ತುಮಕೂರು ಸಂಸದ ಜಿ.ಎಸ್. ಬಸವರಾಜು ಮತ್ತು ಸಚಿವ ಬೈರತಿ ಬಸವರಾಜು ಮಾಧ್ಯಮಗೋಷ್ಠಿಯಲ್ಲಿ ಗುಸುಗುಸು ಮಾತಿನ ವೈರಲ್ ವಿಡಿಯೋ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತುಮಕೂರಿನಲ್ಲಿ ನಡೆದ ಸಮಾರಂಭದಲ್ಲಿ ಸಚಿವರು ಕರೆದರೂ ಕೂರದೆ ಕೋಪದಿಂದ ಹೋದ ಘಟನೆ ಜನವರಿ 6ರಂದು ನಡೆದಿದೆ.
ತುಮಕೂರಿನ ಎಂಪ್ರೆಸ್ ಕಾಲೇಜಿನಲ್ಲಿ ಕೊಠಡಿ ಮತ್ತು ಆಡಿಟೋರಿಯಂ ಉದ್ಘಾಟನಾ ಸಮಾರಂಭ ಏರ್ಪಡಿಸಿತ್ತು. ಕಾರ್ಯಕ್ರಮಕ್ಕೆ ಎಂಪ್ರೆಸ್ ಕಾಲೇಜಿನ ಉಪನ್ಯಾಸಕರೊಬ್ಬರು ಶಾಸಕ ಜ್ಯೋತಿಗಣೇಶ್ ಅವರಿಗೆ ಸ್ವಾಗತ ಕೋರಿದ್ದಾರೆ. ನಂತರ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೂ ಸ್ವಾಗತ ಕೋರಲಾಗಿದೆ.
ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ಸಚಿವ ಬೈರತಿ ಬಸವರಾಜ್ ಬನ್ನಿ ಕುಳಿತುಕೊಳ್ಳಿ ಎಂದು ಪಕ್ಕದ ಕುರ್ಚಿಯನ್ನು ತೋರಿಸಿದರು. ಅಷ್ಟೊತ್ತಿಗೆ ವೈರಲ್ ವಿಡಿಯೋ ಜೆ.ಸಿ.ಮಾಧುಸ್ವಾಮಿ ಅವರ ಮೊಬೈಲ್ ಗೂ ಬಂದಿತ್ತು. ಆ ವಿಡಿಯೋವನ್ನು ಸಚಿವರ ಬೈರತಿ ಬಸವರಾಜ್ ಅವರಿಗೆ ತೋರಿಸಿ ಏನ್ರಿ ಇದು ಕೋಪ ತೋರಿಸಿದರು ಎಂದು ಹೇಳಲಾಗಿದೆ.
ಹೋಗಲಿ ಬನ್ನಿ ಕುಳಿತುಕೊಳ್ಳಿ ಎಂದು ಬೈರತಿ ಬಸವರಾಜು ಹೇಳುತ್ತಿದ್ದಂತೆಯೇ ಕೋಪೋದ್ರಿಕ್ತರಾದ ಮಾಧುಸ್ವಾಮಿ ವೇದಿಕೆಯ ಮೇಲೆ ಕೂರದೆ ಹೊರಟು ಹೋದರೆಂದು ಹೇಳಲಾಗಿದೆ. ಸಭಿಕರು ಇದೇನೆಂದು ತಿಳಿಯದೆ ಬೆರಗುಗಣ್ಣಿನಿಂದ ನೋಡುತ್ತಿದ್ದರು ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದವರು ನ್ಯೂಸ್ ಕಿಟ್ ಗೆ ತಿಳಿಸಿದ್ದಾರೆ.
ವೈರಲ್ ವಿಡಿಯೋ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕೆರಳುವಂತೆ ಮಾಡಿದೆ. ಆ ಕಾರಣಕ್ಕಾಗಿಯೇ ಶಾಸಕ ಜ್ಯೋತಿ ಗಣೇಶ್ ಅವರ ಕಡೆ ಗುರುಗುಟ್ಟಿಕೊಂಡು ನೋಡುತ್ತಾ ಈ ಕಾರ್ಯಕ್ರಮವೇ ಬೇಡವೆಂದು ಕಾರು ಏರಿ ಹೋದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಜೋಕ್:
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಾಧುಸ್ವಾಮಿ ಅವರಿಗೆ ತಿಳಿಸದೆ ಸಣ್ಣನೀರಾವರಿ ಖಾತೆಯಿಂದ ಕೈಬಿಟ್ಟಿದ್ದರು. ಇದೇ ಸಂದರ್ಭದಲ್ಲಿ ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಭಾಗಿಯಾಗಿದ್ದರು. ಆದರೆ ಆ ಕಾರ್ಯಕ್ರಮಕ್ಕೆ ಸಣ್ಣ ನೀರಾವರಿ ಖಾತೆ ವಂಚಿತ ಸಚಿವ ಮಾಧುಸ್ವಾಮಿ ಗೈರಾಗಿದ್ದರು.
ಅಷ್ಟೇ ಅಲ್ಲ, ಅದೇ ದಿನ ವಸಂತನರಸಾಪುರದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಅಲ್ಲಿಗೆ ಕೇಂದ್ರ ಸಚಿವ ಸದಾನಂದಗೌಡ ಬಂದಿದ್ದರು. ಜಿ.ಎಸ್.ಬಸವರಾಜು ಮತ್ತು ಜೆ.ಸಿ.ಮಾಧುಸ್ವಾಮಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಡಿಯೂರಪ್ಪನವರ ವಿರುದ್ಧ ಸೇಡು ತೀರಿಸಿಕೊಂಡಿದ್ದರು.
ಆ ಸಂದರ್ಭದಲ್ಲಿ ಜೆ.ಸಿ.ಮಾಧುಸ್ವಾಮಿ ಮತ್ತು ಸಂಸದ ಬಸವರಾಜು ಅತ್ಯಂತ ಸಂತೋಷದಿಂದ ಜೊತೆಯಲ್ಲೇ ನಿಂತು ಫೋಟೋಕ್ಕೆ ಫೋಜು ಕೊಟ್ಟಿದ್ದರು. ಈಗ ಅದು ಉಲ್ಟಾ ಆಗಿದೆ.