Thursday, March 5, 2026
Google search engine
Homeಮುಖಪುಟಪವರ್ ಸ್ಟಾರ್ ಪುನೀತ್ ನಡೆದು ಬಂದ ದಾರಿ.....

ಪವರ್ ಸ್ಟಾರ್ ಪುನೀತ್ ನಡೆದು ಬಂದ ದಾರಿ…..

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಪ್ರಸಿದ್ದ ಹೆಸರು ಪುನೀತ್ ಅವರದ್ದು. ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದಿದ್ದ ಪುನೀತ್ ರಾಜ್ ಕುಮಾರ್ ಆರು ತಿಂಗಳ ಕೂಸು ಆಗಿದ್ದಾಗಿನಿಂದಲೇ ಚಿತ್ರರಂಗ ಪ್ರವೇಶ ಮಾಡಿದ ಅತ್ಯಂತ ಕಿರಿಯ ನಟ. ಆರೋಗ್ಯದಲ್ಲಿ ದಿಢೀರ್ ಏರುಪೇರು ಆಗಿ ಇಂದು ಬೆಳಗ್ಗೆ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಪುನೀತ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಬಾಲ್ಯದ ಹೆಸರು ಲೋಹಿತ್ ನಂತರ ಚಿತ್ರರಂಗ ಪ್ರವೇಶಿಸಿದ ನಂತರ ಪುನೀತ್ ಆಗಿ ಹೆಸರು ಬದಲಾವಣೆ ಮಾಡಲಾಯಿತು.

ಡಾ.ರಾಜ್ ಕುಮಾರ್ ಅವರೊಂದಿಗೆ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಪುನೀತ್ ಅವರಿಗೆ ಇದೆ. ಶಿವರಾಜ್, ರಾಘವೇಂದ್ರ ರಾಜ್ ಕುಮಾರ್ ಅವರು ಚಿತ್ರರಂಗದಲ್ಲಿ ಹೆಸರು ಮಾಡಿದರೂ ತಮ್ಮ ತಂದೆಯ ಚಿತ್ರಗಳಲ್ಲಿ ನಟಿಸಿದ್ದು ಬೆರಳೆಣಿಕೆ ಚಿತ್ರಗಳಲ್ಲಿ. ಆದರೆ ಪುನೀತ್ ತಮ್ಮ ತಂದೆ ವರನಟ ಡಾ.ರಾಜ್ ಕುಮಾರ್ ಅವರ ಜೊತೆ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಬಾಲ್ಯದಿಂದಲೇ ಅಭಿಮಾನಿಗಳ ಗಮನ ಸೆಳೆದವರು.

1985ರಲ್ಲಿ ಬೆಟ್ಟದ ಹೂವು ಚಿತ್ರದಲ್ಲಿ ಬಾಲನಟನಾಗಿ ಅಭಿಯಿಸುವುದರೊಂದಿಗೆ ಉತ್ತಮ ಬಾಲನಟ’ ಮತ್ತು ರಾಷ್ಟ್ರೀಯ ಫಿಲಂ ಅವಾರ್ಡ್ ಪಡೆದರು. ಸುಮಾರು ಒಂದು ದಶಕದ ಕಾಲ ಸಿನಿಮಾರಂಗದಿಂದ ದೂರವೇ ಉಳಿದಿದ್ದ ಪುನೀತ್ 2002ರಿಂದ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರುಪ್ರವೇಶ ಮಾಡಿ ಒಳ್ಳೆಯ ಸಿನಿಮಾಗಳನ್ನು ಕನ್ನಡ ಚಿತ್ರ ರಸಿಕರಿಗೆ ಕೊಟ್ಟರು. ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ ಜನಮನ ಗೆದ್ದರು. ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿಕೊಂಡರು.

1976ರಲ್ಲಿ 6 ತಿಂಗಳ ಕೂಸು ಇರುವಾಗಲೇ ಪುನೀತ್ ಅವರನ್ನು ಚಿತ್ರರಂಗಕ್ಕೆ ತರಲಾಗಿತ್ತು. ಪ್ರೇಮದ ಕಾಣಿಕೆ ಚಿತ್ರದಲ್ಲಿ ಮೊದಲಿಗೆ ಪರಿಚಯಿಸಲಾಯಿತು. ಕೃಷ್ಣಮೂರ್ತಿ ಪುರಾಣಿಕರ ಸನಾದಿ ಅಪ್ಪಣ್ಣ, ತಾಯಿಗೆ ತಕ್ಕ ಮಗ, ವಸಂತಗೀತ ಚಿತ್ರದಲ್ಲಿ ನಟನೆ ಮಾಡಿದರು. ಭೂಮಿಗೆ ಬಂದ ಭಾಗ್ಯವಂತ, ಭಾಗ್ಯವಂತ ಚಿತ್ರದಲ್ಲಿ ಬಾಲ ನಟನಾಗಿ ಅಭಿನಯ. ಈ ಚಿತ್ರದಲ್ಲಿ ಮಲತಾಯಿ, ಮತ್ತು ಮಲತಂದೆ ಇಬ್ಬರೂ ಬಾಲ ಪುನೀತ್ ನನ್ನು ಮನೆಯಿಂದ ಹೊರಗೆ ಅಟ್ಟುವ ದೃಶ್ಯ ಮನಕಲಕುವಂತೆ ಇದೆ. ಪುನೀತ್ ಈ ಚಿತ್ರದಲ್ಲಿ ಮುಗ್ದ ಬಾಲಕನಾಗಿ ಉತ್ತಮವಾಗಿ ಅಭಿನಯಿಸಿರುವುದು ಮತ್ತು ಬಾನ ದಾರಿಯಲ್ಲಿ ಸೂರ್ಯ ಮೇಲೆ ಬಂದ, ಚಂದ್ರ ಜಾರಿ ಹೋದ ಹಾಡನ್ನು ಹಾಡಿದರು. ಇದು ಸಂಗೀತ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ರಾಜ್-ಅಂಬಿಕಾ ಅಭಿನಯದ ಚಲಿಸುವ ಮೋಡಗಳು ಚಿತ್ರದಲ್ಲಿ ಪ್ರವಾಸಿ ಮಂದಿರದಲ್ಲಿ ಕೆಲಸ ಮಾಡುವ ಹುಡುಗನಾಗಿ ಪುನೀತ್ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಎರಡನೇ ಬಾರಿಗೆ ಹಿನ್ನೆಲೆಗಾಯಕರಾಗಿ ಹಾಡಿರುವುದು ಎಲ್ಲರ ಗಮನ ಸೆಳೆಯುತ್ತದೆ. “ಕಾಣದಂತೆ ಮಾಯವಾದನೋ, ನಮ್ಮ ಶಿವ ಕೈಲಾಸ ಸೇರಿಕೊಂಡನೋ, ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು ಕೈಯ್ಯ ಕೊಟ್ಟು ಓಡಿ ಹೋದನೋ” ಹಾಡು ಪುನೀತ್ ಗಾಯನದಲ್ಲಿ ಅದ್ಭುತವಾಗಿ ಮೂಡಿಬಂದಿದೆ.

ಹೊಸಬೆಳಕು ಚಿತ್ರದಲ್ಲಿ ನಟಿಸಿದ್ದಕ್ಕಾಗಿ 1988ರಲ್ಲಿ ಬಾಲ ನಟ ರಾಜ್ಯ ಪ್ರಶಸ್ತಿಗೆ ಪುನೀತ್ ಭಾಜನರಾದರು. ಪರಶುರಾಮ್ ಚಿತ್ರದಲ್ಲಿ ರಾಜ್ ಜೊತೆ ನಟಿಸಿದರು.

ಎರಡನೇ ಇನ್ನಿಂಗ್ಸ್ ನಲ್ಲಿ ಅಪ್ಪು ಪುನೀತ್ ಅವರ ಮೊದಲ ಚಿತ್ರ. 2002ರಲ್ಲಿ ಬೆಳ್ಳಿತೆರೆಗೆ ಬಂದ ಚಿತ್ರ ಅತ್ಯಂತ ಯಶಸ್ವಿಯಾಗಿ ನಿರ್ಮಾಪಕರಿಗೆ ಸಾಕಷ್ಟು ಹಣ ತಂದುಕೊಟ್ಟಿದೆ. ಇಲ್ಲಿಂದ ಪುನೀತ್ ಅವರ ಚಿತ್ರಣವೇ ಬದಲಾಯಿತು. ಅತ್ಯಂತ ಬೇಡಿಕೆಯ ನಾಯಕ ನಟ ಎಂಬ ಖ್ಯಾತಿಯನ್ನು ಗಳಿಸಿದರು. ಅಭಿ, ವೀರಕನ್ನಡಿಗ, ಮೌರ್ಯ, ಅಜಯ್, ಅರಸು, ಮಿಲನ, ವಂಶಿ, ರಾಮ್, ಜಾಕಿ, ಬಿಂದಾಸ್, ರಾಜಕುಮಾರ, ಅಂಜನಿಪುತ್ರ ಕನ್ನಡ ಚಿತ್ರಗಳಲ್ಲಿ ಹೆಸರು ಗಳಿಸಿದ್ದರು. ಬಹುತೇಕ ಸಿನಿಮಾಗಳು ಹಿಟ್ ಆಗಿವೆ.

ಮೊದಲ ಬಾರಿಗೆ ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಟ್ಟರು. ಹಲವು ಕಂತುಗಳಲ್ಲಿ ಪ್ರಸಾರವಾದ ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕೀರ್ತಿ ಪುನೀತ್ ರಾಜ್ ಕುಮಾರ್ ಅವರಿಗೆ ಸಲ್ಲುತ್ತದೆ.

ಡಿಸೆಂಬರ 1, 1999ರಲ್ಲಿ ಚಿಕ್ಕಮಗಳೂರಿನ ಅಶ್ವಿನಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪುನೀತ್ ರಾಜ್ ಕುಮಾರ್ ಅವರಿಗೆ ದೃತಿ, ವಂದಿತ ಎಂಬಿಬ್ಬರು ಹೆಣ್ಣು ಮಕ್ಕಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular