ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ ಆರೋಪ ಹೊತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ವಿಠಲ ಮಲೆಕುಡಿಯ ಮತ್ತು ಅವರ ತಂದೆ ಲಿಂಗಣ್ಣ ಮಲೆಕುಡಿಯ ಅವರನ್ನು ಇಲ್ಲಿನ ಮೂರನೇ ಹೆಚ್ಚುವರಿ ನ್ಯಾಯಾಲಯ ಅಕ್ಟೋಬರ್ 21ರಂದು ನಿರ್ದೋಷಿಗಳೆಂದು ತೀರ್ಪು ನೀಡಿದೆ.
2012ರಲ್ಲಿ ನಕ್ಸಲ್ ನಿಗ್ರಹ ದಳ ಈ ಇಬ್ಬರನ್ನು ಬಂಧಿಸಿದ ವಿಷಯ ದೇಶಾದ್ಯಂತ ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ವಿಠಲ ಮಲೆಕುಡಿಯ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದರು. ನಕ್ಸಲ್ ನಿಗ್ರಹ ದಳ ವಿಠಲರನ್ನು ಬಂಧಿಸಿದ ನಂತರ ಜೈಲಿನಲ್ಲಿದ್ದೇ ಪರೀಕ್ಷೆ ಬರೆದಿದ್ದರು.
ವಿಠಲ ಮಲೆಕುಡಿಯ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದರು ಎಂದು ಆರೋಪಿಸಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ವಿಠಲ ಜೈಲಿನಲ್ಲಿದ್ದ ಸಂದರ್ಭದಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಭೇಟಿ ನೀಡಿ ವಿಠಲ ಮತ್ತು ಲಿಂಗಣ್ಣ ಮಲೆಕುಡಿಯ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದರು.
ವಿಠಲ್ ಬಂಧನದ ವೇಳೆ ಭಗತ್ ಸಿಂಗ್ ಪುಸ್ತಕ ಪತ್ತೆಯಾಗಿತ್ತು. ಇದನ್ನೇ ನ್ಯಾಯಾಲದಲ್ಲೂ ಹಾಜರುಪಡಿಸಲಾಗಿತ್ತು. ವಿಠಲ್ ಮಲೆಕುಡಿಯ ಮತ್ತು ಲಿಂಗಣ್ಣ ಮಲೆಕುಡಿಯ ಪರವಾಗಿ ವಕೀಲ ದಿನೇಶ್ ಹೆಗ್ಡೆ ಉಚಿತವಾಗಿ ವಾದ ಮಂಡಿಸಿದ್ದರು.