ಭಾಷಣದ ಆಯ್ದ ಭಾಗ
ನಮ್ಮ ಗಣರಾಜ್ಯದಲ್ಲಿ ಹಲವರ ತ್ಯಾಗ ಮತ್ತು ಬಲಿದಾನದಿಂದ ದೇಶದ ಮೌಲ್ಯಗಳನ್ನು ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಲಾಗಿದೆ. ಆದರೆ ಇಲ್ಲಿ ಏನಾಗುತ್ತಿದೆ. ಪ್ರಜಾತಾಂತ್ರಿಕ, ಗಣತಂತ್ರದ ಮೌಲ್ಯಗಳನ್ನು ನಾಶ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನಸಮೂಹ ಪ್ರಜಾಪ್ರಭುತ್ವ ಕ್ರಿಯೆಗಳಲ್ಲಿ ಭಾಗವಹಿಸಬೇಕು. ಚುನಾವಣೆಗಳು ಹೇಗೆ ನಡೆಯುತ್ತಿವೆ ಎಂಬುದನ್ನು ನಾವೆಲ್ಲ ನೋಡುತ್ತಿದ್ದೇವೆ. ಹಣ ಇರುವ ಬಲಾಢ್ಯರು ಮಾತ್ರ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ. ದೊಡ್ಡ ದೊಡ್ಡ ರ್ಯಾಲಿಗಳನ್ನು ಸಂಘಟಿಸುತ್ತಾರೆ. ಇಷ್ಟು ಬಸ್ ಗಳಲ್ಲಿ ಜನರನ್ನು ಕರೆತಂದರೆ ಅದಕ್ಕೆ ಅಭ್ಯರ್ಥಿಗಳು ಮತ್ತು ಪಕ್ಷಗಳು ಹಣ ನೀಡುತ್ತಾರೆ. ಹಣ ಇರುವವರ ಕಟೌಟ್ ಗಳು, ಬ್ಯಾನರ್, ಬಂಟಿಂಗ್ಸ್ ವಿಜೃಂಭಣೆಯಿಂದ ರಾರಾಜಿಸುತ್ತವೆ. ಆದರೆ ಒಳ್ಳೆಯ ವ್ಯಕ್ತಿಗಳು ತೆರೆ ಮರೆಗೆ ಸರಿಯುತ್ತಾರೆ. ಹೀಗಾಗಿ ಹಣವೇ ಎಲ್ಲವನ್ನು ನಿರ್ಧರಿಸುತ್ತದೆ. ಚುನಾವಣೆಯಲ್ಲಿ 50 ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತಿದೆ. ಇದನ್ನು ನೋಡಿಯೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದ್ದರಿಂದ ಅರೆಕಾಲಿಕವಾಗಿಯಾದರೂ ಜನರು ರಾಜಕೀಯದಲ್ಲಿ ಭಾಗಿಯಾಗಬೇಕು.
ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಇಂತಿಷ್ಟು ವೆಚ್ಚ ಮಾಡಬೇಕೆಂಬ ನಿಯಮಗಳು ಇದ್ದರೂ ಅದನ್ನು ಮೀರಿ 20-30ರಷ್ಟು ಹೆಚ್ಚು ಹಣ ವೆಚ್ಚ ಮಾಡಲಾಗುತ್ತಿದೆ. ಚುನಾವಣಾ ವಂತಿಗೆಯನ್ನು ರಾಜಕೀಯ ಪಕ್ಷಗಳು ಎಷ್ಟು ಬೇಕಾದರೂ ಸ್ವೀಕರಿಸಬಹುದು. ಅದಕ್ಕೆ ಮಿತಿ ಎಂಬುದು ಇಲ್ಲ. ಆಡಳಿತಾರೂಢ ಬಿಜೆಪಿಗೆ ಚುನಾವಣಾ ಬಾಂಡ್ ಗಳ ಶೇಕಡ 75ರಷ್ಟು ಬಾಂಡುಗಳು ಬಂದಿವೆ. ಅದು ಚುನಾವಣ ಬಾಂಡ್ ಸ್ವೀಕರಿಸುವ ಪಕ್ಷಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ಮಾತ್ರ ತಿಳಿಯುತ್ತದೆ. ಉಳಿದ ದೇಶದ ಜನರಿಗೆ ಇದು ಗೊತ್ತಾಗುವುದಿಲ್ಲ; ಇದೊಂದು ದೊಡ್ಡ ಚುನಾವಣಾ ಭ್ರಷ್ಟಾಚಾರವಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಚುನಾವಣಾ ದೇಣಿಗಗಳನ್ನು ಪಡೆದರೂ ಚುನಾವಣಾ ಆಯೋಗ ಈ ಬಗ್ಗೆ ಪ್ರಶ್ನೆ ಮಾಡುವುದಿಲ್ಲ.
