ಪೊಲೀಸರ ದಿರಿಸು ಮಾತ್ರ ಯಾಕೆ ಬದಲಾಯಿಸಿದಿರಿ ಮುಖ್ಯಮಂತ್ರಿಗಳೇ? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟುಬಿಡಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸರು ಕೇಸರಿ ಶಾಲುಗಳನ್ನು ಕೊರಳಿಗೆ ಹಾಕಿಕೊಂಡು ಬಿಳಿ ಟೋಪಿ ಧರಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ “ಅಲ್ಲಿಗೆ ನಿಮ್ಮ ಜಂಗಲ್ ರಾಜ್ ಸ್ಥಾಪನೆಯ ಕನಸು ನನಸಾಗಬಹುದು ಎಂದು ಮುಖ್ಯಮಂತ್ರಿಗಳನ್ನು ಟೀಕಿಸಿದ್ದಾರೆ.
ಒಂದೆಡೆ ಅಮಾಯಕ ಯುವಕ-ಯುವತಿಯರ ಮೇಲೆ ಅನೈತಿಕ ಪೊಲೀಸ್ ಗಿರಿಯ ದೌರ್ಜನ್ಯ ನಡೆಯುತ್ತಿದೆ. ಇನ್ನೊಂದೆಡೆ ಶಾಸಕರಿಂದಲೇ ಠಾಣೆಗೆ ನುಗ್ಗಿ ಆರೋಪಿಗಳ ಬಿಡುಗಡೆ ಆಗುತ್ತಿದೆ. ಮತ್ತೊಂದು ಕಡೆ ಬಹಿರಂಗವಾಗಿ ತ್ರಿಶೂಲ ಹಂಚಿ ಹಿಂಸಾಚಾರಕ್ಕೆ ಕರೆ ನೀಡಲಾಗುತ್ತಿದೆ. ಇದಕ್ಕೆಲ್ಲ ಮುಖ್ಯಮಂತ್ರಿಗಳ ಬಹಿರಂಗ ಬೆಂಬಲ ಇದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಇದೆಯೇ? ಗೂಂಡಾಗಿರಿಯನ್ನು “ಕ್ರಿಯೆಗೆ ಪ್ರತಿಕ್ರಿಯೆ” ಎಂದು ಸಮರ್ಥಿಸಿದ ಮುಖ್ಯಮಂತ್ರಿಗಳ ಕರೆಗೆ ಓಗೊಟ್ಟು ಪೊಲೀಸರು ನೆಲದ ಕಾನೂನನ್ನು ಠಾಣೆಯೊಳಗೆ ಕೂಡಿಹಾಕಿ ಕಾಡಿನ ಕಾನೂನನ್ನು ಜಾರಿಗೆ ತರಲು ಬೀದಿಗೆ ಇಳಿದಂತೆ ಇದೆ ಎಂದು ಆಪಾದಿಸಿದ್ದಾರೆ.
ನಾಡಿನ ಜನತೆ ತಮ್ಮ ರಕ್ಷಣೆಗಾಗಿ ಮನೆಯೊಳಗೆ ಇರುವುದು ಕ್ಷೇಮಕರ. ಕರ್ನಾಟಕದ ಜನಪರವಾದ ಉತ್ತಮ ಆಡಳಿತಕ್ಕೆ ಒಂದು ಗೌರವದ ಪರಂಪರೆ ಇದೆ. ಇದು ಆದಿತ್ಯನಾಥ್ ಅವರ ಉತ್ತರಪ್ರದೇಶದ ಜಂಗಲ್ ರಾಜ್ ಅಲ್ಲ ಮುಖ್ಯಮಂತ್ರಿಗಳೇ! ಸಂವಿಧಾನಬದ್ದವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ದಯವಿಟ್ಟು ರಾಜಿನಾಮೆ ಕೊಟ್ಟು ಪ್ರಜಾಪ್ರಭುತ್ವ ಉಳಿಸುವಂತೆ ಒತ್ತಾಯಿಸಿದ್ದಾರೆ.
