ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ನಿವಾಸದ ಮೇಲೆ ದಾಳಿ ಮಾಡಿ ಗೂಂಡಾಗಿರಿ ವರ್ತನೆ ತೋರಿಸಿರುವ ಪಕ್ಷದ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆನಂದ್ ಶರ್ಮಾ ಆಗ್ರಹಿಸಿದ್ದಾರೆ.
ಪಂಜಾಬ್ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಾಯಂ ಅಧ್ಯಕ್ಷರೇ ಇಲ್ಲ. ಆದರೂ ನಿರ್ಧಾರಗಳನ್ನು ಯಾರು ಕೈಗೊಳ್ಳುತ್ತಿದ್ದಾರೋ ಗೊತ್ತಿಲ್ಲ. ಹೀಗಾಗಿ ಕಾರ್ಯಕಾರಿಣಿ ಸಭೆ ಕರೆದು ಚರ್ಚಿಸಬೇಕೆಂದು ಕಪಿಲ್ ಸಿಬಲ್ ಬುಧವಾರ ಒತ್ತಾಯಿಸಿದ್ದರು.
ಸಿಬಲ್ ಹೇಳಿಕೆಯಿಂದ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಸಿಬಲ್ ನಿವಾಸದ ಮೇಲೆ ದಾಳಿ ನಡೆಸಿದ್ದರು. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಆನಂದ್ ಶರ್ಮ “ಸಿಬಲ್ ನಿವಾಸದ ಮೇಲಿನ ದಾಳಿ ಗೂಂಡಾಗಿರಿ ವರ್ತನೆಯಾಗಿದೆ. ಇದು ಆಘಾತವನ್ನು ಉಂಟು ಮಾಡಿದೆ. ಹಾಗಾಗಿ ದಾಳಿ ಮಾಡಿದ ಕಾರ್ಯಕರ್ತರ ವಿರುದ್ಧ ಸೋನಿಯಾ ಗಾಂಧಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದ ಇತಿಹಾಸವನ್ನು ಹೊಂದಿದೆ. ಅಭಿಪ್ರಾಯ ಬೇಧ ಮತ್ತು ಭಿನ್ನ ಗ್ರಹಿಕೆಗಳು ಪ್ರಜಾಪ್ರಭುತ್ವದ ಭಾಗವಾಗಿವೆ. ಕಾಂಗ್ರೆಸ್ ನ ಮೌಲ್ಯಗಳು ಮತ್ತು ಸಂಸ್ಕೃತಿಯು ಅಸಹಿಷ್ಣುತೆ ಮತ್ತು ಹಿಂಸೆಯನ್ನು ಹೊರಗಿಡುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.
ಜಿ-23 ಗುಂಪು ಜಿ ಹುಜೂರ್ ಎನ್ನುವುದಿಲ್ಲ. ನಾಯಕತ್ವಕ್ಕೆ ಹತ್ತಿರವಾದವರು ಪಕ್ಷದಿಂದ ಹೊರ ಹೋದರು. ನಾಯಕತ್ವದಿಂದ ದೂರ ಇರುವವರು ಪಕ್ಷದಲ್ಲಿಯೇ ಇದ್ದಾರೆ ಎಂದು ಸಿಬಲ್ ಹೇಳಿದ್ದರು. ಇದು ಪಕ್ಷದಲ್ಲಿ ಸಾಕಷ್ಟು ಚರ್ಚಗೆ ಅನುವು ಮಾಡಿಕೊಟ್ಟಿದೆ.