ವಲಸೆ ಕಾರ್ಮಿಕರನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ. ಕೊರೊನ ಕಾಲದಲ್ಲಿ ಕೊರೊನ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಉದ್ಯೋಗ ಕಡಿತಗಳು ಆದವು. ಹಲವರು ಉದ್ಯೋಗ ಕಳೆದುಕೊಂಡರು. ಜನರು ಬೇಸತ್ತು ಹೋಗಿದ್ದರು. ಇಷ್ಟೆಲ್ಲ ದೋಷಗಳಿದ್ದರೂ ಬಿಜೆಪಿ ಚುನಾವಣೆಯಲ್ಲಿ ಹೇಗೆ ಗೆಲುವು ಸಾಧಿಸಿತು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ದೇಶದ ಯುವಕ-ಯುವತಿಯರು ನಿರುದ್ಯೋಗ ಸಮಸ್ಯೆ ಬಳಲುತ್ತಿದ್ದಾರೆ. ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಂತಹ ವ್ಯವಸ್ಥೆ ಇಲ್ಲ. ರೈಲ್ವೆ, ವಿಮೆ. ವಿಮಾನ ನಿಲ್ದಾಣ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದ್ದು ಕೆಲವೇ ಮಂದಿ ಕಾರ್ಪೋರೇಟ್ ಮಾಲಿಕರಿಗೆ ಅನುಕೂಲ ಮಾಡುತ್ತಿದ್ದು, ನಿರುದ್ಯೋಗ ಪ್ರಮಾಣ ಹೆಚ್ಚುವಂತೆ ಮಾಡಿದೆ. ದೇಶದಲ್ಲಿ 1 ಕೋಟಿ ಉದ್ಯೋಗಗಳ ಖಾಲಿ ಇವೆ. ಇವುಗಳನ್ನು ಭರ್ತಿ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಜೊತೆಗೆ ನಿರುದ್ಯೋಗಿ ಯುವಕ-ಯುವತಿಯರಿಗೆ ಕನಿಷ್ಟ 3 ಸಾವಿರ ನಿರುದ್ಯೋಗ ಭತ್ಯೆಯನ್ನು ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು.
ನಾಗರಿಕರು ಎಚ್ಚೆತ್ತುಕೊಳ್ಳುಬೇಕು. ರಾಜಕೀಯದಲ್ಲಿ ನಡೆಯುತ್ತಿರುವ ಭ್ರಷ್ಟಚಾರವನ್ನು ಪ್ರಶ್ನಿಸಬೇಕು. ಜನರಿಗೆ ತಿಳಿಸಬೇಕು. ಇದಕ್ಕಾಗಿ ದೊಡ್ಡ ಮಟ್ಟದ ಜನರ ತಂಡವನ್ನು ಕಟ್ಟಬೇಕು. ಅದು ವಿಚಕ್ಷಣಾ ದಳವಾಗಿ ಕೆಲಸ ಮಾಡಬೇಕು. ಸುಳ್ಳು ಮತ್ತು ಅಪಪ್ರಚಾರ ಮಾಡುತ್ತಿರುವುದಕ್ಕೆ ಪರ್ಯಾಯವಾಗಿ ಸತ್ಯವನ್ನು ಹೇಳಬೇಕು. ಪರ್ಯಾಯ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕು. ಜನರ ಬೇಡಿಕೆಗಳಿಗೆ ದೊಡ್ಡ ಪ್ರಚಾರ ಸಿಗಬೇಕು.
