ಪಕ್ಷದ ಕಚೇರಿಗಳ ಮೇಲೆ ದಾಳಿ ನಡೆಸಿರುವ ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿಯನ್ನು ಖಂಡಿಸಿ ಆಂಧ್ರಪ್ರದೇಶ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ತೆಲುಗುದೇಶ ಪಕ್ಷದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಸಂಜೆ ಟಿಡಿಪಿ ರಾಷ್ಟ್ರೀಯ ಕಚೇರಿ ಮೇಲೆ ದಾಳಿ ಮಾಡಿದ ವೈಎಸ್ ಆರ್ ಕಾಂಗ್ರೆಸ್ ಕಾರ್ಯಕರ್ತರು ಪೀಠೋಕರಣ ಮತ್ತು ಇತರೆ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ವೈಎಸ್.ಆರ್ ಕಾಂಗ್ರೆಸ್ ಗೂಂಡಾಗಳು ಟಿಡಿಪಿ ಕಚೇರಿಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದು ಗಾಯಗೊಳಿಸಿದ್ದಾರೆ. ಟಿಡಿಪಿ ವಕ್ತಾರ ಪಟ್ಟಾಭಿ ರಾಮ್ ಮನೆ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ.
ವಿಶಾಖಪಟ್ಟಣದ ಮಂಗಲಗಿರಿಯ ಟಿಡಿಪಿ ಪಕ್ಷದ ಮುಖ್ಯಕಚೇರಿಯ ಮೇಲೆ ದಾಳಿ ನಡೆಸಿರುವುದನ್ನು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ದು ತೀವ್ರವಾಗಿ ಖಂಡಿಸಿದ್ದಾರೆ. “40 ವರ್ಷದ ನನ್ನ ರಾಜಕೀಯ ಜೀವನದಲ್ಲಿ ಇಂತಹ ಅವಮಾನವನ್ನು ಅನುಭವಿಸಿರಲಿಲ್ಲ. ನಮ್ಮ ಮುಖಂಡರ ಮೇಲೆ ಹಲವು ದಾಳಿಗಳು ನಡೆದವು. ಹಲವರನ್ನು ಬಂಧಿಸಿ ಹಿಂಸೆಗೆ ಒಳಪಡಿಸಿದಿರಿ. ಅವಮಾನ ಮಾಡಿದಿರಿ. ಆದರೂ ಎಲ್ಲವನ್ನು ಸಹಿಸಿಕೊಂಡು ಬರುತ್ತಿದ್ದೇವೆ. ನಿನ್ನೆ ದಾಳಿಯೂ ಹಿಂಸೆ ನೀಡುವುದರ ಭಾಗವಾಗಿದೆ” ಎಂದು ವಾಗ್ದಾಳಿ ನಡೆಸಿದರು.
ಪ್ರಮುಖ ನಾಯಕರು ಮತ್ತು ಮುಖಂಡರನ್ನು ಗೃಹಬಂಧನದಲ್ಲಿ ಇರಿಸಿರುವುದರಿಂದ ಬಂದ್ ಗೆ ಸಾಕಷ್ಟು ಬೆಂಬಲ ಸಿಕ್ಕಿಲ್ಲ. ಆದರು ವೈಎಸ್.ಆರ್. ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನೆಗಳು ನಡೆದಿವೆ.
ಅಧಿಕಾರ ನಡೆಸಲು ಸಾಧ್ಯವಾಗದಿದ್ದರೆ ಮನೆಗೆ ಹೋಗಲಿ. ಅದು ಬಿಟ್ಟು ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ಗೂಂಡಾಗಿರಿ ನಡೆಸುವುದು ಸರಿಯಲ್ಲ ಎಂದು ಚಂದ್ರಬಾಬು ನಾಯ್ದು ಟೀಕಿಸಿದ್ದಾರೆ.