ರಾಜ್ಯದ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಜಮೀರ್ ಅಹಮದ್ ಗಂಭೀರ ಆರೋಪ ಮಾಡಿದ್ದಾರೆ.
ಸಿಂಧಗಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ ಅವರು, ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ದುರ್ಬಲ ನಾಯಕ. ಅವರಿಗೆ ಪಾಪುಲಾರಿಟಿ ಇಲ್ಲ. ಅದು ಈವರೆಗಿನ ಚುನಾವಣೆಗಳಲ್ಲಿ ಸಾಬೀತಾಗಿದೆ. ಉಪಚುನಾವಣೆಯಲ್ಲಿ ಬಿಜೆಪಿಗೆ ಸಹಾಯ ಮಾಡಲು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಬಿಜೆಪಿ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದು ವ್ಯವಹಾರ ಕುದುರಿಸಿದ್ದಾರೆ. ಕುಮಾರಸ್ವಾಮಿ ಲಾಭವಿಲ್ಲದೆ ಏನನ್ನೂ ಮಾಡುವುದಿಲ್ಲ ಎಂದು ಟೀಕಿಸಿದರು.
ಬಿಜೆಪಿ ಮುಖಂಡರು ಸಿಂಧಗಿ ಕ್ಷೇತ್ರದಲ್ಲಿ ಮತದಾರರಿಗೆ ಹಣದ ಆಮಿಷವೊಡ್ಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅಲ್ಪಸಂಖ್ಯಾತ ಸಮುದಾಯದವರಿಗೆ ಹಣ ನೀಡಿ ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡುವಂತೆ ಹೇಳಲಾಗುತ್ತಿದೆ. ಅಂದರೆ ಜೆಡಿಎಸ್ ಗೆ ಮತ ಬಿದ್ದರೆ ಬಿಜೆಪಿಗೆ ಅನುಕೂಲವಾಗಲಿದೆ ಎಂಬುದು ಬಿಜೆಪಿ ಮುಖಂಡರ ಹಿಡೆನ್ ಅಜಂಡ ಆಗಿದೆ ಎಂದು ದೂರಿದರು.
ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅಲ್ಪಸಂಖ್ಯಾತರ ಮುಖಂಡರನ್ನು ತುಳಿದರು. ಜಾಫರ್ ಷರೀಫ್, ಅವರ ಮೊಮ್ಮಗ ಎಲ್ಲರನ್ನೂ ಸೋಲುವಂತೆ ಮಾಡಿದರು ಎಂದು ಆರೋಪಿಸಿದ್ದಾರೆ. ಇದು ಸುಳ್ಳು. ಅಲ್ಪಸಂಖ್ಯಾತರನ್ನು ಮುಗಿಸಿದ್ದು ಕುಮಾರಸ್ವಾಮಿ ಅವರೇ ಎಂದು ಆರೋಪಿಸಿದರು.
2004ರಲ್ಲಿ ಸಿ.ಎಂ.ಇಬ್ರಾಹಿಂ ಅವರನ್ನು ಸ್ಪರ್ಧೆಗೆ ಇಳಿಸಿ ಜಾಫರ್ ಷರೀಫ್ ಸೋಲುವಂತೆ ಮಾಡಿದ್ದು ಇದೇ ಕುಮಾರಸ್ವಾಮಿ, ಮೊಮ್ಮಗ ರೆಹಮಾನ್ ಷರೀಪ್ ವಿರುದ್ದ ಕ್ಯಾಂಡಿಡೇಟ್ ಹಾಕಿ ಸೋಲಿಸಿದ್ದು ಕುಮಾರಸ್ವಾಮಿಯೇ. ಹೀಗೆ ಮಾಡಿದಾಗ ನಾನು ಪತ್ರಿಕಾಗೋಷ್ಠಿಯಲ್ಲಿ ನಾನಾ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆಗ ನನ್ನನ್ನು ಮೀರ್ ಸಾದಿಕ್ ಅಂದರು.
ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಅಲ್ಪಸಂಖ್ಯಾತರ ಮೇಲೆ ಬರದಂತೆ ಮಾಡಿದರು. ಸಿಂಧಗಿ ಮತ್ತು ಹಾನಗಲ್ ನಲ್ಲೂ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಇಳಿಸಿ ಬಲಿತೆಗೆದುಕೊಳ್ಳುತ್ತಾರೆ. ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ ಕಾರಣ ಆರ್.ಎಸ್.ಎಸ್. ವಿರುದ್ಧ ಮಾತನಾಡುತ್ತಾರೆ. ಇದು ಬಿಜೆಪಿಗೆ ಲಾಭ ಮಾಡಿಕೊಡುವ ಉದ್ದೇಶವಲ್ಲದೆ ಬೇರೇನೂ ಅಲ್ಲ ಎಂದು ವಿವರಿಸಿದರು.
ಮಾಜಿ ಪ್ರಧಾನಿ ದೇವೇಗೌಡ ಅವರು ಶೇ.200ರಷ್ಟು ಜಾತ್ಯತೀತ ನಾಯಕರು. ಆದರೆ ಕುಮಾರಸ್ವಾಮಿ ಅವರಲ್ಲಿ ಒಂದು ಪರ್ಸೆಂಟ್ ಜಾತ್ಯತೀತತೆ ಇಲ್ಲ.ಯಾವ ಕ್ಷಣದಲ್ಲಿ ಬೇಕಾದರೂ ಕುಮಾರಸ್ವಾಮಿ ಬದಲಾಗುತ್ತಾರೆ. ಆದರೆ ದೇವೇಗೌಡರು ತಮ್ಮ ನಿಲುವಿಗೆ ಬದ್ಧರಾಗಿದ್ದಾರೆ ಎಂದು ಹೇಳಿದರು.


