ಪದ್ಮಭೂಷಣ ಡಾ.ರಾಜ್ ಕುಮಾರ್ ಅವರು ಹಾಡಿದ್ದ ಆಡಿಸಿ ನೋಡು ಬೀಳಿಸಿ ನೋಡು ಹಾಡನ್ನು ಸ್ವಲ್ಪ ಬದಲಾಯಿಸಿ ಆಡಿಸಿಯೇ ನೋಡು, ಬೀಳಿಸಿಯೇ ನೋಡ, ಎಂದೂ ಉರುಳಿ ಹೋಗದೂ, ಎಂದು ಸೋತು ತಲೆಯ ಬಾಗದೂ….ಹಾಡನ್ನು ಗಾಯಕ ವಿಜಯ ಪ್ರಕಾಶ ಹಾಡಿದ್ದರು. ಇದು ಅಪ್ಪು ಅವರಿಗೆ ಅಚ್ಚುಮೆಚ್ಚಿನ ಹಾಡಾಗಿತ್ತು. ಅಪ್ಪು ಬದುಕಿನ ಕ್ಷಣಗಳನ್ನು ಮತ್ತು ಡಾ.ರಾಜ್ ಜೀವನದ ನೆನಪುಗಳನ್ನು ಮೆಲುಕುಹಾಕುವುದು… ಅಪ್ಪುವಿನಲ್ಲಿ ರಾಜಕುಮಾರನನ್ನೇ ನೋಡುವ ರೀತಿಗೆ ಈ ಹಾಡು ಎಲ್ಲರ ಮನ ಸೆಳೆದಿತ್ತು.
ಪುನೀತ್ ರಾಜ್ ಕುಮಾರ್ ಭಾಗವಹಿಸುತ್ತಿದ್ದ ಎಲ್ಲಾ ಕಾರ್ಯಕ್ರಮಗಳಲ್ಲೂ ಈ ಹಾಡಿನ ಹಿನ್ನೆಲೆ ಗಾಯನ ಇರುತ್ತಿತ್ತು. ಆದರೆ ಇಂದು ಆ ರಾಜಕುಮಾರ ಇಲ್ಲದಿರುವುದು ಕನ್ನಡ ನಾಡು ಕಂಬನಿ ಮಿಡಿಯುವಂತೆ ಮಾಡಿದೆ. ಶೋಕ ಎಲ್ಲೆಡೆ ಆವರಿಸಿದೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಇನ್ನು ಮಧ್ಯವಯಸ್ಸಿನಲ್ಲೇ ಕನ್ನಡ ಚಿತ್ರಲೋಕದಿಂದ ಕಣ್ಮರೆಯಾಗಿರುವ ಪುನೀತ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ, ತೆಲುಗು, ಮಲೆಯಾಳಂ ಮತ್ತು ತಮಿಳು ಚಿತ್ರರಂಗವೂ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್ ನಿಧನದಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ. ಕನ್ನಡಿಗರ ಮೆಚ್ಚಿನ ನಟ ಅಪ್ಪು ನಿಧನದಿಂದ ಕನ್ನಡ ಮತ್ತು ಕರ್ನಾಟಕಕ್ಕೆ ಅಪಾರ ನಷ್ಟವಾಗಿದೆ. ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯುವ ನಟ ಪುನೀತ್ ರಾಜ್ ಕುಮಾರ್ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ನಟನಾ ಕೌಶಲದ ಜೊತೆ ಸರಳ ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮನೆ ಮಗನಂತಿದ್ದ ಪುನೀತ್ ಸಾವು ತುಂಬಿಬಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗುದೇಶ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಪುನೀತ್ ಸಾವಿಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಬೃಹತ್ ಪ್ರಮಾಣದ ನಷ್ಟವಾಗಿದೆ. ನಾನು ಹೃದಯಪೂರ್ವಕ ಸಂತಾಪ ಸೂಚಿಸುತ್ತೇನೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಪುನೀತ್ ಇನ್ನಿಲ್ಲವೆಂಬ ಸುದ್ದಿ ನಂಬಲು ಸಾಧ್ಯವಾಗುತ್ತಿಲ್ಲ. ಹೇಳಲು ಮಾತುಗಳು ಬರುತ್ತಿಲ್ಲ, ಒಮ್ಮೆ ಅನಿಸುವುದು ದೇವರು ಎಷ್ಟು ಕ್ರೂರಿ ಎಂದು. ನಿಮ್ಮ ಕುಟುಂಬ ಹಾಗೂ ಅಪಾರ ಅಬಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡ ಪುನೀತ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.