ಛತ್ತೀಸ್ ಗಡದ ಜಶಪುರ್ ಜಿಲ್ಲೆಯ ಪತಲ್ ಗಾಂವ್ ನಲ್ಲಿ ಶಕ್ತಿದೇವತೆ ದುರ್ಗಾ ಭಕ್ತರ ಮೇಲೆ ಕಾರು ಹರಿದು ನಾಲ್ಕು ಮಂದಿ ಮೃತಪಟ್ಟಿದ್ದಾರೆ. ದುರಂತದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಭಕ್ತರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಆಗ ವೇಗವಾಗಿ ಬಂದ ಕಾರನ್ನು ಭಕ್ತರ ಮೇಲೆ ಹರಿಸಲಾಗಿದೆ. ದುರಂತದಲ್ಲಿ ನಾಲ್ವರು ಸಾವನ್ನಪ್ಪಿದ್ದು ಅವರಲ್ಲಿ ಓರ್ವನನ್ನು ಗೌರವ್ ಅಗ್ಗರವಾಲ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪತಲ್ ಗಾಂವ್ ನಾಗರಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬ್ಲಾಕ್ ಮೆಡಿಕಲ್ ಆಫೀಸರ್ ಜಮೇಶ್ ಮನಿಶಿ ಮಾಧ್ಯಮಗಳೊಂದಿಗೆ ಮಾತನಾಡಿ ಇಬ್ಬರು ಗಾಯಾಳುಗಳನ್ನು ಬೇರೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದ್ದಾರೆ.
ಮರೂನ್ ಮಹೀಂದ್ರ ಕ್ಸೈಲೋ ಕಾರು ಮಧ್ಯಪ್ರದೇಶದ ಆರ್.ಟಿ.ಒ ನಂಬರ್ ಪ್ಲೇಟ್ ಹೊಂದಿದೆ. ವೇಗವಾಗಿ ಭಕ್ತರ ಮೇಲೆ ಹತ್ತಿಸಿಕೊಂಡು ಹೋಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಕಾರನ್ನು ಭಕ್ತರ ಮೇಲೆ ಹರಿಸಿ ಹೋಗುತ್ತಿದ್ದಂತೆ ಸ್ಥಳೀಯರು ಕಾರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಹೀಗಾಗಿ ಕಾರು ಜಖಂಗೊಂಡಿದೆ. ಚಾಲಕನ ಭಾಗದ ಡೋರ್ ಮುರಿದು ಹೋಗಿದೆ. ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ ಎಂದು ವರದಿಗಳು ತಿಳಿಸಿವೆ.
ಜಶಪುರ್ ಎಸ್.ಪಿ. ” ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಓರ್ವನನ್ನು 21 ವರ್ಷದ ಬಬ್ಲು ವಿಶ್ವಕರ್ಮ ಮತ್ತು ಇನ್ನೊಬ್ಬನನ್ನು 26 ವರ್ಷದ ಶಿಶುಪಾಲ್ ಸಾಹು ಎಂದು ಗುರುತಿಸಲಾಗಿದ್ದು ಇಬ್ಬರು ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯವರೆಂದು ಹೇಳಲಾಗಿದೆ.
ಛತ್ತೀಸ್ ಗಡದ ಮೂಲಕ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮಾತನಾಡಿ ಇದೊಂದು ದುಃಖಕರ ಮತ್ತು ಹೃದಯವನ್ನು ಛಿದ್ರಗೊಳಿಸುವ ಘಟನೆಯಾಗಿದೆ. ಆರೋಪಿಗಳನ್ನ ಕೂಡಲೇ ಬಂಧಿಸಿದೆ. ಪ್ರಕರಣ ದಾಖಲಿಸಿದ್ದು ತನಿಖೆಗೆ ಆದೇಶಿಸಿದೆ ಎಂದು ಹೇಳಿದ್ದಾರೆ.