್ಯಕ್ಕೆ ತುತ್ತಾಗಿ ಸಿದ್ದಗಂಗಾ ಆಸ್ಪತ್ರೆಗೆ ದಾಖಲಾಗಿದ್ದರು.
ಮೃತರು ಮೂವರು ಹೆಣ್ಣು ಮಕ್ಕಳು, ಪತ್ನಿ ಮತ್ತು ಅಪಾರ ಬಳಗವನ್ನು ಅಗಲಿದ್ದಾರೆ. ಚಂದ್ರಪ್ಪ ಅವರ ಕಣ್ಣುಗಳನ್ನು ಅವರ ಕುಟುಂಬದವರು ದಾನ ಮಾಡಿದ್ದಾರೆ.