ಕಾಶ್ಮೀರ ಕಣಿವೆಯಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ಉಗ್ರರು ಸ್ಥಳೀಯರು ಹಾಗೂ ವಲಸೆ ಕಾರ್ಮಿಕ ರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿದ್ದಾರೆ. ಅಪರಿಚಿತ ದುಷ್ಕರ್ಮಿಗಳು ಇಬ್ಬರು ಬಿಹಾರಿ ಕಾರ್ಮಿಕರನ್ನು ಗುಂಡಿಕ್ಕಿ ಕೊಂದು ಹಾಕಿದ್ದಾರೆ.
ಮೃತರನ್ನು ರಾಜಕೇಶಿದೇವ್ ಮತ್ತು ಜೋಗಿಂದರರ್ ಕೇಶಿದೇವ್ ಎಂದು ಗುರುತಿಸಲಾಗಿದೆ. ಅಪರಿಚಿತ ದುಷ್ಕರ್ಮಿಗಳು ಗುಂಡು ಹೊಡೆಯುತ್ತಿದ್ದಂತೆಯೇ ಈ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಚುನ್ ಚುನ್ ದೇವ್ ಕುಲ್ಗಾಮ್ ಲಾರಾನ ಗಜ್ನಿಪೋ ಪ್ರದೇಶದಲ್ಲಿ ಗಾಯಗೊಂಡಿದ್ದು ಆತನನ್ನು ಅನಂತ್ ನಾಗ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಲ್ಗಾಮ್ ಲಾರಾನ ಗಜ್ನಿಫೊ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು ಉಗ್ರರನ್ನು ಜೀವಂತ ಇಲ್ಲವೇ ಶವವಾಗಿ ಹಿಡಿಯಲು ಪ್ರಯತ್ನಗಳು ನಡೆದಿವೆ. ಉಗ್ರರಿಗಾಗಿ ಶೋಧ ಕಾರ್ಯವೂ ಮುಂದುವರಿದಿದೆ. ಆದರೆ ಇದುವರೆಗೂ ಉಗ್ರರ ಸುಳಿವು ಪತ್ರೆಯಾಗಿಲ್ಲ.
ಪೂಂಚ್ ಜಿಲ್ಲೆಯಲ್ಲಿ ಕೂಂಬಿಂಗ್ ನಡೆಯುತ್ತಿದೆ. ಗಡಿ ಜಿಲ್ಲೆಗಳ ಮೆಂಧರ್-ಡೆಹ್ರಾ ಕಿ ಗಾಲಿ-ಧಾನಮಂಡಿ ಮತ್ತು ಭಿಂಬರ್ ಗಾಲಿ ನಡುವಿನ ದಟ್ಟ ಅರಣ್ಯದಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಭಾನುವಾರ 45 ವರ್ಷದ ಮಹಿಳೆ ಮತ್ತು ಆಕೆ ಪುತ್ರ ಸೇರಿದಂತೆ ಮೂವರು ಸ್ಥಳೀಯರವನ್ನು ಭಟ್ಟ ದುರಿಯನ್ ನಲ್ಲಿ ಬಂಧಿಸಿದ್ದಾರೆ.
ಪೂಂಚ್ ಮತ್ತು ರಜೌರಿಯಲ್ಲಿ ಉಗ್ರರಿಗಾಗಿ ಶೋಧ ಕಾರ್ಯ 7ನೇ ದಿನವೂ ಮುಂದುವರಿದಿದೆ. ಉಗ್ರರ ಮತ್ತು ಭದ್ರತ ಪಡೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ಕು ಮಂದಿ ಭಾರತೀಯ ಯೋಧರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.