ಉತ್ತರ ಪ್ರದೇಶ ಪೊಲೀಸರ ವಶದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ತೆರಳುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಲಕ್ನೋ-ಆಗ್ರಾ ಎಕ್ಸ್ ಪ್ರೆಸ್ ವೇ ಮಾರ್ಗಮಧ್ಯದಲ್ಲೇ ಪೊಲೀಸರು ತಡೆದು ವಾಪಸ್ ಕಳಿಸಿದ ಘಟನೆ ವಾಲ್ಮಿಕಿ ಜಯಂತಿಯಂದು ನಡೆದಿದೆ.
ಅರುಣ್ ವಾಲ್ಮಿಕಿ 25 ಲಕ್ಷ ರೂಪಾಯಿ ಕಳವು ಮಾಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಪೊಲೀಸರ ವಶದಲ್ಲಿಯೇ ಅರುಣ್ ವಾಲ್ಮೀಕಿ ಮೃತಪಟ್ಟಿದ್ದರು. ಈ ಘಟನೆಯಲ್ಲಿ ಅರುಣ್ ಹೇಗೆ ಮೃತಪಟ್ಟರು ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲವಾದರೂ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹಾಗಾಗಿ ಮೃತ ಅರುಣ್ ವಾಲ್ಮೀಕಿ ಅವರ ಕುಟುಂಬವನ್ನು ಭೇಟಿ ಮಾಡಲು ಆಗ್ರಾಕ್ಕೆ ಪ್ರಿಯಾಂಕ ಗಾಂಧಿ ಕಾರಿನ ಮೂಲಕ ತೆರಳುತ್ತಿದ್ದರು. ಆಗ್ರಾಕ್ಕೆ ಹೋಗುವ ಮೊದಲೇ ಪ್ರಿಯಾಂಕ ಗಾಂಧಿ ಅವರ ಕಾರನ್ನು ತಡೆದ ಪೊಲೀಸರು ಬಲವಂತವಾಗಿ ವಾಪಸ್ ಕಳಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕ ಗಾಂಧಿ “ಅರುಣ್ ವಾಲ್ಮೀಕಿ ಪೊಲೀಸರ ವಶದಲ್ಲಿ ಸಾವನ್ನಪ್ಪಿದ್ದಾರೆ. ಆತನ ಕುಟುಂಬ ನ್ಯಾಯದ ನಿರೀಕ್ಷೆಯಲ್ಲಿದೆ. ನಾನು ಆಗ್ರಾಕ್ಕೆ ಭೇಟಿ ನೀಡಿ ಮೃತರ ಕುಟುಂಬವನ್ನು ಸಂಪರ್ಕಿಸಲು ಉತ್ತರ ಪ್ರದೇಶ ಸರ್ಕಾರ ಏಕೆ ಹೆದರಿಕೊಳ್ಳುತ್ತಿದೆ. ನನ್ನೇಕೆ ಪೊಲೀಸರು ತಡೆದಿದ್ದಾರೆ. ಇಂದು ವಾಲ್ಮೀಕಿ ಜಯಂತಿ. ಬುದ್ದನ ಬಗ್ಗೆ ಪ್ರಧಾನಿ ಇಂದು ಭಾಷಣ ಮಾಡಿದ್ದಾರೆ” ವ್ಯಂಗ್ಯ ಮಾಡಿದ್ದಾರೆ.
ಪೊಲೀಸರು ಹೇಳುವ ಪ್ರಕಾರ “ಪ್ರಿಯಾಂಕ ಗಾಂಧಿ ಆಗ್ರಾಕ್ಕೆ ತೆರಳಿ ಮೃತನ ಕುಟುಂಬವನ್ನು ಭೇಟಿ ಮಾಡಲು ಯಾವುದೇ ಅನುಮತಿ ಪಡೆದಿಲ್ಲ. ಹಾಗಾಗಿ ಅವರನ್ನು ತಡೆದು ವಾಪಸ್ ಕಳಿಸಿದ್ದೇವೆ” ಎಂದು ಹೇಳಿದ್ದಾರೆ.
ರಸ್ತೆಯಲ್ಲಿ ಕಾರಿನಿಂದ ಪ್ರಿಯಾಂಕ ಹೊರಗೆ ಇಳಿಯುತ್ತಿದ್ದಂತೆಯೇ ಮುತ್ತಿಕೊಂಡ ಮಹಿಳಾ ಪೊಲೀಸರು ಪ್ರಿಯಾಂಕ ಗಾಂಧಿ ಜೊತೆ ಸೆಲ್ಫಿ ತೆಗೆದುಕೊಂಡರು. ಜನರೂ ಕೂಡ ಪ್ರಿಯಾಂಕ ಅವರನ್ನು ಸುತ್ತುವರಿದ ಪ್ರಸಂಗ ನಡೆಯಿತು. ಈ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದ್ದು ಸಾಕಷ್ಟು ವೈರಲ್ ಆಗಿವೆ.