‘ಜಮ್ಮು ಮತ್ತು ಕಾಶ್ಮೀರದ ರಾಜ್ಯಾಪಾಲರಾಗಿದ್ದಾಗ ಅಂಬಾನಿ ಮತ್ತು ಹಿರಿಯ ಆರ್.ಎಸ್.ಎಸ್ ಮುಖಂಡರಿಗೆ ಸೇರಿದ ಎರಡು ಕಡತಗಳನ್ನು ಅಂಗೀಕರಿಸಿದರೆ 300 ಕೋಟಿ ರೂ ಲಂಚ ನೀಡುವುದಾಗಿ ಆಮಿಷವೊಡ್ಡಲಾಗಿತ್ತು ಎಂದು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
ಅಕ್ಟೋಬರ್ 17ರಂದು ರಾಜಸ್ಥಾನದಲ್ಲಿ ನಡೆದ ಸಭೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಆ ಎರಡು ಕಡತಗಳನ್ನು ತಾನು ರದ್ದುಗೊಳಿಸಿ, ಲಂಚದ ಆಮಿಷಕ್ಕೆ ತಾನು ಬಿದ್ದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಜೆ & ಕೆ ನಲ್ಲಿ ಎರಡು ಕಡತಗಳು ನನ್ನ ಮುಂದೆ ಬಂದವು. ಅವುಗಳಲ್ಲಿ ಒಂದು ಅಂಬಾನಿಗೆ ಸಂಬಂಧಿಸಿದ್ದು, ಇನ್ನೊಂದು ಆರ್ಎಸ್ಎಸ್ನ ಹಿರಿಯ ಕಾರ್ಯಕರ್ತರಿಗೆ ಸಂಬಂಧಿಸಿದ್ದು ಎಂದು ಕಾರ್ಯದರ್ಶಿಯೊಬ್ಬರು ನನಗೆ ಹೇಳಿದರು. ಇವು ಕ್ಷುಲ್ಲಕ ವ್ಯವಹಾರಗಳಾಗಿವೆ, ಆದರೆ ಇವುಗಳಿಂದ ನೀವು ತಲಾ 150 ಕೋಟಿ ರೂ ಪಡೆಯಬಹುದು ಎಂದರು. ನಾನು ಐದು ಕುರ್ತಾ-ಪೈಜಾಮಾಗಳೊಂದಿಗೆ ಬಂದಿದ್ದೇನೆ ಮತ್ತು ಇವುಗಳೊಂದಿಗೆ ಹೊರಡುತ್ತೇನೆ ಎಂದು ಹೇಳುವ ಮೂಲಕ ನಾನು ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ಮಲಿಕ್ ವಿಡಿಯೋದಲ್ಲಿ ಹೇಳಿದ್ದಾರೆ.
ಪ್ರಸ್ತುತ ಮೇಘಾಲಯ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಸತ್ಯಪಾಲ್ ಮಲಿಕ್ ” ವ್ಯಕ್ತಿಯ ಹೆಸರನ್ನು ಹೆಸರಿಸುವುದು ಸೂಕ್ತವಲ್ಲ. ಆದರೆ ಜಮ್ಮುಮತ್ತು ಕಾಶ್ಮೀರದ ಆರ್.ಎಸ್ಎಸ್ ಉಸ್ತುವಾರಿ ಯಾರು ಎಂದು ಲೆಕ್ಕಾಚಾರ ಮಾಡಬಹುದು. ನಾನು ಆರ್.ಎಸ್.ಎಸ್ ಹೆಸರನ್ನು ತೆಗೆದುಕೊಳ್ಳಬಾರದಿತ್ತು. ಯಾರಾದರೂ ತನ್ನ ವೈಯಕ್ತಿಕ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿದ್ದರೆ ಆ ವ್ಯಕ್ತಿಯನ್ನು ಮಾತ್ರ ಉಲ್ಲೇಖಿಸಬೇಕಿತ್ತು. ಆತ ಯಾವುದೇ ಸಂಸ್ಥೆಗೆ ಸೇರಿದ್ದರೂ ಸಂಸ್ಥೆಯನ್ನು ಇದರೊಳಗೆ ತರಬಾರದು ಎಂದು ಮಲಿಕೆ ಹೇಳಿಕೆಯನ್ನು ಉಲ್ಲೇಖಿಸಿ ಸಂಡೆ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರ ಎಷ್ಟು ಭ್ರಷ್ಟವಾಗಿದೆ ಎಂದು ಜನರು ಊಹಿಸಲು ಸಾಧ್ಯವಿಲ್ಲ. ದೇಶಾದ್ಯಂತ ಇಂತಹ ಫೈಲ್ ಗಳನ್ನು ಕ್ಲಿಯರ್ ಮಾಡಲು ಕಮಿಷನ್ ಶೇ.4-5ರಷ್ಟು ಇದೆ. ಆದರೆ ಜಮ್ಮು ಕಾಶ್ಮೀರದಲ್ಲಿ ಅವರು ಶೇ.15ರಷ್ಟು ಕಮಿಷನ್ ನೀಡುತ್ತಾರೆ. ನನ್ನ ಅಧಿಕಾರ ಅವಧಿಯಲ್ಲಿ ಕಮಿಷನ್ ನೀಡಲು ಭಯಪಡುತ್ತಿದ್ದರು. ಹಾಗಾಗಿ ದೊಡ್ಡ ಭ್ರಷ್ಟಾಚಾರ ನಡೆದಿಲ್ಲ ಎಂದು ಮಲಿಕ್ ಹೇಳಿದ್ದಾರೆ.
ಲಂಚ ನೀಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಅಥವಾ ತಮ್ಮ ಯೋಜನೆಗಳನ್ನು ಕ್ಲಿಯರ್ ಮಾಡುವ ಸರ್ಕಾರಿ ಅಧಿಕಾರಿಗಳ ವಿರುದ್ಧ ನೀವು ಕ್ರಮ ಕೈಗೊಂಡಿದ್ದೀರಾ ಎಂಬ ಪ್ರಶ್ನೆಗೆ “ಅವರು ನನಗೆ ಲಂಚ ನೀಡಲು ಪ್ರಯತ್ನಿಸುತ್ತಿಲ್ಲ. ಆದರೆ ಆ ಯೋಜನೆಗಳಲ್ಲಿ ಲಂಚವಿತ್ತು. ಕೆಲವು ಜನರು ಅದನ್ನು ತೆಗೆದುಕೊಳ್ಳುತ್ತಿದ್ದರು. ನಾನು ಎರಡೂ ಯೋಜನೆಗಳನ್ನು ರದ್ದುಗೊಳಿಸಿದೆ. ಆದ್ದರಿಂದ ಯಾವುದೇ ಮುಂದಿನ ಕ್ರಮದ ಅಗತ್ಯವಿಲ್ಲ. ಆ ಶಿಕ್ಷೆ ಸಾಕಾಗಿತ್ತು” ಎಂದು ಸೆಂಡೇ ಎಕ್ಸ್ ಪ್ರೆಸ್ ಗೆ ಹೇಳಿಕೆ ನೀಡಿದ್ದಾರೆ.