ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರತಿಭಟನಾನಿರತ ರೈತರ ಮೇಲೆ ಹಿಂಸಾಚಾರ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಅಲ್ಪಸಂಖ್ಯಾತರ ಮೇಲೆ ರಾಜ್ಯ ಪ್ರಾಯೋಜಿತ ದಾಳಿ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲೆ ಹಲ್ಲೆ ನಡೆಯುತ್ತಿದೆ. ದೇಶದ ಭದ್ರತೆಗೆ ಆತಂಕ ಎದುರಾಗಿದೆ. ಆರ್ಥಿಕತೆಯ ಕುಸಿತವು ಬಹಳ ಕಳವಳಕಾರಿಯಾಗಿದೆ ಎಂದು ನಿರ್ಣಯ ಕೈಗೊಂಡಿದೆ.
ಮೋದಿ ಸರ್ಕಾರ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ಆಕ್ರಮಣವನ್ನು ನಾಚಿಕೆಯಿಲ್ಲದೆ ಪೂರ್ಣಗೊಳಿಸುತ್ತಿದೆ. ಚುನಾವಣಾ ನಿರಂಕುಶಾಧಿಕಾರದ ಹಣೆಪಟ್ಟಿ, ಸಂಸತ್ತನ್ನು ಕಡೆಗಣಿಸುವ ಮೂಲಕ ಅವಹೇಳನ ಮಾಡಲಾಗುತ್ತಿದೆ. ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೆ ನ್ಯಾಯಾಂಗವನ್ನು ದುರ್ಬಲಗೊಳಿಸಲಾಗುತ್ತಿದೆ. ಮಾಹಿತಿ ಆಯೋಗ, ಚುನಾವಣಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗದಂತಹ ಸ್ವಾಯತ್ತ ಸಂಸ್ಥೆಗಳನ್ನು ಕಡೆಗಣಿಸಲಾಗಿದೆ. ಮಾಧ್ಯಮಗಳ ಮೇಲೆ ದಾಳಿ ನಡೆಯುತ್ತಿದೆ. ಸರ್ಕಾರೇತರ ಸಂಸ್ಥೆಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬೆದರಿಕೆ ಹಾಕಲಾಗಿದೆ. ಕಲ್ಯಾಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಡಬ್ಲ್ಯೂಸಿ ನಿರ್ಣಯ ತಿಳಿಸಿದೆ.
ಆರ್ಥಿಕತೆಯ ಕುಸಿತಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸಭೆ, 2020-21ರಲ್ಲಿ ಆರ್ಥಿಕತೆ ಕುಸಿದು ಹೋಗಿದ್ದರೂ ಮೋದಿ ಸರ್ಕಾರ ವಿ-ಆಕಾರದ ಚೇತರಿಕೆಯ ಬಗ್ಗೆ ಹೆಮ್ಮೆಪಡುತ್ತದೆ. ಆರ್ಥಿಕ ಚೇತರಿಕೆ ಕಷ್ಟಸಾಧ್ಯವಾಗಿದೆ. ಆರ್ಥಿಕ ಹಿಂಜರಿತ ಮತ್ತು ಕೊವಿಡ್ ಸಮಯದಲ್ಲಿ ಸಾಕಷ್ಟು ಉದ್ಯೋಗಗಳು ನಷ್ಟವಾಗಿವೆ. ಇವುಗಳು ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಸೂಕ್ಷ್ಮ ಮತ್ತು ಸಣ್ಣ ಘಟಕಗಳನ್ನು ಪುನರ್ ಆರಂಭಿಸಿಲ್ಲ.
ದೇಶದ ಆರ್ಥಿಕ ಪರಿಸ್ಥಿತಿ ಭಯಾನಕ ಸ್ಥಿತಿಯಲ್ಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೇರಿದ ತೆರಿಗೆಗಳ ಮೂಲಕ ಸಂಗ್ರಹಿಸಿದ ಆದಾಯದ ಮೇಲೆ ಸರ್ಕಾರ ನಡೆಸಲು ಮೋದಿ ಸರ್ಕಾರಕ್ಕೆ ಯಾವುದೇ ಸಂಬಂಧವಿಲ್ಲ. ತನ್ನ ಹಣಕಾಸು ಅನಿಶ್ಚಿತ ಪರಿಸ್ಥಿತಿ ಮರೆಮಾಚುವ ಸಲುವಾಗಿ ಮೋದಿ ಸರ್ಕಾರ 70 ವರ್ಷಗಳಲ್ಲಿ ನಿರ್ಮಿಸಲಾದ ಆಸ್ತಿಗಳ ಮಾರಾಟ ಆರಂಭಿಸಿರುವುದು ಕಳವಳ ಕಾರಿಯಾಗಿದೆ ಎಂದು ನಿರ್ಣಯ ಹೇಳಿದೆ.
ದೇಶದಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿದೆ. ಭದ್ರತಾ ಪಡೆಗಳು ಮತ್ತು ಮುಗ್ದ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಆಡಳಿತದ ಹೆಸರಿನಲ್ಲಿ ಏನೇ ನಡೆದರೂ ಅದು ಅಸಮರ್ಥವಾಗಿದೆ. ಪಾರ್ಶ್ವವಾಯುಪೀಡಿತವಾಗಿದ್ದು ಅವ್ಯವಸ್ಥೆ ಇದೆ. ಹಾಗಾಗಿ ಸಂಪೂರ್ಣ ರಾಜ್ಯ ಪುನರ್ ಸ್ಥಾಪಿಸುವುದು ಮತ್ತು ಪ್ರಜಾಪ್ರಭುತ್ವ ಮಾದರಿ ಚುನಾವಣೆಗಳನ್ನು ನಡೆಸುವುದು.
ದೇಶದ ಇತರೆ ಭಾಗಗಳಲ್ಲಿ ವಿಶೇಷವಾಗಿ ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಿಜೋರಾಂನಲ್ಲಿ ಭದ್ರತೆಗೆ ಬೆದರಿಕೆಗಳು ಇವೆ. ಅಂತರ್ ರಾಜ್ಯ ವಿವಾದಗಳು ಗಡಿ ಭಾಗದಲ್ಲಿ ವಾಸಿಸುವ ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿದೆ. ಮೋದಿ ಸರ್ಕಾರದ ಧೋರಣೆಯಿಂದಾಗಿ ನಾಗಾ ಶಾಂತಿ ಮಾತುಕತೆಗಳಿಗೆ ಗಂಭೀರ ಹಿನ್ನಡೆ ಉಂಟಾಗಿದೆ ಎಂದು ನಿರ್ಣಯದಲ್ಲಿ ಹೇಳಿದೆ.
ಕಳೆದ ಎರಡು ವರ್ಷಗಳಲ್ಲಿ ನಮ್ಮ ಸಹದ್ಯೋಗಿಗಳು, ಅದರಲ್ಲೂ ಕಿರಿಯರು ಪಕ್ಷದ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರೈತರ ಸಮಸ್ಯೆ, ಕೊರೊನ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಪರಿಹಾರ ನೀಡುವುದ, ಸಮಸ್ಯೆಗಳನ್ನು ಎತ್ತಿತೋರಿಸುವ ಕೆಲಸ ಮಾಡಿದ್ದಾರೆ ಎಂದು ಸೋನಿಯಾ ಭಾಷಣದಲ್ಲಿ ಶ್ಲಾಘಿಸಿದ್ದಾರೆ.