ಸರ್ಕಾರದಲ್ಲಿ ಉತ್ತರದಾಯಿತ್ವ ಇರಬೇಕು. ಆದರೆ ಅದರ ಬಗ್ಗೆ ಯಾರಿಗೂ ಕಾಳಜಿ ಇಲ್ಲವಾಗಿದೆ. ಉದಾಹರಣೆಗೆ ಲೋಕಪಾಲ್ ನೇಮಕದ ಬಗ್ಗೆ ದನಿ ಎತ್ತಿದೆ. ಬಿಜೆಪಿ ಚುನಾವಣೆಗಳಿಗೂ ಮೊದಲ ಲೋಕಪಾಲ್ ನೇಮಕದ ಬಗ್ಗೆ ದೊಡ್ಡ ದನಿ ಮಾಡಿತು. ಆದರೆ ಗೆದ್ದ ಮೇಲೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ತಿರುಗಿಯೂ ನೋಡಲಿಲ್ಲ. ನಾಗರಿಕರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದರಿಂದ ಬಿಜೆಪಿ ಸರ್ಕಾರ ಭ್ರಷ್ಟ ವ್ಯಕ್ತಿಯನ್ನು ತಂದು ಲೋಕಪಾಲರನ್ನಾಗಿ ನೇಮಕ ಮಾಡಿದೆ. ಪರಿಸ್ಥಿತಿ ಹೀಗಿದ್ದರೆ ಯಾರಿಗೆ ದೂರು ನೀಡಬೇಕು. ಭ್ರಷ್ಟಾಚಾರ ಮಾಡಿರುವ ವ್ಯಕ್ತಿಯೇ ಲೋಕಪಾಲರಾದರೆ ಏನು ಮಾಡುವುದು? ಜನರಿಗೂ ಲೋಕಪಾಲ ಬಗ್ಗೆ ಬೇಸರವಿದೆ. ಹೀಗಾಗಿ ನಾವು ಉತ್ತರದಾಯಿತ್ವ ಹೋರಾಟವನ್ನು ರೂಪಿಸಬೇಕಾಗಿದೆ. ಉತ್ತರದಾಯಿತ್ವ ಕೇವಲ ರಾಜಕೀಯ ಪಕ್ಷಗಳಿಗೆ ಮಾತ್ರ ಇರುವುದಲ್ಲ. ರಾಜಕೀಯ ಪ್ರತಿನಿಧಿಗಳಿಗೂ ಉತ್ತರದಾಯಿತ್ವ ಇರಬೇಕು. ಚುನಾಯಿತ ಪ್ರತಿನಿಧಿಗಳು ಎಷ್ಟು ಕೆಲಸ ಮಾಡಿದ್ದಾರೆ. ಸಂಸತ್ತಿನಲ್ಲಿ ಯಾರ ವಿರುದ್ಧವಾಗಿ ಮತ ಚಲಾಯಿಸಿದರು. ಯಾವ ವಿಷಯದ ಕುರಿತು ಚರ್ಚೆಯಲ್ಲಿ ಭಾಗಿಯಾದರು. ನಮಗೆ ನೀಡಿದ ಭರವಸೆಗಳನ್ನು ಪೂರಾ ಈಡೇರಿಸಿಲ್ಲ. ಅದಕ್ಕಾಗಿ ಇದು ನಮ್ಮ ಪ್ರೋಗ್ರೆಸ್ ಕಾರ್ಡು ಎಂದು ಜನಪ್ರತಿನಿಧಿಗಳಿಗೆ ಸಲ್ಲಿಸಬೇಕು. ಅದನ್ನೇ ಈಡೇರಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರಶ್ನಿಸಬೇಕು.
ವೇದಿಕೆಯಲ್ಲಿ ಸಮಾಜ ಪರಿವರ್ತನ ವೇದಿಕೆ ಮುಖ್ಯಸ್ಥ ಎಸ್.ಆರ್. ಹೀರೇಮಠ್, ಪರಿಸರವಾದಿ ಸಿ.ಯತಿರಾಜ್, ಗಾಂಧೀವಾದಿ ಎಂ.ಬಸವಯ್ಯ, ಜನಸಂಗ್ರಾಮ ಪರಿಷತ್ ಜಿಲ್ಲಾಧ್ಯಕ್ಷ ಪಂಡಿತ್ ಜವಹಾರ್, ಪುಟ್ಟಕಾಮಣ್ಣ ಇದ್ದರು.
ಕೆ.ಈ.ಸಿದ್ದಯ್ಯ


