ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರಿಗೆ ಪ್ರತಿಭಟಿಸುವ ಹಕ್ಕು ಇದೆ. ಆದರೆ ದೆಹಲಿಯ ಗಡಿಗಳಲ್ಲಿ ರಸ್ತೆಗಳನ್ನು ಅನಿರ್ದಿಷ್ಟ ಅವಧಿ ವರೆಗೆ ಬಂದ್ ಮಾಡುವುದು ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಎಸ್.ಕೆ.ಕೌಲ್ ನೇತೃತ್ವದ ವಿಭಾಗೀಯ ಪೀಠ “ಹೀಗೆ ಹೇಳುತ್ತೇವೆ ಎಂದರೆ ಇದು ಪ್ರತಿಭಟನೆ ನಡೆಸುವ ಹಕ್ಕಿಗೆ ವಿರುದ್ದ ಅಲ್ಲ. ಕಾನೂನು ಹೋರಾಟ ಬಾಕಿ ಇದೆ. ಅಂತಿಮವಾಗಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿತು.
ರೈತರಿಗೆ ಪ್ರತಿಭಟಿಸುವ ಹಕ್ಕು ಇದೆ. ಆದರೆ ಅನಿರ್ದಿಷ್ಟ ಅವಧಿವರೆಗೆ ರಸ್ತೆ ಬಂದ್ ಮಾಡುವುದು ಸರಿಯಲ್ಲ. ಯಾವುದೇ ಮಾರ್ಗದಲ್ಲಿ ಪ್ರತಿಭಟನೆ ನಡೆಸಬಹುದು. ಈ ರೀತಿ ರಸ್ತೆ ಬಂದ್ ಮಾಡುವುದು ಸೂಕ್ತವಲ್ಲ. ಜನರು ರಸ್ತೆಯಲ್ಲಿ ಓಡಾಡುವ ಹಕ್ಕೂ ಕೂಡ ಇದೆ. ಅದನ್ನು ಬಂದ್ ಮಾಡಬಾರದು’ ಎಂದು ನ್ಯಾಯಮೂರ್ತಿ ಎಂ.ಎಂ.ಖಾನ್ ವಾಲೀಕರ್ ಹೇಳಿದರು.
ಪ್ರಕರಣದಲ್ಲಿ ಕಕ್ಷಿದಾರರಾಗಿರುವ ರೈತ ಸಂಘಟನೆಗಳಿಗೆ ಈ ಕುರಿತು ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಹೇಳಿದೆ. ಡಿಸೆಂಬರ್ 7ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ನೋಯ್ಡಾ ನಿವಾಸಿ ಮೊನಿಕ್ಕಾ ಅಗರ್ ವಾಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಸಲ್ಲಿಸಿದ್ದು ಪ್ರತಿಭಟನೆಗಳಿಂದ ರಸ್ತೆ ತಡೆ ನಡೆಸುವುದರಿಂದ ದೈನಂದಿನ ಪ್ರಯಾಣದಲ್ಲಿ ವಿಳಂಬವಾಗುತ್ತಿದೆ ಎಂದು ದೂರಲಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.