ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದಿರುವ ಉತ್ತರ ಪ್ರದೇಶ ಸರ್ಕಾರ ಲಖಿಂಪುರಖೇರಿಯಲ್ಲಿ ವಾಹನ ಹರಿಸಿ ಹತ್ಯೆಯಾಗಿದ್ದ ರೈತರ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಎಐಸಿಸಿ ನಾಯಕ ರಾಹುಲ್ ಮತ್ತು ಪ್ರಿಯಾಂಕ ಗಾಂಧಿಗೆ ಅವಕಾಶ ನೀಡಿದೆ. ಅಷ್ಟೇ ಅಲ್ಲ ಪ್ರತಿ ಬಾರಿಗೆ ಐವರು ಮಾತ್ರ ಲಖಿಂಪುರಖೇರಿ ಭೇಟಿಗೆ ಅನುಮತಿ ನೀಡಿದೆ.
ಉತ್ತರ ಪ್ರದೇಶದ ಎಡಿಜಿ ಪ್ರಶಾಂತ್ ಕುಮಾರ್, ‘ಸಂತ್ರಸ್ತ ರೈತ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡಿದೆ. ಈ ಹಿಂದೆ ವಿಧಿಸಿದ್ದ ನಿರ್ಬಂಧಕ್ಕೆ ಯಾವುದೇ ಉದ್ದೇಶ ಇಲ್ಲ. ಶಾಂತಿ ಕಾಪಾಡುವ ಉದ್ದೇಶದಿಂದ ಮಾತ್ರ ಲಖಿಂಪುರಖೇರಿ ಭೇಟಿಗೆ ನಿರ್ಬಂಧ ಹೇರಲಾಗಿತ್ತು. ಈಗೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಕೂಡ ಭೇಟಿ ಮಾಡಬಹುದು’ ಎಂದು ಹೇಳಿದ್ದಾರೆ.
ಏಕಕಾಲದಲ್ಲಿ ಎಲ್ಲಿರಿಗೂ ಪ್ರವೇಶವಿಲ್ಲ. ಆದರೆ ಒಂದು ಬಾರಿಗೆ ಐದು ಜನರ ಗುಂಪು ಲಖಿಂಪುರಖೇರಿಗೆ ಭೇಟಿ ನೀಡಿ ರೈತ ಕುಟುಂಬಗಳನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಗೃಹಖಾತೆ ರಾಜ್ಯ ಸಚಿವ ಮಿಶ್ರಾ ಅವರು ದೆಹಲಿಯಲ್ಲಿ ಗೃಹ ಸಚಿವಾಲಯಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಭಾನುವಾರ ಲಖಿಂಪುರಖೇರಿಯಲ್ಲಿ ನಡೆದ ಘಟನೆಗಳ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ನಡುವೆ ಲಖಿಂಪುರಖೇರಿಯಲ್ಲಿ ವಾಹನ ಹತ್ತಿಸಿ ನಾಲ್ವರು ರೈತರ ಹತ್ಯೆಗೆ ಕಾರಣರಾಗಿರುವ ಆರೋಪಿ ಅಶಿಶ್ ಮಿಶ್ರಾ ಅವರನ್ನು ಬಂಧಿಸಲು ರೈತ ಸಂಘಟನೆಗಳು ಒಂದು ವಾರ ಗಡುವು ನೀಡಿವೆ.