ಯಾವುದೇ ಪಕ್ಷ ತನಗೆ ಬೆಂಬಲ ನೀಡಿದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಗೋರಖ್ ಪುರದಿಂದ ಸ್ಪರ್ಧಿಸಲು ಸಿದ್ದ ಎಂದು ಮಕ್ಕಳ ವೈದ್ಯ ಡಾ.ಕಫೀಲ್ ಖಾನ್ ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ 9ರಂದು ಡಾ.ಖಾನ್ ಅವರನ್ನು ಸೇವೆಯಿಂದ ವಜಾಗೊಳಿಸಿದ್ದು ಅದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ. ನಾನು ಆದಿತ್ಯನಾಥ್ ವಿರುದ್ಧ ಗೋರಖ್ ಪುರದಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದು ಬಿಜೆಪಿ ಹೊರತುಪಡಿಸಿ ಯಾವುದೇ ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧೆಗೆ ಸಿದ್ದ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂಬ ಬಗ್ಗೆ ಮಾತುಕತೆ ನಡೆಯುತ್ತಿದೆ. ಎಲ್ಲವೂ ಸರಿಯಾಗಿ ನಡೆದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು.
ನಾನು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದೇನೆ ಮತ್ತು ಪ್ರಸ್ತುತ ನಾನು ಮುಂಬೈನಲ್ಲಿದ್ದೇನೆ. ಅಲ್ಲಿಂದ ನಾನು ನನ್ನ ಪುಸ್ತಕದ ಪ್ರಚಾರಕ್ಕಾಗಿ ಹೈದರಾಬಾದ್ ಮತ್ತು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿರುವ ಖಾನ್, ಗೋರಖ್ ಪುರ ಆಸ್ಪತ್ರೆ ದುರಂತ-ಎ ಡಾಕ್ಟರ್ಸ್ ಮೆಮೊಯಿರ್ ಆಫ್ ಎ ಡೆಡ್ಲಿ ಮೆಡಿಕಲ್ ಕ್ರೈಸಿಸ್ ಪುಸ್ತಕದ 5000 ಪ್ರತಿಗಳು ಮಾರಾಟವಾಗಿದ್ದು ಉತ್ತಮ ಮಾರಾಟವಾಗಿದೆ ಎಂದು ಹೇಳಿದ್ದಾರೆ.
ಕಫೀಲ್ ಅವರನ್ನು ಜನವರಿ 2020ರಲ್ಲಿ ಬಂಧಿಸಲಾಯಿತು ಮತ್ತು ಅಲಿಘರ್ ಮುಸ್ಲೀಂ ವಿಶ್ವವಿದ್ಯಾನಿಲಯದಲ್ಲಿ ಅವರ ಪ್ರಚೋದನಕಾರಿ ಭಾಷಣಕ್ಕಾಗಿ ಎನ್ಎಸ್ಎ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಅಲಹಾಬಾದ್ ಹೈಕೋರ್ಟ್ ಅವರ ವಿರುದ್ಧ ಎನ್ಎಸ್ಎ ಆರೋಪವನ್ನು ಕೈಬಿಡುವ ಮೊದಲು ಐದು ತಿಂಗಳು ಜೈಲಿನಲ್ಲಿ ಕಳೆದರು.


