ಉತ್ತರಪ್ರದೇಶದ ಲಖಿಂಪುರಖೇರಿಯಲ್ಲಿ ನಾಲ್ವರು ರೈತರು ಸೇರಿ 8 ಮಂದಿ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇದೊಂದು ದುರದೃಷ್ಟಕರ ಘಟನೆಯಾಗಿದ್ದು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಏಕೆ ಎಂದು ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದೆ.
ಲಖಿಂಪುರಖೇರಿ ಪ್ರಕರಣದ ಕುರಿತು ವಕೀಲ ತ್ರಿಪತಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು.
“ನಾಲ್ವರು ರೈತರು ಸೇರಿ 8 ಮಂದಿಯ ಹತ್ಯೆಯಾಗಿದೆ. ಈ ಹತ್ಯೆಯ ಸಂಬಂಧ ಎಫ್ಐಆರ್ ನಲ್ಲಿ ದಾಖಲಿಸಿರುವ ಆರೋಪಿಗಳು ಯಾರು? ನೀವು ಆರೋಪಿಗಳನ್ನು ಬಂಧಿಸಿದ್ದೀರೋ ಇಲ್ಲವೋ? ಯಥಾಸ್ಥಿತಿ ವರದಿ ನೀಡಿ” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಹಿಮ ಅವರು ಉತ್ತರ ಪ್ರದೇಶ ಸರ್ಕಾರದ ಪರ ಹಾಜರಿದ್ದ ಅಡಿಷಿನಲ್ ಅಡ್ವೋಕೇಟ್ ಜನರಲ್ ಗರಿಮ್ ಪ್ರಸಾದ್ ಅವರನ್ನು ಪ್ರಶ್ನಿಸಿದರು.
ಆಗ ಪ್ರಸಾದ್ “ತನಿಖೆಗೆ ಎಸ್ಐಟಿ ಮತ್ತು ನ್ಯಾಯಾಂಗ ಆಯೋಗ ರಚನೆ ಮಾಡಲಾಗುವುದು ಮತ್ತು ಎಫ್ಐಆರ್ ದಾಖಲಿಸಲಾಗಿದೆ” ಎಂದು ಪೀಠದ ಗಮನಕ್ಕೆ ತಂದರು.
ಕುಂದುಕೊರತೆಯನ್ನು ನೀವು ಸರಿಯಾಗಿ ನೋಡುತ್ತಿಲ್ಲ ಮತ್ತು ಎಫ್ಐಆರ್ ಸರಿಯಾಗಿ ದಾಖಲಿಸಿಲ್ಲ. ನ್ಯಾಯಾಂಗ ಆಯೋಗದ ಸಂಪೂರ್ಣ ಮಾಹಿತಿ ಏನು ಎಂದು ಮುಖ್ಯನ್ಯಾಯಮೂರ್ತಿ ಪ್ರಶ್ನಿಸಿದರು ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಈ ಸಂದರ್ಭದಲ್ಲಿ ವಾದ ಮಂಡಿಸಿದ ವಕೀಲ ತ್ರಿಪತಿ “ಆಡಳಿತದ ನಿರ್ಲಕ್ಷ್ಯದಿಂದ ರೈತರು ಸೇರಿ 8 ಮಂದಿ ಸಾವಿಗೀಡಾಗಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಭಾವಿಸುತ್ತೇನೆ. ದೇಶ ಮತ್ತು ಉತ್ತರಪ್ರದೇಶದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ನ್ಯಾಯಾಲಯದ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ “ರೈತರ ಕೊಲೆ ಪ್ರಕರಣ ದುರದೃಷ್ಟಕರ” ಎಂದು ಹೇಳಿದರು.


