ದೇಶದಲ್ಲಿ ಉಂಟಾಗಿರುವ ಹಣದುಬ್ಬರದಿಂದ ಶೇಕಡ 97ರಷ್ಟು ಕುಟುಂಬಗ ಆದಾಯದಲ್ಲಿ ಕುಸಿತವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಪ್ರಿಯಾಂಕ “ಜನರು ಪೆಟ್ರೋಲ್ ಖರೀದಿಸಿದ್ದರಿಂದ ಕೇಂದ್ರ ಸರ್ಕಾರ 23 ಲಕ್ಷ ಕೋಟಿ ರೂಪಾಯಿ ತೆರಿಗೆ ವಸೂಲಿ ಮಾಡಿದೆ ಎಂದು ಹೇಳಿದ್ದಾರೆ.
ಬೆಲೆ ಹೆಚ್ಚಳದ ಪರಿಣಾಮ ಅಡುಗೆಎಣ್ಣೆ ಮತ್ತು ತರಕಾರಿಯನ್ನು ಕೊಳ್ಳುತ್ತಿರುವುದರಿಂದ ದೇಶದ ಶೇಕಡ 97ರಷ್ಟು ಕುಟುಂಬಗಳ ಆದಾಯ ತೀವ್ರ ಕುಸಿತವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹಿತರು ದಿನಕ್ಕೆ 1 ಸಾವಿರ ಕೋಟಿ ರೂಪಾಯಿ ಲಾಭ ಗಳಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾಋಎ.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಶುಕ್ರವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 35 ಪೈಸೆಯಷ್ಟು ಹೆಚ್ಚಳವಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ 106.89 ರೂಗೆ ತಲುಪಿದೆ. ಡೀಸೆಲ್ ಬೆಲೆ 95.62 ರೂಪಾಯಿ ಆಗಿದೆ. ಮುಂಬೈ ನಗರದಲ್ಲಿ ಪೆಟ್ರೋಲ್ ಬೆಲೆ 112.79 ರೂಗಳಿಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ 103.73ಕ್ಕೆ ತಲುಪಿದೆ. ದೇಶದ ನಾಲ್ಕು ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆಯ ಏರಿಕೆ ಕಂಡಿದೆ.
ತರಕಾರಿ ಬೆಲೆಗಳು ಗಗನಕ್ಕೆ ಏರುತ್ತಲೇ ಇದ್ದರೂ ಸರ್ಕಾರ ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ದೆಹಲಿಯಲ್ಲಿ ಒಂದು ಕೆಜಿ ಕ್ಯಾಪ್ಸಿಕಂ ಬೆಲೆ 100 ರೂಪಾಯಿ ಆಗಿದೆ. ಟೊಮಾಟೋ ಬೆಲೆ ಹೆಚ್ಚಳವಾಗಿದೆ. ಹರಾಜು ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಬೆಲೆ 65 ರೂ ಆಗಿದೆ.
ಪಶ್ಚಿಮ ದೆಹಲಿಯಲ್ಲಿ ಹೂಕೋಸು, ಬೆಂಡೆ ಬೆಲೆ 60 ರೂ ಆಗಿದೆ. ಟೋಮಾಟೋ, ಕ್ಯಾರೆಟ್ 80ರೂ ಕೊಟ್ಟು ಖರೀದಿಸಬೇಕಿದೆ. ಮುಕ್ತಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿದಿದೆ. 40 ರೂ ಕಿಲೋ ಈರುಳ್ಳಿ ಬೆಲೆ ಇದೆ. ಆಲೂಗೆಡ್ಡೆಯ ಬೆಲೆಯೂ ಅಷ್ಟೇ ಇದೆ. ಹಲವು ತರಕಾರಿಗಳ ಬೆಲೆ ಕಡಿಮೆಯಾಗಿದೆ.