ಜಯಲಲಿತಾ ಸ್ಮಾರಕಕ್ಕೆ ಭೇಟಿ ನೀಡಿದ ಮರುದಿನವೇ ಎಐಎಡಿಎಂಕೆ ಉಚ್ಛಾಟಿತ ನಾಯಕಿ ವಿ.ಕೆ.ಶಶಿಕಲ ಇಂದು ಚೆನ್ನೈನಲ್ಲಿ ಎಂಜಿಆರ್ ಸ್ಮಾರಕಕ್ಕೆ ಭೇಟಿ ಎಐಎಡಿಎಂಕೆ ಪಕ್ಷದ ನಾಮಫಲಕವನ್ನು ಅನಾವರಣಗೊಳಿಸಿದ್ದಾರೆ. ನಂತರ ನಾನೇ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದಾರೆ.
ಪಕ್ಷ ಮತ್ತು ಜನರ ಕಲ್ಯಾಣಕ್ಕಾಗಿ ಎಲ್ಲರೂ ಒಗ್ಗೂಡಬೇಕಾದ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಹಿಂದಿನ ದಿನ ಶಶಿಕಲಾ ಅವರು ರಾಮಪುರದ ಎಂಜಿಆರ್ ನಿವಾಸಕ್ಕೆ ಭೇಟಿ ನೀಡಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು ಮತ್ತು ಮಾಜಿ ಮುಖ್ಯಮಂತ್ರಿ ಜಾನಕಿ ರಾಮಚಂದ್ರನ್ ಅವರಿಗೂ ಇದೇ ವೇಳೆ ಪುಷ್ಪನಮನ ಸಲ್ಲಿಸಿದರು.
ಬೆಂಗಳೂರಿನ ಪರಪ್ಪ ಅಗ್ರಹಾರ ಜೈಲಿನಿಂದ ಫೆಬ್ರವರಿಯಲ್ಲಿ ಚೆನ್ನೈಗೆ ತೆರಳಿದ್ದ ವಿ.ಕೆ.ಶಶಿಕಲಾ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಮತ್ತು ಆಪ್ತಗೆಳತಿ ಜೆ.ಜಯಲಲಿತಾ ಸ್ಮಾರಕ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ್ದರು. ಜಯಲಲಿತಾ ಆಶೀರ್ವಾದ ಪಡೆದು ಮತ್ತೆ ರಾಜಕೀಯಕ್ಕೆ ಬರುವ ಮುನ್ಸೂಚನೆಯನ್ನು ನೀಡಿದ್ದರು.
2017ರಲ್ಲಿ ಶಶಿಕಲಾ ಕೊನೆಯ ಬಾರಿಗೆ ಸ್ಮಾರಕಕ್ಕೆ ಭೇಟಿ ನೀಡಿ ಆಕ್ರಮ ಆಸ್ತಿ ಪ್ರಕರಣದಲ್ಲಿ ತನ್ನನ್ನು ತಾನು ಶರಣಾಗಿಸಿಕೊಳ್ಳುವ ಮೊದಲು ಸ್ಮಾರಕದ ಅಮೃತಶಿಲೆಯ ಚಪ್ಪಡಿಗಳಿಗೆ ಬಡಿದು ಪ್ರತಿಜ್ಞೆ ಸ್ವೀಕರಿಸಿದ್ದರು.
ಶಶಿಕಲಾ ಅವರ ಭೇಟಿಯ ನಂತರ ನೂರಾರು ಅನುಯಾಯಿಗಳು ಟಿಟಿವಿ ದಿನಕರನ್ ಮತ್ತು ಎಐಎಡಿಎಂಕೆ, ಅಮ್ಮಾ ಮಕ್ಕಳ ಮುನ್ನೇತ್ರ ಕಳಗಂ ಧ್ವಜಗಳನ್ನು ಹಿಡಿದು ಅಕ್ಟೋಬರ್ 27ರಂದು ತಂಜಾವೂರಿನಿಂದ ಮೆರವಣಿಗೆ ನಡೆಸುವ ಸಾಧ್ಯತೆ ಇದೆ.
ಶನಿವಾರ ಜಯಲಲಿತಾ ಸ್ಮಾರಕದ ಮುಂದೆ ಕಣ್ಣೀರು ಶ್ರದ್ದಾಂಜಲಿ ಸಲ್ಲಿಸಿದ ಶಶಿಕಲಾ ಮಾಧ್ಯಮಗಳೊಂದಿಗೆ ಮಾತನಾಡಿ, ಅಮ್ಮ ಅವರನ್ನು ನನ್ನ ಜೀವನದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಕಳೆದ ಐದು ವರ್ಷದಲ್ಲಿ ನಾನು ಅನುಭವಿಸಿದ ನೋವುಗಳು ನನಗೆ ಪಾಠ ಕಲಿಸಿವೆ ಎಂದರು.
ಅಮ್ಮ ಮತ್ತು ತಲೈವರ್ ಇಬ್ಬರು ಪಕ್ಷ ಮತ್ತು ನಮ್ಮ ಕಾರ್ಯಕರ್ತರನ್ನು ಉಳಿಸುತ್ತಾರೆ ಎಂದು ನನಗೆ ಖಾತ್ರಿ ಇದೆ ಎಂದು ಹೇಳಿದರು.