ಲಖಿಂಪುರ್ ಖೇರಿ ರೈತರ ಹತ್ಯಾ ಪ್ರಕರಣಕ್ಕೆ ಕಾರಣರಾದ ಕೇಂದ್ರ ಸಚವಿ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ರೈಲು ರೋಖೋ ಪ್ರತಿಭಟನೆ ನಡೆಯುತ್ತಿದೆ. ಎಲ್ಲೆಡೆ ರೈಲು ಸಂಚಾರಕ್ಕೆ ಸಂಪೂರ್ಣ ತಡೆ ಹಾಕಿರುವ ಸಾವಿರಾರು ರೈತರು ವಿವಾದಾತ್ಮ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಲಖಿಂಪುರ್ ಖೇರಿಯಲ್ಲಿ ಪ್ರತಿಭಟನೆಯಲ್ಲಿ ತೆರಳುತ್ತಿದ್ದ ರೈತರ ಮೇಲೆ ಅಕ್ಟೋಬರ್ 3ರಂದು ಎಸ್.ಯುವಿ ವಾಹನ ಹರಿಸಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ವಾಹನದಲ್ಲಿ ಸಚಿವ ಅಜಯ್ ಮಿಶ್ರಾ ಪುತ್ರ ಅಶಿಶ್ ಕೂಡ ಇದ್ದರು ಎಂಬ ಬಗ್ಗೆ ವಿಡಿಯೋ ವೈರಲ್ ಆಗಿತ್ತು. ಈ ಘಟನೆ ಖಂಡಿಸಿ ರೈತರು ರೈಲು ತಡೆ ಚಳವಳಿ ಮಾಡುತ್ತಿದ್ದಾರೆ.
ಪ್ರಮುಖವಾಗಿ ಹರ್ಯಾಣ, ಪಂಜಾಬ್, ಉತ್ತರಪ್ರದೇಶ, ಪಶ್ಚಿಮಬಂಗಾಳ ಸೇರಿದಂತೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಕಡೆ ರೈಲು ರೋಖೋ ಪ್ರತಿಭಟನೆಗಳು ನಡೆದಿವೆ. ನೂರಾರು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ರೈತರು ಹಳಿಗಳ ಮೇಲೆ ಕುಳಿತು ಸಚಿವರ ವಜಾಕ್ಕೆ ಆಗ್ರಹಿಸಿದ್ದಾರೆ.
ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿರುವ ರೈಲು ತಡೆ ಚಳವಳಿ ಅಪರಾಹ್ನ 4ಗಂಟೆಯವರೆಗೆ ನಡೆಯಲಿದೆ. ಸತತವಾಗಿ 6 ಗಂಟೆ ಕಾಲ ರೈಲುಗಳನ್ನು ತಡೆದು ಕೇಂದ್ರ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದೆ ರೈತ ಸಮೂಹ. ಕಳೆದ ಒಂದು ವರ್ಷದಿಂದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ, ಭಾರತ್ ಬಂದ್ ನಡೆಸಿದರು ಕೇಂದ್ರ ಸರ್ಕಾರ ಇತ್ತ ಗಮನಹರಿಸಿಲ್ಲ ಎಂದು ಪ್ರತಿಭಟನಾನಿರತ ರೈತರು ದೂರಿದ್ದಾರೆ.
ಫೆರೋಜ್ ಪುರ್ – ಫಜಲ್ಕ್ ಮಾರ್ಗದ ರೈಲುಗಳನ್ನು ತಡೆಯಲಾಗಿದೆ. ಅಜಲ್ ವಾಲ್, ಲೂದಿಯಾನ ಮೊದಲಾದ ಕಡೆ ರೈಲ್ವೆ ಮಾರ್ಗದ ಮೇಲೆ ಕುಳಿತಿರುವ ರೈತರು ಸಚಿವರನ್ನು ವಜಾಗೊಳಿಸಬೇಕು ಮತ್ತು ಕೃಷಿ ಕಾಯ್ದೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಪಂಜಾಬ್ ರಾಜ್ಯದ 11 ಜಿಲ್ಲೆಗಳಲ್ಲಿ 20 ಕಡೆ ರೈಲು ತಡೆಗಳು ನಡೆದಿವೆ. ಪಶ್ಚಿಮ ಬಂಗಾಳ, ಹರ್ಯಾಣ, ಉತ್ತರ ಪ್ರದೇಶದ ಬಹುತೇಕ ಕಡೆಗಳಲ್ಲಿ ರೈಲು ಹಳಿಗಳ ಮೇಲೆ ಕುಳಿತು ರೈತರು ಪ್ರತಿಭಟನೆ ಮುಂದುವರಿಸಿದ್ದಾರೆ. ಒಂದು ಕಡೆ ಬಿಸಿಲಿನ ತಾಪ ಇದ್ದರು ಸುಡು ಹಳಿಗಳ ಮೇಲೆ ರೈತರು ಮಲಗಿ, ಕುಳಿತು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.