ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದ ರೈತರು ದೆಹಲಿ ಪ್ರವೇಶಿಸಿದಂತೆ ದೆಹಲಿಯ ಸಿಂಘು, ಟೆಕ್ರಿ ಗಡಿಯ ರಸ್ತೆಗಳಲ್ಲಿ ನಿರ್ಮಿಸಿದ್ದ ಬ್ಯಾರಿಕೇಡ್ ಗಳನ್ನು ಪೊಲೀಸರು ಶುಕ್ರವಾರ ತೆರವುಗೊಳಿಸು ಕಾರ್ಯದಲ್ಲಿ ನಿರತರಾಗಿದ್ದಾರೆ.
ಒಕ್ಕೂಟ ಸರ್ಕಾರ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗಿತ್ತು. ಈ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಹರ್ಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ಸಹಸ್ರಾರು ರೈತರು ಪ್ರತಿಭಟನೆ ನಡೆಸಿದ್ದರು.
ಈ ಮೂರು ರಾಜ್ಯಗಳಿಂದ ಅಲ್ಲದೆ ಬೇರೆ ರಾಜ್ಯಗಳಿಂದಲೂ ರೈತರು ದೆಹಲಿಗೆ ಮುತ್ತಿಗೆ ಹಾಕಲು ದೆಹಲಿಯ ಮೂರು ಗಡಿಗಳಲ್ಲಿ ಸೇರಿದ್ದರು. ಸಾವಿರಾರು ರೈತರು ದೆಹಲಿ ಪ್ರವೇಶಿಸುವುದನ್ನು ತಡೆಯಲು ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಸಿಂಘು, ಟೆಕ್ರಿ ಗಡಿಗಳಲ್ಲಿರುವ ಹೆದ್ದಾರಿಯ ನಡುವೆ ಸೀಮೆಂಟ್ ಅಡ್ಡಗೋಡೆಗಳನ್ನು ನಿರ್ಮಿಸಲಾಗಿತ್ತು.
ಕಬ್ಬಿಣ ರಾಡುಗಳನ್ನು ಹಾಕಿ, ಹಲವು ಸುತ್ತುಗಳ ಮುಳ್ಳುತಂತಿ ಬೇಲಿಯನ್ನು ನಿರ್ಮಿಸಲಾಗಿತ್ತು. ರಸ್ತೆಯಲ್ಲಿ ದೊಡ್ಡದೊಡ್ಡ ಕಂದಕಗಳನ್ನು ನಿರ್ಮಿಸಲಾಗಿತ್ತು. ಹೀಗಾಗಿ ರೈತರು ಕಳೆದ ಒಂದು ವರ್ಷದಿಂದ ಗಡಿಗಳ ಹೆದ್ದಾರಿಯಲ್ಲೇ ಪ್ರತಿಭಟನೆಗೆ ಕುಳಿತರು. ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಈ ನಡುವೆ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಲಾಯಿತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರತಿಭಟಿಸುವುದು ರೈತರ ಹಕ್ಕು, ಹಾಗೆಂದು ಅನಿರ್ದಿಷ್ಟ ಅವಧಿವರೆಗೆ ರಸ್ತೆ ತಡೆ ಮಾಡಬಾರದು. ಇದು ಮೂಲಭೂತ ಹಕ್ಕಿನ ವಿರುದ್ದವಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.
ಸುಪ್ರೀಂಕೋರ್ಟ್ ನ ಈ ಹೇಳಿಕೆಯಿಂದ ಈಗ ಪೊಲೀಸರು ಸಿಂಘು ಮತ್ತು ಟೆಕ್ರಿ ಗಡಿಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಗಳನ್ನು ತೆರವುಗೊಳಿಸುತ್ತಿದ್ದಾರೆ. ಐದು ಹಂತದಲ್ಲಿ ನಿರ್ಮಿಸಲಾಗಿದ್ದ ಸೀಮೆಂಟ್ ಮತ್ತು ಕಬ್ಬಿಣದ ನಿರ್ಬಂಧಗಳನ್ನು ತೆರವುಗೊಳಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾರಿಕೆಡ್ ಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುತ್ತಿದ್ದೇವೆ. ಶೀಘ್ರವೇ ವಾಹನ ಸಂಚಾರ ಆರಂಭವಾಗಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


