ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜಿಲ್ಲಾ-ಕೊವಿಡ್ ಉಸ್ತುವಾರಿಗಳನ್ನಾಗಿ ಸಚಿವರನ್ನು ನೇಮಕ ಮಾಡಿದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸಚಿವರಿಗೆ ತವರು ಜಿಲ್ಲೆಗಳನ್ನು ಬಿಟ್ಟು ಬೇರೆ ಜಿಲ್ಲೆಗಳ ಉಸ್ತುವಾರಿಗಳನ್ನಾಗಿ ನೇಮಕ ಮಾಡಿರುವುದೇ ಹಲವು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ.
ಸಚಿವರಿಗೆ ಆಯಾ ಜಿಲ್ಲೆಯ ಉಸ್ತುವಾರಿ ವಹಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವು ಇರುತ್ತದೆ. ಎಲ್ಲೆಲ್ಲಿ ಯಾವ ಕೆಲಸ ಬಾಕಿ ಉಳಿದಿದೆ. ಅಭಿವೃದ್ಧಿಯ ಬಗ್ಗೆ ಕಣ್ಣೋಟ ಇರುತ್ತದೆ. ಬೇರೆ ಜಿಲ್ಲೆಗಳಿಗೆ ಹೋದರೆ ಕೇವಲ ಕೆಡಿಪಿ ಸಭೆ ನಡೆಸಿ ಬರಬೇಕು. ಅಧಿಕಾರಿಗಳು ಕೊಟ್ಟ ಅಂಕಿಅಂಶಗಳನ್ನು ನೋಡಿಕೊಂಡು ಬರಬೇಕು ಅಷ್ಟೇ. ಅದರ ಆಚೆಗೆ ಜಿಲ್ಲೆಯ ಪೂರ್ಣ ಮಾಹಿತಿ ಇರುವುದಿಲ್ಲ ಎಂಬ ನೋವು ಸಚಿವ ಮಾಧುಸ್ವಾಮಿ ಅವರದ್ದು.
ಆಯಾ ಜಿಲ್ಲೆಯಲ್ಲಿರುವ ಸಚಿವರಿಗೆ ಅವರ ಜಿಲ್ಲೆಗೆ ಉಸ್ತುವಾರಿ ವಹಿಸಿದರೆ ಜಿಲ್ಲೆಯ ಸಮಗ್ರ ಮಾಹಿತಿ ಇರುತ್ತದೆ. ಕೆಡಿಪಿ ಸಭೆಗಳಲ್ಲಿ ಭಾಗಿಯಾಗಿ ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಸಹಕಾರಿಯಾಗುತ್ತದೆ. ಆದರೆ ಬೇರೆ ಜಿಲ್ಲೆಗಳ ಉಸ್ತುವಾರಿ ವಹಿಸಿದರೆ ಅಧಿಕಾರಿಗಳು ನೀಡಿದ ಮಾಹಿತಿಯನ್ನೇ ಸತ್ಯವೆಂದು ನಂಬಿ ಕೆಡಿಪಿ ಸಭೆ ನಡೆಸಿ ಬರಬೇಕು. ಇನ್ನೇನು ಪರಿಶೀಲಿಸಲು ಆಗುವುದಿಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.
ಅಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ತನಗೆ ತುಮಕೂರು ಜಿಲ್ಲಾ ಉಸ್ತುವಾರಿ ನೀಡಬೇಕು ಎಂಬುದನ್ನು ಒತ್ತಿಹೇಳಿದ್ದಾರೆ.
ವಸತಿ ಸಚಿವ ಸೋಮಣ್ಣ ಮುಖ್ಯಮಂತ್ರಿಗಳ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡರೂ ಒಳಗೆ ಅಸಮಾಧಾನ ಹೊಗೆ ಆಡುತ್ತಿರುವುದನ್ನು ತೋರಿಸಿಕೊಳ್ಳುತ್ತಿಲ್ಲ. ಮೂಟೆ ಹೊರುವವರಿಗೆ ಎಲ್ಲಿಯಾದರೇನು? ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದಕ್ಕೆ ಅಸಮಾಧಾನ ಹೊರಹಾಕಿರುವುದು ಅವರ ಮಾತುಗಳಲ್ಲೇ ವ್ಯಕ್ತವಾಗಿದೆ. ಸಚಿವ ಸೋಮಣ್ಣ ಅವರಿಗೆ ತುಮಕೂರು ಉಸ್ತುವಾರಿ ವಹಿಸಬೇಕಾಗಿತ್ತು ಎಂಬುದು ಹಲವರ ಅಭಿಪ್ರಾಯ. ಹಾಗಾಗಿ ಸಚಿವ ವಿ. ಸೋಮಣ್ಣ ಕೂಡ ಬೇರೆ ರೀತಿಯಲ್ಲಿ ಬೇಸರ ಹೊರಹಾಕಿದ್ದಾರೆ.
ಸಚಿವ ಎಂಟಿಬಿ ನಾಗರಾಜ್ ಚಿಕ್ಕಬಳ್ಳಾಪುರ ಉಸ್ತುವಾರಿ ಬೇಡ ಎಂದಿದ್ದಾರೆ ಮತ್ತು ತನಗೆ ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಬೇಕು ಎಂದು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಬೇಸರ ತೋಡಿಕೊಂಡಿದ್ದಾರೆ. ಇದು ಕೂಡ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ದೃಢೀಕರಿಸಿದೆ.
ಉಸ್ತುವಾರಿ ಸಚಿವರ ನೇಮಕದಲ್ಲಿ ಮೂಲ ಬಿಜೆಪಿ ಸಚಿವರಿಗೆ ಹೆಚ್ಚಿನ ಮಣೆ ಹಾಕಲಾಗಿದೆ. ವಲಸಿಗರನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಸಚಿವ ಡಾ.ಕೆ.ಸುಧಾಕರ್ ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ವಹಿಸಿರುವುದರ ಹಿಂದೆ ಬೇರೆ ಕಾರಣಗಳು ಇವೆ ಎಂದು ವಿಶ್ಲೇಷಿಸಲಾಗುತ್ತಿದೆ. ಎಂಟಿಬಿ ನಾಗರಾಜು ಮತ್ತು ಡಾ.ಸುಧಾಕರ್ ನಡುವೆ ಉತ್ತಮ ಸಂಬಂಧ ಇದೆ. ಅದು ಮುಂದೆಯೂ ಹೀಗೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ ತಾತ್ಕಾಲಿಕವಾಗಿದ್ದು, ಸಂಪುಟ ವಿಸ್ತರಣೆ, ಪುನರ್ ರಚನೆ ಸಂದರ್ಭದಲ್ಲಿ ಇದು ಬದಲಾವಣೆ ಆಗುವ ಸಾಧ್ಯತೆ ಇದೆ.
ಕೆ.ಈ.ಸಿದ್ದಯ್ಯ


