ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕುರಿತು ಕರ್ನಾಟಕ ವಿಧಾನಸಭೆಯ ಸದನ ಸಮಿತಿಯು ರಾಜ್ಯದಲ್ಲಿ ಕ್ರಿಶ್ಚಿಯನ್ ಮಿಷನರಿ ಕಾರ್ಯಗಳ ಸಮೀಕ್ಷೆಗೆ ಆದೇಶಿಸಲು ನಿರ್ಧರಿಸಿದ ಕೆವೇ ದಿನಗಳ ನಂತರ ಕ್ರಿಶ್ಚಿಯನ್ ಸಮುದಾಯ ಇದನ್ನು ತೀವ್ರವಾಗಿ ವಿರೋಧಿಸಿದೆ. ಈ ಆದೇಶವು ಗಂಭೀರ ಅಪರಾಧವೆಂದು ಆರೋಪಿಸಿದಂತೆ ತೋರುತ್ತದೆ ಎಂದು ಹೇಳಿದೆ.
ಮತಾಂತರದ ವಿರಳ ಮತ್ತು ಅತ್ಯಲ್ಪ ಘಟನೆಗಳು ಇಡೀ ಸಮುದಾಯವನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವಂತೆ ಆಗಬಾರದು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆದೇಶವನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಇಲ್ಲದಿದ್ದರೆ ಕ್ರಿಶ್ಚಿಯನ್ ಸಮುದಾಯ ಹೋರಾಟ ನಡೆಸಲಿದೆ ಎಂದು ಕರ್ನಾಟಕ ಪ್ರದೇಶ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ ಅಧ್ಯಕ್ಷ ರೆವರೆಂಡ್ ಫೀಟರ್ ಮಚಾಡೋ ಹೇಳಿದ್ದಾರೆಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಎಲ್ಲಾ ಸಮುದಾಯಗಳ ಕುರಿತು ಸರ್ವೆ ನಡೆಸಲಿ. ಅದು ಬಿಟ್ಟು ಕೇವಲ ಕ್ರಿಶ್ಚಿಯನ್ ನಂಬಿಕೆಯುಳ್ಳವರ ಬಗ್ಗೆ ಸರ್ವೇ ನಡೆಸುವುದು ಸೂಕ್ತವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ವಿಧಾನಸಭೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ‘ರಾಜ್ಯದಲ್ಲಿ ಮತಾಂತರ ನಡೆಯುತ್ತಿದೆ. ನನ್ನ ತಾಯಿಯೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದಾರೆ. ಹಾಗಾಗಿ ಚರ್ಚ್ ಕೆಲಸದಲ್ಲಿ ತೊಡಗಿರುವ ಅಧಿಕೃತ ಮತ್ತು ಅನಧಿಕೃತ ವ್ಯಕ್ತಿಗಳ ಸಂಖ್ಯೆ ಎಷ್ಟು ಎಂಬುದನ್ನು ಪತ್ತೆ ಮಾಡಬೇಕೆಂದು ಆಗ್ರಹಿಸಿದ್ದರು.
ಕ್ರಿಶ್ಚಿಯನ್ ಸಂಸ್ಥೆಗಳು ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದಶಕಗಳ ಕಾಲ ಜನರ ಸೇವೆಯಲ್ಲಿ ತೊಡಗಿರುವುದನ್ನು ಪತ್ರದಲ್ಲಿ ಪ್ರಸ್ತಾಪಿಸಿರುವ ಮಚಾಡೋ ಈ ಅವಧಿಯಲ್ಲಿ ಒಂದೇ ಒಂದು ಬಲವಂತದ ಮತಾಂತರ ಪ್ರಕರಣವೂ ನಡೆದಿಲ್ಲ ಎಂದು ಹೇಳಿದ್ದಾರೆ.
ದೂರುದಾರ ಎಲ್ಲಿಂದ ಬಂದರು? ತಪ್ಪು ಮತ್ತು ದೋಷಪೂರಿತ ಸುದ್ದಿಯ ಹಿಂದಿನ ಪ್ರಭಾವ ಏನು ಎಂಬುದಕ್ಕೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಬೇಕು. ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಗಂಭೀರ ಸ್ವರೂಪದ ಮತಾಂತರ ವಿರೋಧಿ ಕಾಯ್ದೆಯನ್ನು ತರುತ್ತಿದ್ದಾರೆ. ನಾವು ಇಂತಹ ಕಾಯ್ದೆಗಳು ಬೇರೆ ರಾಜ್ಯದಲ್ಲೂ ಇವೆಯೇ ಎಂಬ ಬಗ್ಗೆ ನೋಡುತ್ತಿದ್ದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ವಾತಂತ್ರದ ದಿನಗಳಿಂದಲೂ ಮತಾಂತರವಾಗಿದ್ದರೆ ಕ್ರಿಶ್ಚಿಯನ್ ಸಮುದಾಯದ ಸಂಖ್ಯೆ ಹೆಚ್ಚಳವಾದ ಬಗ್ಗೆ ಸರ್ಕಾರ ದೃಢಪಡಿಸಬೇಕಾಗಿತ್ತು. ಆದರೆ ಮತಾಂತರ ಆಗಿದ್ದರೆ ಅದೆಲ್ಲವೂ ಹೊರಬರಲಿ. ರಾಜಕೀಯ ಪಕ್ಷಗಳು ರಾಜಕೀಯ ಕಾರ್ಯಸೂಚಿ ಹೊಂದಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ಮತಾಂತರ ವಿರೋಧಿ ಮಸೂದೆಯನ್ನು ಕ್ರಿಶ್ಚಿಯನ್ ಸಮುದಾಯ ವಿರೋಧಿಸುತ್ತದೆ. ಒಮ್ಮೆ ಮಸೂದೆಯನ್ನು ಅಂಗೀಕರಿಸಿ ಕಾನೂನಾಗಿ ಜಾರಿಗೆ ತಂದರೆ ರಾಜ್ಯದಲ್ಲಿ ದೊಡ್ಡಮಟ್ಟ ಕೋಮುಗಲಭೆಗಳು ಆಗುವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಕೋಮುವಾದಿ ಶಕ್ತಿಗಳಿಗೆ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡಿದಂತೆ ಆಗುತ್ತದೆ. ಅನೈತಿಕ ಪೊಲೀಸ್ ಗಿರಿ ಹೆಚ್ಚಳವಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾರೆ.