ಲಖಿಂಪುರಖೇರಿ ರೈತರ ಹತ್ಯೆ ಘಟನೆ ನಂತರ ಇದೇ ಮೊದಲ ಬಾರಿಗೆ ಗೃಹಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅಕ್ಟೋಬರ್ 6ರಂದು ದೆಹಲಿಯ ನಿವಾಸದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದರು.
ಲಖಿಂಪುರಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಯುವಿಎಸ್ ವಾಹನ ಹತ್ತಿಸಿದ್ದರಿಂದ ನಾಲ್ವರು ರೈತರು ಸೇರಿ ಎಂಟು ಮಂದಿ ಹತ್ಯೆಯಾಗಿದ್ದರು. ಪ್ರತಿಪಕ್ಷಗಳ ಒತ್ತಡದ ಹಿನ್ನೆಲೆಯಲ್ಲಿ ಗೃಹಖಾತೆ ರಾಜ್ಯ ಸಚಿವ ಮಿಶ್ರಾ ಪುತ್ರ ಅಶಿಶ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ದಿಢೀರ್ ದೆಹಲಿಗೆ ಭೇಟಿ ನೀಡಿದ ಮಿಶ್ರಾ ದಕ್ಷಿಣ ಬ್ಲಾಕ್ ನ ಕಚೇರಿಯಲ್ಲಿ ಕೆಲಸಗಳನ್ನು ಮುಗಿಸಿಕೊಂಡು ನಂತರ ಅಮಿತ್ ಶಾ ನಿವಾಸಕ್ಕೆ ಭೇಟಿ ನೀಡಿದರು. ಅಮಿತ್ ಶಾ ಮತ್ತು ಮಿಶ್ರಾ ಸುಮಾರು ಅರ್ಧ ಗಂಟೆ ಕಾಲ ಬಾಗಿಲು ಹಾಕಿಕೊಂಡು ರಹಸ್ಯೆ ಮಾತುಕತೆ ನಡೆಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಪ್ರತಿಪಕ್ಷಗಳು ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದವು. ರೈತರ ಹತ್ಯೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ನಡುವೆಯೇ ಅಮಿತ್ ಶಾ ಮತ್ತು ಮಿಶ್ರಾ ಭೇಟಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಮಿಶ್ರಾ ರಾಜಿನಾಮೆ ನೀಡುತ್ತಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
“ರಾಜಿನಾಮೆಗೆ ಯಾವುದೇ ಒತ್ತಡವಿಲ್ಲ. ನಾನೇಕೆ ರಾಜಿನಾಮೆ ನೀಡಬೇಕು. ನನ್ನ ಮೇಲೆ ಯಾವುದೇ ಒತ್ತಡ ಇಲ್ಲ. ನಾವು ಲಖಿಂಪುರಖೇರಿ ಘಟನೆ ಬಗ್ಗೆ ತನಿಖೆ ಮಾಡುತ್ತೇವೆ. ಘಟನೆಯಲ್ಲಿ ಯಾರೇ ಭಾಗಿಯಾಗಿ ಪಿತೂರಿ ನಡೆಸಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ಮಿಶ್ರ ಹೇಳಿಕೆಯನ್ನು ಉಲ್ಲೇಖಿಸಿ ಎನ್.ಡಿ.ಟಿ.ವಿ ವರದಿ ತಿಳಿಸಿದೆ.