“ಬಿಜೆಪಿ ಸೇರುವುದಿಲ್ಲ, ಕಾಂಗ್ರೆಸ್ ನಲ್ಲಿ ಇರುವುದಿಲ್ಲ” ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಎನ್.ಡಿ.ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವರನ್ನು ಭೇಟಿಯಾದ ಮರುದಿನವೇ ಅಮರಿಂದರ್ ಸಿಂಗ್ ಅವರಿಂದ ಇಂತಹ ಪ್ರತಿಕ್ರಿಯೆ ಹೊರಬಿದ್ದಿದೆ. ನಾನು ಈಗಲೂ ಕಾಂಗ್ರೆಸ್ ನಲ್ಲಿಯೇ ಇದ್ದೇನೆ. ಆದರೆ ಕಾಂಗ್ರೆಸ್ ನಲ್ಲಿ ಉಳಿಯುವುದಿಲ್ಲ. ನನ್ನ ಸ್ಥಾನ ಏನೆಂಬುದು ಸ್ಪಷ್ಟವಾಗಿದೆ” ಎಂದು ಹೇಳಿದ್ದಾರೆ.
ಟ್ವಿಟ್ಟರ್ ನ ಬಯೋದಲ್ಲಿದ್ದ ಕಾಂಗ್ರೆಸ್ ಅನ್ನು ತೆಗೆದುಹಾಕಿರುವ ಅಮರಿಂದರ್ ಸಿಂಗ್ ಬಿಜೆಪಿ ಸೇರುವುದಿಲ್ಲ, ಕಾಂಗ್ರೆಸ್ ನಲ್ಲಿ ಇರುವುದಿಲ್ಲ ಎಂದು ಹೇಳುವ ಮೂಲಕ ಆಮ್ ಆದ್ಮಿ ಪಕ್ಷದತ್ತ ಮುಖಮಾಡಿದ್ದಾರೆಯೇ ಎಂಬ ಕುತೂಹಲ ಮೂಡಿಸಿದೆ.
“ಪಂಜಾಬ್ ನಲ್ಲಿ ಕಾಂಗ್ರೆಸ್ ಕುಸಿಯುತ್ತಿದೆ. ಸಿಧು ಬಾಲಿಶ ವ್ಯಕ್ತಿ. ಅಂತಹ ವ್ಯಕ್ತಿಗೆ ಪಕ್ಷ ಗಂಭೀರವಾದ ಜವಾಬ್ದಾರಿ ಹೊರಿಸಿದೆ. 52 ವರ್ಷದ ನನ್ನ ರಾಜಕಾರಣದಲ್ಲಿ ನನ್ನದೇ ನಂಬಿಕೆ ಮತ್ತು ತತ್ವಗಳನ್ನು ಹೊಂದಿದ್ದೇನೆ. ಈ ಮಾರ್ಗದಲ್ಲಿ ನನಗೆ ಹಿಂದಿನ ಗೌರವ ಸಿಗುವುದಿಲ್ಲ” ಎಂದು ಸಂದರ್ಶನಲ್ಲಿ ಹೇಳಿದ್ದಾರೆ.
50 ವರ್ಷದ ನಂತರ ನನ್ನ ವ್ಯಕ್ತಿತ್ವದ ಮೇಲೆ ಅನುಮಾನ ಬಂತೆ? ಎಲ್ಲಿ ನಂಬಿಕೆ ಇರುವುದಿಲ್ಲವೋ ಅಲ್ಲಿ ಉಳಿಯಲು ಬೇಕಾದ ಅಂಶಗಳು ಏನು? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನನ್ನ ಸ್ಪಷ್ಟ ನಿರ್ಧಾರವನ್ನು ತಿಳಿಸಿದ್ದೇನೆ. ಅದಕ್ಕೆನನ್ನ ನಿಲುವು ಇಷ್ಟವಾಗಿಲ್ಲ. ನಾನು ಹೈಕಮಾಂಡ್ ಕೇಳಿದ ತಕ್ಷಣ ರಾಜಿನಾಮೆ ನೀಡಿದ್ದೇನೆ. ನನಗೆ ಅವಮಾನವಾಗಿದೆ. ಆದರೂ ಪಕ್ಷದಲ್ಲಿ ಹೇಗೆ ಮುಂದುವರಿಯಲು ಸಾಧ್ಯ. ನಂಬಿಕೆ ಸೋತಿದೆ. ನಂಬಿಕೆ ಹೋದ ಮೇಲೆ ಯಾರೂ ಕೂಡ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.
“ಸಿಧು ಅನನುಭವಿ. ಇದನ್ನು ಮತ್ತೆ ಮತ್ತೆ ಹೇಳುತ್ತೇನೆ. ಆತ ಸ್ಥಿರ ಮನುಷ್ಯ ಅಲ್ಲ. ತಂಡದ ಆಟಗಾರನೂ ಅಲ್ಲ. ಒಬ್ಬಂಟಿ. ಪರಿಸ್ಥಿತಿ ಹೀಗಾದರೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಹೇಗೆ ನಿಭಾಯಿಸುತ್ತಾರೆ. ಪಕ್ಷಕ್ಕೆ ತಂಡದ ಆಟಗಾರ ಬೇಕು. ಆದರೆ ಸಿಧು ಅಲ್ಲ” ಎಂದು ಅಮರಿಂದರ್ ಸಿಂಗ್ ಟೀಕಿಸಿದ್ದಾರೆ.
“ಸಿಧು ಬಾಲಿಶ ವ್ಯಕ್ತಿ. ಒಳ್ಳೆಯ ಸೀನ್ ಗಳನ್ನು ಸೃಷ್ಟಿಸುತ್ತಾರೆ ಎಂದು ಜರೆದಿರುವ ಅಮರಿಂದರ್, ರಾಹುಲ್ ಗಾಂಧಿ ಪಂಜಾಬ್ ಯುವ ನಾಯಕತ್ವ ಬಯಸುತ್ತಾರೆ’ ಆದರೆ ಪಕ್ಷದ ಹಿರಿಯರು ಹೇಳುವ ಮಾರ್ಗದರ್ಶನವನ್ನು ಕೇಳುವುದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.