ದೇಶದ 95ರಷ್ಟು ಭಾರತೀಯರಿಗೆ ಪೆಟ್ರೋಲ್ ಅಗತ್ಯವಿಲ್ಲ. ನಾಲ್ಕುಚಕ್ರ ವಾಹನ ಹೊಂದಿರುವವರಿಗೆ ಮಾತ್ರ ಪೆಟ್ರೋಲ್ ಅಗತ್ಯ ಇದೆ ಎಂದು ಉತ್ತರ ಪ್ರದೇಶದ ಸಚಿವ ಉಪೇಂದ್ರ ತಿವಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿರುವ ಕುರಿತು ವಿಚಿತ್ರ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಜಲೌನ ಕ್ಷೇತ್ರದ ಉಪೇಂದ್ರ ತಿವಾರಿ, ಪ್ರತಿಪಕ್ಷಗಳಿಗೆ ಬೇರೆ ವಿಷಯ ಇಲ್ಲ. ಪೆಟ್ರೊಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿಷಯದಲ್ಲಿ ಸರ್ಕಾರವನ್ನು ಗುರಿ ಮಾಡುತ್ತಿವೆ ಎಂದು ಟೀಕಿಸಿದ್ದಾರೆ.
2014ರ ಮೊದಲಿನ ಅಂಕಿಆಂಶಗಳನ್ನು ಮತ್ತು ಈಗಿನ ಅಂಕಿಅಂಶಗಳನ್ನು ತೆಗೆದುಕೊಂಡು ತುಲನೆ ಮಾಡಿದರೆ ನರೇಂದ್ರ ಮೋದಿ ಮತ್ತು ಆದಿತ್ಯನಾಥ್ ಸರ್ಕಾರ ರಚನೆ ಮಾಡಿದ ಮೇಲೆ ತಲಾ ಆದಾಯ ದ್ವಿಗುಣವಾಗಿದೆ ಎಂದು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗಿದ್ದರೂ ಸಮರ್ಥ ಜನರು ನಾಲ್ಕುಚಕ್ರದ ವಾಹನ ಬಳಸುತ್ತಾರೆ. ಅವರಿಗೆ ಪೆಟ್ರೋಲ್ ಅಗತ್ಯವಿದೆ. ಈಗ ಸಮಾಜದ ಶೇ.95ರಷ್ಟು ಜನರಿಗೆ ಪೆಟ್ರೋಲ್ ಅಗತ್ಯ ಇಲ್ಲ. ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ಪೆಟ್ರೋಲ್ ಬೆಲೆ 103.18 ರೂ ಇದೆ. ಜನ ಇದನ್ನು ಪಾವತಿಸುತ್ತಾರೆ. ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಪೆಟ್ರೋಲ್ 112.44 ರೂ ಮತ್ತು ಡೀಸೆಲ್ 103.24 ರೂ ಇದೆ ಎಂದು ತೈಲ ಬೆಲೆ ಹೆಚ್ಚಳವನ್ನು ಸಮರ್ಥಿಸಿಕೊಂಡಿದ್ದಾರೆ.
ಕೊರೊನ ಪರಿಣಾಮ ಜನರು ತೀವ್ರ ಸಂಕಷ್ಟದಲ್ಲಿದ್ದು ಬೆಲೆ ಏರಿಕೆಯಿಂದ ಅವರ ಜೇಬಿಗೆ ಬೆಂಕಿ ಬಿದ್ದಿದೆ. ಪೆಟ್ರೋಲ್ ಮತ್ತು ಡೀಸೆಲ್ ತೀವ್ರಗತಿಯ ಏರಿಕೆಯಿಂದ ಸಾಗಣೆ ವೆಚ್ಚವೂ ಅಧಿಕವಾಗಿದೆ. ದಿನಸಿ ಪದಾರ್ಥಗಳ ಬೆಲೆಯೂ ಗಗನಕ್ಕೆ ಏರಿದೆ.
ದೇಶದಲ್ಲಿ 100 ಕೋಟಿ ಜನರಿಗೆ ಉಚಿತ ಕೊರೊನ ಚಿಕಿತ್ಸೆ ನೀಡಲಾಗಿದೆ. ಉಚಿತ ಕೊರೊನ ಚಿಕಿತ್ಸೆ ನೀಡಿದ್ದು, ಮನೆಮನೆಗೂ ಔಷಧಿಯನ್ನು ತಲುಪಿಸಿದ್ದೇವೆ ಎಂದು ಸಚಿವ ಉಪೇಂದ್ರ ತಿವಾರಿ ಹೇಳಿದ್ದಾರೆಂದು ಎನ್.ಡಿ.ಟಿವಿ ವರದಿ ಮಾಡಿದೆ.
ಸರ್ಕಾರ ಆರೋಗ್ಯ, ಶಿಕ್ಷಣ ಮತ್ತು ಇತರೆ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಎಲ್ಲವೂ ಉಚಿತವಾಗಿ ನೀಡಲಾಗುತ್ತಿದೆ. ದೇಶದ ಜನರ ತಲಾ ಆದಾಯಕ್ಕೆ ಹೋಲಿಸಿದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತುಂಬಾ ಕಡಿಮೆ ಎಂದು ತೈಲ ಬೆಲೆ ಹೆಚ್ಚಳವನ್ನು ವಿಚಿತ್ರವಾಗಿ ಸಮರ್ಥನೆ ಮಾಡಿದ್ದಾರೆ.