ಆಂಧ್ರಪ್ರದೇಶದಲ್ಲಿ ಪ್ರತಿಪಕ್ಷ ತೆಲುಗುದೇಶಂ ಪಕ್ಷದ ಕೇಂದ್ರ ಕಚೇರಿ ಮತ್ತು ಕಾರ್ಯಕರ್ತರ ಮೇಲೆ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಕಾನೂನು ಮತ್ತು ಸುವವ್ಯಸ್ಥೆ ಹದಗೆಟ್ಟಿರುವುದರಿಂದ ಆಂಧ್ರಪ್ರದೇಶದಲ್ಲಿ ಸಂವಿಧಾನದ 356 ವಿಧಿಯಂತೆ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆಗ್ರಹಿಸಿದ್ದಾರೆ.
ಕೆಲ ದಿನಗಳ ಹಿಂದ ವಿಶಾಖಪಟ್ಟಣಂ ನಗರದ ಮಂಗಲಗಿರಿಯಲ್ಲಿರುವ ಟಿಡಿಪಿ ಕೇಂದ್ರ ಕಚೇರಿ ಮೇಲೆ ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿದ್ದರು. ಟಿಡಿಪಿ ಮುಖಂಡರ ಮೇಲೂ ಹಲ್ಲೆ ಮಾಡಿದ್ದರು. ವೈಎಸ್ಆರ್ ಕಾಂಗ್ರೆಸ್ ದಾಳಿಯನ್ನು ಖಂಡಿಸಿ ಟಿಡಿಪಿ ಆಂಧ್ರ ಬಂದ್ ಗೆ ಕರೆ ನೀಡಿತ್ತು. ಆದರೆ ಟಿಡಿಪಿ ನಾಯಕರನ್ನು ಗೃಹಬಂಧನದಲ್ಲಿಸಿದ ಕಾರಣ ಬಂದ್ ವಿಫಲ ಆಗಿತ್ತು.
ಆಡಳಿತ ಪಕ್ಷದ ಕಾರ್ಯಕರ್ತರು ಪ್ರತಿಪಕ್ಷ ಟಿಡಿಪಿ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಹೀಗಾಗಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯಸ್ಥೆ ಸಂಪೂರ್ಣ ವಿಫಲವಾಗಿದೆ. ರಾಜ್ಯದ ಪೊಲೀಸರು ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಪೊಲೀಸರ ವಿರೋಧ ಪಕ್ಷಗಳಿಗೆ ರಕ್ಷಣೆ ನೀಡಲು ವಿಫಲರಾಗಿದ್ದಾರೆ. ಆದ್ದರಿಂದ ಟಿಡಿಪಿ ಸ್ವಂತ ಭದ್ರತೆ ಕಲ್ಪಿಸಿಕೊಳ್ಳಲು ಸಮರ್ಥ ಆಗಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಟಿಡಿಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸಲು ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ. ಪ್ರತಿಪಕ್ಷ ಟಿಡಿಪಿ ಕಾರ್ಯಕರ್ತರಿಗೆ ಹಿಂಸೆ ನೀಡಲಾಗುತ್ತಿದೆ. ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಾರ್ಯಕರ್ತರು ಮತ್ತು ಮುಖಂಡರಿಗೆ ಬೆದರಿವೊಡ್ಡಲಾಗುತ್ತಿದೆ. ಇದು ಪೊಲೀಸ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಟೀಕಿಸಿದರು.
ರಾಜ್ಯ ಮಾದಕದ್ರವ್ಯ ಮುಕ್ತ ರಾಜ್ಯವಾಗಬೇಕು. ಇದಕ್ಕಾಗಿ ಕೊನೆಯವರೆಗೂ ಟಿಡಿಪಿ ಹೋರಾಟ ಮಾಡುತ್ತದೆ. ಪ್ರಜಾಪ್ರಭುತ್ವ ಮತ್ತು ಜನರ ಒಳಿತಿಗಾಗಿ ನಿರಂತರ ಹೋರಾಟ ಮಾಡುತ್ತೇವೆ. ವೈಎಸ್ಆರ್ ಕಾಂಗ್ರೆಸ್ ಸರ್ಕಾರ ನಮ್ಮ ಮೇಲೆ ದಾಳಿ ಮಾಡಿ ಸುಳ್ಳು ಕೇಸು ಹಾಕಿ ಹಿಂಸೆ ನೀಡಿದರೂ ಪಕ್ಷ ದುರ್ಬಲಗೊಳ್ಳುವುದಿಲ್ಲ ಎಂದು ಸವಾಲು ಹಾಕಿದ್ದಾರೆ.