ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿರುವ ಶಂಕಿತ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವ ಹಿನ್ನೆಲೆಯಲ್ಲಿ ಸ್ಥಳೀಯರು ಮನೆಗಳಿಗೆ ಮರಳುವಂತೆ ಮಸೀದಿಯ ಧ್ವನಿವರ್ಧಕದ ಮೂಲಕ ಮನವಿ ಮಾಡಲಾಗಿದೆ.
ಕಳೆದ ಒಂದು ವಾರದ ಹಿಂದೆ ಶಂಕಿತ ಉಗ್ರರು ನಾಗರಿಕರನ್ನು ಹತ್ಯೆ ಮಾಡಿದ್ದು ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆ. ಭದ್ರತಾ ಪಡೆಗಳು ಮತ್ತು ಭಾರತೀಯ ಸೇನೆ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸುತ್ತಿದೆ. ಹಾಗಾಗಿ ಸೌತಿ, ನಾರ್, ಬಹತ್ ದುರಿಯನ್ ಗ್ರಾಮಗಳಿಂದ ಹೊರಗೆ ಹೋಗಿರುವವರು ಶೀಘ್ರವೇ ಮನೆಗಳಿಗೆ ಮರಳುವಂತೆ ಮನವಿ ಮಾಡಲಾಗಿದೆ.
ಈ ಗ್ರಾಮಗಳ ಜನರು ತಮ್ಮ ಮಕ್ಕಳೊಂದಿಗೆ ಹುಲ್ಲು ತರಲು ಮತ್ತು ಗೋಧಿ ಬೆಳೆಯನ್ನು ಕಟಾವು ಮಾಡಲು ಹೊಲಗಳಿಗೆ ಹೋಗಿದ್ದಾರೆ. ಹಾಗಾಗಿ ಶಂಕಿತ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ತೊಂದರೆಯಾಗದಂತೆ ಮತ್ತು ಸಾವು ನೋವು ಸಂಭವಿಸದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.
ಸ್ಥಳೀಯ ಗ್ರಾಮಸ್ಥರು ಮಸೀದಿಯ ಧ್ವನಿವರ್ಧಕದ ಮೂಲಕ ಹೊಲಗಳಿಗೆ ತೆರಳಿರುವವರಿಗೆ ಮನೆಗೆ ಮರಳುವಂತೆ ಮನವಿ ಮಾಡಿರುವುದನ್ನು ದೃಢಪಡಿಸಿದ್ದಾರೆ. ಹೊಲಗಳಿಗೆ ಹೋಗಿರುವವರು ತಮ್ಮ ಮಕ್ಕಳೊಂದಿಗೆ ಮನೆಗೆ ಬಂದು ಸೇರಿಕೊಳ್ಳಬೇಕು. ಯಾರೂ ಕೂಡ ಮನೆಯಿಂದ ಹೊರಗೆ ಬರಬಾರದು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಶಾಲಾ ಮುಖ್ಯೋಪಾಧ್ಯಾಯನಿ ಮತ್ತು ಓರ್ವ ಶಿಕ್ಷಕ ಮತ್ತು ಇಬ್ಬರು ಬಿಹಾರದ ಕಾರ್ಮಿಕರನ್ನು ಉಗ್ರರು ಹತ್ಯೆಗೈದಿದ್ದರು ಅಲ್ಲದೆ ಉಗ್ರರ ವಿರುದ್ಧದ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಸೇನೆ ಮುಂದಾಗಿದೆ.