ಲಖಿಂಪುರ ಖೇರಿ ರೈತರ ಹತ್ಯಾ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಉತ್ತರ ಪ್ರದೇಶ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಬೇಸರ ವ್ಯಕ್ತಪಡಿಸಿತು. ರಾಜ್ಯ ಸರ್ಕಾರ ಆರೋಪಿಗಳ ಬಗ್ಗೆ ಮೃದುಧೋರಣೆ ಹೊಂದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತು.
ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ನೇತೃತ್ವದ ಪೀಠ, ಆರು ಮಂದಿ ಆರೋಪಿಗಳ ವಿವರವನ್ನು ನೀಡುವಂತೆ ಕೇಳಿತು.
ಹಿರಿಯ ವಕೀಲ ಹರೀಶ್ ಸಾಳ್ವೆ ಮುಚ್ಚಿದ ಲಕೋಟೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ “ಇಲ್ಲ, ಅದು ಅವಶ್ಯವಿಲ್ಲ. ನಾವು ಈಗ ಅದನ್ನು ಸ್ವೀಕರಿಸಿದ್ದೇವೆ. ನಾವು ಯಾವುದೋ ಫೈಲಿಂಗ್ ಗಾಗಿ ನಿನ್ನೆ ರಾತ್ರಿ 1 ಗಂಟೆಯವರೆಗೆ ಕಾಯುತ್ತಿದ್ದೆವು. ಆದರೆ ನಾವು ಏನನ್ನೂ ಸ್ವೀಕರಿಸಿಲ್ಲ” ಎಂದು ಹೇಳಿದರೆಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
“ನಾವು ಎಂದಿಗೂ ಮುಚ್ಚಿದ ಕವರ್ ಗಳ ಬಗ್ಗೆ ಏನನ್ನೂ ಹೇಳಿಲ್ಲ” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದರು. ರಾಜ್ಯ ಆರೋಪಿಗಳ ಬಗ್ಗೆ ಮೃದು ಧೋರಣೆಯಿಂದ ವರ್ತಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಹರೀಶ್ ಸಾಳ್ವೆ “ಈಗ ಎಲ್ಲರನ್ನು ಬಂಧಿಸಲಾಗಿದೆ. ಅವರು ಜೈಲಿನಲ್ಲಿದ್ದಾರೆ. ಇದುವರೆಗೂ 10 ಆರೋಪಿಗಳನ್ನು ಬಂಧಿಸಿದ್ದು ಅವರಲ್ಲಿ ನಾಲ್ವರು ಪೊಲೀಸರ ವಶದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.
ಆಗ ನ್ಯಾಯಾಲಯ ಇತರೆ ಆರು ಮಂದಿ ಆರೋಪಿಗಳನ್ನು ಜೈಲಿನಲ್ಲಿ ಇಟ್ಟಿಲ್ಲ ಏಕೆ? ಈ ಪ್ರಕರಣದಲ್ಲಿ ಪರಿಸ್ಥಿತಿ ಏನನ್ನು ತಿಳಿಸುತ್ತದೆ ಎಂದು ಪ್ರಶ್ನಿಸಿತು. ಜೊತೆಗೆ ಈ ಪ್ರಕರಣದಲ್ಲಿ 44 ಸಾಕ್ಷ್ಯಗಳಿದ್ದು ಇದುವರೆಗೆ ಕೇವಲ ನಾಲ್ಕು ಸಾಕ್ಷಿಗಳ ಹೇಳಿಕೆಯನ್ನು ಮಾತ್ರ ಪಡೆಯಲಾಗಿದೆ. ಉಳಿದ ಸಾಕ್ಷ್ಯಗಳ ಹೇಳಿಕೆ ಎಲ್ಲಿ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತು. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 26ಕ್ಕೆ ಮುಂದೂಡಿತು.