Monday, March 16, 2026
Google search engine
Homeಮುಖಪುಟಕೊರೊನದಿಂದ ಮೃತರಾದ ವ್ಯಕ್ತಿ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡಿ - ಸಿದ್ದರಾಮ್ಯ

ಕೊರೊನದಿಂದ ಮೃತರಾದ ವ್ಯಕ್ತಿ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡಿ – ಸಿದ್ದರಾಮ್ಯ

ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರೂ ಇದುವರೆಗೂ ಒಂದು ಕುಟುಂಬಕ್ಕೂ ಪರಿಹಾರ ನೀಡಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯ ಕೊರೊನಾದಿಂದ ಸಾವಿಗೀಡಾದಲ್ಲಿ ಮತ್ತು ಒಂದು ಕುಟುಂಬದ ಒಬ್ಬ ಮೃತ ವ್ಯಕ್ತಿಗೆ ಮಾತ್ರ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ. ಇದು ಅವೈಜ್ಞಾನಿಕ ಮತ್ತು ಅಮಾನವೀಯ ನಿಯಮ. ಒಂದು ಕುಟುಂಬದಲ್ಲಿ ಎಷ್ಟು ಮಂದಿಯಾದರೂ ಸಾವಿಗೀಡಾಗಿರಲಿ, ಮಾನವೀಯ ನೆಲೆಯಲ್ಲಿ ಸತ್ತವರಿಗೆಲ್ಲರಿತೂ ತಲಾ 5 ಲಕ್ಷ ಪರಿಹಾರ ನೀಡಬೇಕು ಮತ್ತು ಈ ಕೆಲಸ ಅತ್ಯಂತ ತುರ್ತಾಗಿ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ನೀಡಿರುವ ಕೊರೊನ ಸಾವಿನ ಸಂಖ್ಯೆ ಸತ್ಯಕ್ಕೆ ದೂರವಾಗಿದೆ. ಆರೋಗ್ಯ ಇಲಾಖೆ ಪ್ರಕಾರ ರಾಜ್ಯದಲ್ಲಿ 37,603 ಮಂದಿ ಕೊರೊನದಿಂದ ಸಾವಿಗೀಡಾಗಿದ್ದಾರೆ. ಆದರೆ 3.5-4 ಲಕ್ಷ ಮಂದಿ ಸತ್ತಿದ್ದಾರೆ ಎಂದು ಅರವಿಂದ ಸುಬ್ರಹ್ಮಣ್ಯಂ ಹಾಗೂ ಜೇಕಬ್ ಜಾ ಅವರ ವರದಿ ಹೇಳಿದೆ. ಕೆಪಿಸಿಸಿ ಸಮೀಕ್ಷೆಯ ಪ್ರಕಾರ 3 ಲಕ್ಷ 17 ಸಾವಿರ ಮಂದಿ ಕೊರೊನದಿಂದ ಮೃತಪಟ್ಟಿದ್ದಾರೆ ಎಂದು ಸರ್ಕಾರದ ಗಮನ ಸೆಳೆದಿದ್ದಾರೆ.

ಕೇಂದ್ರ ಸಚಿವೆ ಭಾರತಿ ಪವಾರ್ ರಾಜ್ಯಸಭೆಯಲ್ಲಿ ಉತ್ತರಿಸಿ ಆಕ್ಸಿಜನ್ ಕೊರತೆಯಿಂದ ದೇಶದಲ್ಲಿ ಯಾರೊಬ್ಬರೂ ಸತ್ತಿಲ್ಲ ಎಂದಿದ್ದಾರೆ. ಹಾಗಾಗದೆ ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 36 ಜನ ಸಾವಿಗೀಡಾದ ಘಟನೆ, ಯಡಿಯೂರಪ್ಪ ಮನೆ ಮುಂದೆಯೇ ಕೊರೊನ ಸೋಂಕಿತ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದು ಸೇರಿ ಅಮ್ಲಜನಕ, ಹಾಸಿಗೆ, ವೆಂಟಿಲೇಟರ್ ಸಿಗದೆ ಮೃತಪಟ್ಟವರ ನೂರಾರು ಘಟನೆಗಳು ನಮ್ಮ ಕಣ್ಣೆದುರಿವೆ ಎಂದು ಹೇಳಿದ್ದಾರೆ.

ವೇಣುಗೋಪಾಲಗೌಡ ನೇತೃತ್ವದ ನ್ಯಾಯಾಂಗ ಸಮಿತಿಯು ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ ಪ್ರಾಣಕಳೆದುಕೊಂಡವರ ಕುರಿತು ಮೇ 12ರಂದು ಹೈಕೋರ್ಟ್ ಗೆ ವರದಿ ಸಲ್ಲಿಸಿದೆ. ವರದಿಯಲ್ಲಿ ಆಕ್ಸಿಜನ್ ಕೊರತೆಗೆ ಜಿಲ್ಲಾಧಿಕಾರಿ ಮತ್ತು ಸಿಬ್ಬಂದಿ ಕಾರಣ ಎಂದು ಹೇಳಿದೆ. ಹೀಗಾಗಿ ರಾಜ್ಯ ಸರ್ಕಾರ ಕೊರೊನ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದೆ ಮೂರುವರೆ ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಆಪಾದಿಸಿದರು.

ರಾಜ್ಯದಲ್ಲಿ ಅಂಪಟೆರಿಸಿನ್ ಇಂಜೆಕ್ಷನ್ ಲಭ್ಯವಿಲ್ಲದ ವೇಳೆ ಬ್ಲಾಕ್ ಫಂಗಸ್ ಸೋಂಕಿಗೆ ತುತ್ತಾಗಿ ಸಹಸ್ರಾರು ಜನ ಸಾವಿಗೀಡಾದರು. ಇದಕ್ಕೆ ರಾಜ್ಯ ಸರ್ಕಾರವಲ್ಲದೆ ಯಾರು ಹೊಣೆ? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ ವೇಣುಗೋಪಾಲಗೌಡ ವರದಿ ಸಲ್ಲಿಕೆಯಾಗಿ ಐದು ತಿಂಗಳು ಕಳೆದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಾವಿಗೀಡಾದ 24 ಜನರ ಕುಟುಂಬಗಳಿಗೆ ಮಾತ್ರ ಸರ್ಕಾರ ಪರಿಹಾರದ ಹಣ ನೀಡಿದೆ. ನ್ಯಾಯಾಂಗ ಸಮಿತಿಯು ಆಕ್ಸಿಜನ್ ಸಿಗದೆ 36 ಮಂದಿ ಸತ್ತಿದ್ದಾರೆ ಎಂದು ಹೇಳಿದೆ. ಉಳಿದವರಿಗೆ ಪರಿಹಾರ ನೀಡುವುದು ಯಾವಾಗ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular