ಪ್ರೇರಿತ ಮತ್ತು ಉದ್ದೇಶಿತ ದಾಳಿಯಿಂದ ನ್ಯಾಯಾಂಗ ವ್ಯವಸ್ಥೆಯಿಂದ ರಕ್ಷಿಸಲು ವಕೀಲರು ಮುಂದಾಗಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಕರೆ ನೀಡಿದರು.
ನ್ಯಾಯಾಧೀಶರು ಮತ್ತು ನ್ಯಾಯಾಂಗ ಸಂಸ್ಥೆಗೆ ವಕೀಲರು ಸಹಾಯ ಮಾಡಬೇಕು. ನಾವೆಲ್ಲರೂ ಅಂತಿಮವಾಗಿ ಒಂದು ದೊಡ್ಡ ಕುಟುಂಬದ ಭಾಗವಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಪ್ರೇರಿತ ಮತ್ತು ಉದ್ದೇಶಿತ ದಾಳಿಗಳಿಂದ ಸಂಸ್ಥೆಯನ್ನು ರಕ್ಷಿಸಬೇಕು. ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಸ್ಪಷ್ಟಪಡಿಸಲು ಹಿಂಜರಿಯಬೇಡಿ ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಎನ್.ವಿ.ರಮಣ, ಸಂವಿಧಾನದ ಮುಖ್ಯ ಲಕ್ಷಣವೇ ಚರ್ಚೆಗೆ ಅವಕಾಶ ನೀಡುವುದು ಆಗಿದೆ. ಇಂತಹ ಚರ್ಚೆಯ ಮೂಲಕವೇ ದೇಶ ಪ್ರಗತಿ ಹೊಂದುತ್ತದೆ, ವಿಕಾಸಗೊಳ್ಳುತ್ತದೆ ಮತ್ತು ಜನರ ಕಲ್ಯಾಣವನ್ನು ಸಾದಿಸುತ್ತದೆ ಎಂದು ಹೇಳಿದರು.
ಈ ಪ್ರಕ್ರಿಯೆಯಲ್ಲಿ ಅತ್ಯಂತ ನೇರವಾಗಿ ಭಾಗಿಯಾಗುವವರು ವಕೀಲರು ಮತ್ತು ನ್ಯಾಯಾಧೀಶರು ಎಂದು ತಿಳಿಸಿದರು.
ಸಂವಿಧಾನ ಮತ್ತು ಕಾನೂನುಗಳ ನಿಟಕ ಜ್ಞಾನ ಹೊಂದಿರುವ ವಕೀಲರು ಸಮಾಜದಲ್ಲಿ ಅವರು ವಹಿಸುವ ಪಾತ್ರದ ಬಗ್ಗೆ ಉಳಿದ ನಾಗರಿಕರಿಗೆ ತಿಳಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದರು. ಈ ದೇಶದ ಇತಿಹಾಸ, ವರ್ತಮಾನ ಮತ್ತು ಭವಿಷ್ಯವು ನಿಮ್ಮ ಹೆಗಲ ಮೇಲಿದೆ. ಇದು ಭಾರವಾದ ಹೊರೆಯಾಗಿದೆ ಎಂದು ಹೇಳಿದರು.
ವಕೀಲ ವೃತ್ತಿಯನ್ನು ಒಂದು ಕಾರಣಕ್ಕಾಗಿ ಉದಾತ್ತ ವೃತ್ತಿ ಎಂದು ಕರೆಯಲಾಗುತ್ತದೆ. ಇದು ಇತರ ಯಾವುದೇ ವೃತ್ತಿಯಂತೆ ಪರಿಣತಿ, ಅನುಭವ ಮತ್ತು ಬದ್ಧತೆಯನ್ನು ಬಯಸುತ್ತದೆ. ಇವುಗಳ ಜೊತೆಗೆ ಸಮಗ್ರತೆ, ಸಾಮಾಜಿಕ ಸಮಸ್ಯಗಳ ಜ್ಞಾನ, ಸಾಮಾಜಿಕ ಜವಾಬ್ದಾರಿ ಮತ್ತು ನಾಗರಿಕ ಸದ್ಗುಣವು ಅಗತ್ಯವಾಗಿರುತ್ತದೆ. ಹಾಗಾಗಿ ಸಾಧ್ಯವಾದಾಗಲೆಲ್ಲಾ ಪ್ರಕರಣಗಳನ್ನು ಕಯಗೆತ್ತಿಕೊಳ್ಳುವಂತೆ ಸಲಹೆ ನೀಡಿದರು.


