ಪಂಜಾಬ್ ನಲ್ಲಿ ಶೀಘ್ರವೇ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಘೋಷಿಸಿದ್ದಾರೆ. ರೈತರ ಸಮಸ್ಯೆಗಳನ್ನು ಬಗೆಹರಿಸಿದರೆ ಬಿಜೆಪಿಯೊಂದಿಗೆ ಸೀಟು ಹಂಚಿಕೆ ಮಾಡಿಕೊಳ್ಳುವುದಾಗಿಯೂ ಪ್ರಕಟಿಸಿದ್ದಾರೆ.
ತಮ್ಮನ್ನು ದಿಢೀರ್ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಚರಣ್ ಜಿತ್ ಸಿಂಗ್ ಚೆನ್ನಿ ಅವರನ್ನು ಆ ಹುದ್ದೆಗೆ ತಂದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ವಿರುದ್ಧ ಹರಿಹಾಯ್ದಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದಾಗಿನಿಂದಲೂ ಅಮರಿಂದರ್ ಸಿಂಗ್ ಅವರು ಸಿಧು ವಿರುದ್ಧ ಕತ್ತಿ ಝಳಪಿಸುತ್ತಲೇ ಇದ್ದಾರೆ
ಪಂಜಾಬ್ ಭವಿಷ್ಯಕ್ಕಾಗಿ ಹೋರಾಡಲು ಹೊಸ ಪಕ್ಷವನ್ನು ಶೀಘ್ರವೇ ಸ್ಥಾಪಿಸುತ್ತೇನೆ. ಪಂಜಾಬ್ ಮತ್ತು ಜನರ ಹಿತಕ್ಕಾಗಿ, ರೈತರು ತಮ್ಮ ಹಕ್ಕುಗಳಿಗಾಗಿ ಒಂದು ವರ್ಷದಿಂದಲೂ ಹೋರಾಡುತ್ತಿದ್ದು ಅವರ ಏಳ್ಗೆಗಾಗಿ ಹೊಸ ಪಕ್ಷದ ಅಗತ್ಯವಿದೆ ಎಂದು ಕ್ಯಾಪ್ಟನ್ ಹೇಳಿದ್ದಾರೆ.
ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿದ ಅನುಭವ ಇರುವ ಅಮರಿಂದರ್ ಸಿಂಗ್ “ನಮ್ಮ ಜನರು ಮತ್ತು ರಾಜ್ಯದ ರಕ್ಷಣೆಗಾಗಿ ಅವಿಶ್ರಾಂತ ಹೋರಾಟ ನಡೆಸುತ್ತೇನೆ. ರಾಜ್ಯದಲ್ಲಿ ಸ್ಥಿರತೆ ನೆಲೆಸುವಂತೆ ಮಾಡುವುದು, ಹೊರಗಿನ ಮತ್ತು ಆಂತರಿಕ ಶಕ್ತಿಗಳಿಂದ ಬೆದರಿಕೆ ಇದ್ದು, ರಾಜ್ಯದಲ್ಲಿ ಶಾಂತಿ ಮತ್ತು ಭದ್ರತೆ ಕಲ್ಪಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆಂದು ಜನರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ” ಎಂದಿದ್ದಾರೆ.
2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸಿದರೆ ಬಿಜೆಪಿಯೊಂದಿಗೆ ಸೀಟು ಹಂಚಿಕೆ ಮಾಡಿಕೊಳ್ಳುತ್ತೇನೆ. ಜೊತೆಗೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿಗೆ ಸಿದ್ದ” ಎಂದು ಹೇಳಿದ್ದಾರೆ.
ಅಕಾಲಿ ಶಿರೋಮಣಿ ದಳದಿಂದ ಉಚ್ಚಾಟಿತರಾಗಿರುವ ದಿಂಡ್ಸಾ ಮತ್ತು ಬ್ರಹ್ಮಾಪುರ ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಉದ್ದೇಶವಿದೆ. ಪಂಜಾಬ್, ಹರ್ಯಾಣ, ಉತ್ತರಪ್ರದೇಶದ ಸಾವಿರಾರು ರೈತರು ದೆಹಲಿ ಗಡಿಗಳಲ್ಲಿ ಕಳೆದ ವರ್ಷದ ನವೆಂಬರ್ 26ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಶಿರೋಮಣಿ ಅಕಾಲಿ ದಳದಿಂದ ಉಚ್ಚಾಟಿತರಾಗಿರುವ ಸುಖದೇವ ಸಿಂಗ್ ದಿಂಡ್ಸಾ ಮತ್ತು ರಂಜಿತ್ ಸಿಂಗ್ ಬ್ರಹ್ಮಪುರ್ ಮೊದಲಿಗೆ ಎಸ್ಎಡಿ (ಪ್ರಜಾಪ್ರಭುತ್ವ), ಎಸ್ಎಡಿ (ತಕ್ಸಾಲಿ) ಎಂಬ ಎರಡು ಪಕ್ಷಗಳನ್ನು ಕಟ್ಟಿಕೊಂಡಿದ್ದರು. ನಂತರ ಅವರೆಡೂ ಪಕ್ಷಗಳನ್ನು ಒಂದುಗೂಡಿಸಿ ಶಿರೋಮಣಿ ಅಕಾಲಿ ದಳ(ಸಂಯುಕ್ತ) ಎಂಬ ಪಕ್ಷ ಸ್ಥಾಪನೆ ಮಾಡಿಕೊಂಡಿದ್ದಾರೆ. ಹಾಗಾಗಿ ಅಮರಿಂದರ್ ಸಿಂಗ್ ಇವರ ಜೊತೆ ಮೈತ್ರಿಗೂ ಸಿದ್ದತೆ ನಡೆಸಿದ್ದಾರೆ.