ಪೊಲೀಸರ ನಡವಳಿಕೆಗೆ ವ್ಯಾಪಕ ವಿರೋಧ:
ನಮ್ಮ ಸರ್ಕಾರಿ ಸಂಸ್ಥೆಗಳು ಸಂವಿಧಾನಿಕ ಜನತಂತ್ರ ತತ್ವದ ಮೇಲೆ ರೂಪುಗೊಂಡಿವೆಯೇ ಹೊರತು ಯಾವುದೇ ಧಾರ್ಮಿಕ ಹಾಗೂ ಮತೀಯ ಸಂಕೇತಗಳ ಹುಚ್ಚು ಸಂಸ್ಥೆಗಳಿಂದಲ್ಲ. ಸರ್ಕಾರದ ಪ್ರತಿನಿಧಿಗಳು ಈ ಅರಿವಿದ್ದ್ಉ , ಅರಿವುಗೇಡಿಗಳಂತೆ ವರ್ತಿಸುವುದು ಸಂವಿಧಾನ ವಿರೋಧೀ ನಡವಳಿಕೆಯಾಗಿದೆ. ಇದು ಖಂಡನಾರ್ಹ ಮತ್ತು ಪ್ರಶ್ನಾರ್ಹ ಎಂದು ಸಾಹಿತಿ ಪ್ರಕಾಶ್ ಮಂಟೇದ ಟೀಕಿಸಿದ್ದಾರೆ.
ಈ ದೇಶದಲ್ಲಿ ಸಂವಿಧಾನಿಕ ಸರ್ಕಾರಿ ಸಂಸ್ಥೆಗಳು ಇಲ್ಲದೆ ಹೋಗಿದ್ದರೆ ಈ ದೇಶ ಇಷ್ಟೊತ್ತಿಗೆ ಏನಾಗುತ್ತಿತ್ತು ಎಂಬುದನ್ನು ನೆನೆದರೆ ಭಯವಾಗುತ್ತದೆ. ಈ ದೇಶದಲ್ಲಿ ಧರ್ಮದ ನೆಪದಲ್ಲಿ ದೇವರ ಸ್ಥಾನದಲ್ಲಿ ಅನ್ಯಾಯವನ್ನು, ತಣ್ಣನೆಯ ಕ್ರೌರ್ಯವನ್ನು ಬಚ್ಚಿಡಲಾಗಿದೆ. ಇದು ಸರ್ಕಾರದ ಪ್ರತಿನಿಧಿಗಳಿಗೆ ಗೊತ್ತಿಲ್ಲವೆಂದೇನಲ್ಲ ಎಂದು ಹೇಳಿದ್ದಾರೆ.
ಓಟುಬ್ಯಾಂಕಿನ ಕಾರಣಕ್ಕೆ ಹೀಗೆ ಒಂದು ಪ್ರಜ್ಞಾಸರ್ಕಾರ ನೈತಿಕವಾಗಿ ವಲ್ಗರ್ ಆಗುತ್ತದೆ ಎಂಬುದೇ ಈ ದೇಶದ ಜನತೆ ರಾಜಕೀಯವಾಗಿ ಅಪ್ರಬುದ್ಧವರು ಎಂಬುದನ್ನು ನಿರೂಪಿಸುತ್ತದೆ. ವಿಶ್ವಗುರುವಿನ ಗಂಟೆ ಹೊಡೆವವರು ಈ ವಿಚಾರದಲ್ಲಿ ಜಗತ್ತಿನೆದುರು ನಾಚಿಕೆ ಇಲ್ಲದವರಂತೆ ಮಾತಾಡುತ್ತಾರೆ ಎಂದು ಹೇಳಿದ್ದಾರೆ.

