ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 117 ಕ್ಷೇತ್ರಗಳಲ್ಲೂ ಸ್ಪರ್ಧಿಸಲು 22 ರೈತ ಸಂಘಟನೆಗಳು ನಿರ್ಧರಿಸಿವೆ. ರೈತ ನಾಯಕರು ಸಂಯುಕ್ತ ಸಮಾಜ ಮೋರ್ಚಾ ಪಕ್ಷ ಸ್ಥಾಪಿಸಿಕೊಂಡಿದ್ದು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬಹುದೆಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದನ್ನು ರೈತ ನಾಯಕರು ನಿರಾಕರಿಸಿದ್ದಾರೆ
ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ವರ್ಷಪೂರಾ ಪ್ರತಿಭಟನೆ ನಡೆಸಿದ 32 ರೈತ ಸಂಘಟನೆಗಳ ಪೈಕಿ 22 ರೈತ ಸಂಘಗಳು ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದು ಸಂಯುಕ್ತ ಸಮಾಜ ಮೋರ್ಚಾ ಪಕ್ಷವನ್ನು ಸ್ಥಾಪಿಸಿಕೊಂಡಿದೆ.
ನಾವು ಕೃಷಿ ಕಾನೂನುಗಳ ವಿರುದ್ದ ಪ್ರತಿಭಟನೆ ಮಾಡಿ ಯಶಸ್ವಿಯಾಗಿದ್ದೇವೆ. ನಾವು ಹಿಂತಿರುಗಿದಾಗ ಒತ್ತಡವಿತ್ತು. ನಾವು ಆ ಯುದ್ದವನ್ನು ಗೆಲ್ಲಲು ಸಾಧ್ಯವಾದರೆ ಚುನಾವಣೆಯನ್ನೂ ಕೂಡ ಗೆಲ್ಲುತ್ತೇವೆ ಎಂದು ಬಿಕೆಯು ಬಣದ ನಾಯಕ ಹರ್ಮೀತ್ ಸಿಂಗ್ ಕಡಿಯನ್ ಹೇಳಿಕೆಯನ್ನು ಉಲ್ಲೇಖಿಸಿ ಎನ್.ಡಿ.ಟಿವಿ ವರದಿ ಮಾಡಿದೆ.
ಇದು ಮೋರ್ಚಾ ಅಥವಾ ಚಳವಳಿ, ಪಕ್ಷವಲ್ಲ. ಏಕೆಂದರೆ ಮತ್ತೆ ವಿಭಿನ್ನ ಸಿದ್ದಾಂತಗಳ ಜನರು ಒಟ್ಟಿಗೆ ಸೇರಿದ್ದಾರೆ. ನಾವು ಚುನಾವಣೆಯಲ್ಲಿ ಸ್ಪರ್ಧಿಸಲು ಮೊದಲೇ ನಿರ್ಧರಿಸಿದ್ದರೆ ನಾವು ಚಿಹ್ನೆಯನ್ನು ಘೋಷಿಸುತ್ತಿದ್ದೆವು ಎಂದು ಹೇಳಿದ್ದಾರೆ.
ಮೊದಲು ನಾವು ನಮ್ಮ ಪಕ್ಷವನ್ನು ಗ್ರಾಮ ಮಟ್ಟದಲ್ಲಿ ಬಲಪಡಿಸಬೇಕು. ಎಎಸ್ಎಂ-ಎಎಪಿ ಒಪ್ಪಂದದ ಚರ್ಚೆ, ಮಾತುಕತೆ ಈಗ ಬೇಡ. ಇದು ಕೇವಲ ಮಾಧ್ಯಮಗಳ ಊಹಾಪೋಹ ಎಂದು ಬಿ.ಎಸ್.ರಾಜೇವಾಲ್ ತಿಳಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಉಗ್ರನ್), ಅವರು ಮತ ಮತ್ತು ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಬದಲು ರೈತರ ಬೇಡಿಕೆಗಳನ್ನು ಸಾಧಿಸುವ ಹೋರಾಟದತ್ತ ಗಮನಹರಿಸಬೇಕು ಎಂದು ನಂಬುತ್ತೇವೆ ಎಂದು ಟ್ವೀಟ್ ಮಾಡಿದೆ.