ಅಂಬೇಡ್ಕರ್ ಅವರು ಈ ದೇಶ ಎಂಬುದರ ಕೇಂದ್ರದಲ್ಲಿ ನಾವು ನಮ್ಮ ಜಾತಿ, ಮತಧರ್ಮಗಳ ವಿಚಾರಗಳನ್ನಿಟ್ಟು ಗಣತಂತ್ರದ ಈ ದೇಶದ ಅರ್ಥವನ್ನು ಸಂಕುಚಿತಗೊಳಿಸಿ ಹಾಳುಮಾಡುತ್ತೇವೆಂದು ಎಚ್ಚರಿಸಿ ಹೋಗಿದ್ದಾರೆ. ಬಹುಸಂಖ್ಯಾತರು ಎಂಬ ಶೋಷಕ ಶಕ್ತಿಗಳು ಈ ವಿಚಾರದಲ್ಲಿ ಸಂವಿಧಾನದ ಅಧಿಕಾರದಡಿಯಲ್ಲೇ ಅಸಂವಿಧಾನಿಕ ನಡತೆಗಳನ್ನು ಪ್ರಕಟಿಸುತ್ತಿರುವುದರ ಉದ್ದೇಶ, ನಮಗೆ ಈ ಸಂವಿಧಾನ, ಗಣತಂತ್ರ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ ಎಂದು ಹೇಳಿ ಪ್ರಾಬಲ್ಯ ಮೆರೆಯುತ್ತಿದ್ದಾರೆ ಎಂದು ವಿವರಿಸಿದ್ದಾರೆ.
ಈ ಮೂಲಕ ಭಾರತದ ಅಂತಃಶಕ್ತಿಯನ್ನು ಮತೀಯಗೊಳಿಸಿ ಇಂಡಿಯಾದ ಪ್ರಜಾನೆಲೆಯನ್ನೇ ಹಾಳುಮಾಡುವ ಹುನ್ನಾರವನ್ನು ರಾಜಾರೋಷವಾಗಿ ಪ್ರಕಟಿಸಿದ್ದಾರೆ. ಇದು ಬಹುಸಂಖ್ಯಾತರು ಎಂಬ ಓಟ್ ಬ್ಯಾಂಕ್ ರಾಜಕಾರಣದ ಅತೀ ಎನ್ನಬಹುದು. ಇಂತಹ ಅಸಹ್ಯಗಳನ್ನು ಲಜ್ಜೆಗೇಡಿಗಳು ಮಾತ್ರ ಸಮರ್ಥಿಸುತ್ತಾರೆ. ಇದೆಲ್ಲ ಸರ್ಕಾರದ ಪ್ರತಿನಿಧಿಗಳಿಗೆ ಗೊತ್ತಿಲ್ಲವೆಂದಲ್ಲ. ಪಕ್ಷ, ಮತ, ಇವುಗಳೇ ಆತ್ಯಂತಿಕವಾದಾಗ ಈ ದೇಶ ತನ್ನ ಅಖಂಡತೆಯಿಂದ ದೂರಾಗುತ್ತದೆಂಬುದಂತು ಸತ್ಯ. ಜೈ ಭೀಮ್, ಜೈ ಭಾರತ್ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು ಕೇಸರಿ ಶಾಲು ಹಾಕಿಕೊಂಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ದಿರಿಸು ಬದಲಾಗಿದೆಯೇ ಎಂದು ಹಲವರು ಹುಬ್ಬೇರಿಸಿ ವ್ಯಂಗ್ಯ ಮಾಡಿದ್ದಾರೆ.
ಕಾಪು ಮತ್ತು ವಿಜಯಪುರ ಗ್ರಾಮೀಣ ಪೊಲೀಸರ ಗಮನಕ್ಕೆ :
ಅಫ್ಘಾನಿಸ್ತಾನದ ಪೊಲೀಸರನ್ನು ಅಲ್ಲಿನ ತಾಲೀಬಾನಿಗಳು ಕೊಲ್ಲುತ್ತಿದ್ದಾರೆ. ತಾಲೀಬಾನಿಗಳಾಗಲು ಒಪ್ಪದ ಪೊಲೀಸರು, ನ್ಯಾಯಾಧೀಶರು, ಪತ್ರಕರ್ತರ ಸರಣಿ ಕೊಲೆ ನಡೆಯುತ್ತಿದೆ. ಇಷ್ಟಾದರೂ ಅಫ್ಘಾನಿಸ್ತಾನ ಪೊಲೀಸರು ಯೂನಿಫಾರಂ ಕಳಚಿಲ್ಲ ಮತ್ತು ತಾಲೀಬಾನಿಗಳಂತೆ ವೇಷಭೂಷಣ ಬದಲಿಸಿಲ್ಲ ಎಂದು ಪತ್ರಕರ್ತ ನವೀನ್ ಸೂರಂಜೆ ಹೇಳಿದ್ದಾರೆ.


