ಮನೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಪೊಲೀಸರು ರಕ್ಷಾ ಕವಚಗಳನ್ನು ಹಿಡಿದುಕೊಂಡು ನಾಗರಿಕರ ಮೇಲೆ ಮನಬಂದಂತೆ ಥಳಿಸುತ್ತಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಮನೆ ಕಳೆದುಕೊಂಡ 800ಕ್ಕೂ ಹೆಚ್ಚು ಕುಟುಂಬಗಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಅವರ ಮೇಲೆ ಲಾಠಿ ಪ್ರಹಾರ ಮಾಡಿದ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಪತ್ರಕರ್ತನ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ. ಆ ನಂತರ ಆ ಪತ್ರಕರ್ತನನ್ನು ಸ್ವಲ್ಪದೂರಕ್ಕೆ ಕರೆದುಕೊಂಡು ಹೋಗಿ ಬಿಟ್ಟುಬರಲಾಗಿದೆ.
ಅಸ್ಸಾಂ ರಾಜ್ಯ ದರ್ರಾಂಗ್ ಜಿಲ್ಲೆಯ ಧೋಲ್ಪುರದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಸದ್ದಾಂ ಹುಸೇನ್ ಮತ್ತು ಶೇಖ್ ಫರೀದ್ ಎಂಬ ಇಬ್ಬರು ಮೃತಪಟ್ಟಿದ್ದಾರ. ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಧೋಲ್ಪುರದಲ್ಲಿ ಪರಿಸ್ಥಿತಿ ತಿಳಿಗೊಂಡಿದೆ. ಎಲ್ಲರನ್ನು ಸ್ಥಳದಿಂದ ಖಾಲಿ ಮಾಡಿಸಲಾಗಿದೆ. ಘಟನೆಯಲ್ಲಿ 9 ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠ ಸುಶಾಂತ್ ಬಿಶ್ವಾ ಶರ್ಮಾ ಹೇಳಿದ್ದಾರೆಂದು ಎನ್.ಡಿ.ಟಿವಿ ವರದಿ ಮಾಡಿದೆ.
ಗುಜರಾತ್ ಶಾಸಕ ಟ್ವೀಟ್ ಮಾಡಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ‘ನಾಗರಿಕರ ಹತ್ಯೆಯಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ನತದೃಷ್ಟ ವ್ಯಕ್ತಿಯನ್ನು ಬಂಧಿಸಬಹುದಿತ್ತು. ಕೊಲ್ಲುವ ಅಧಿಕಾರ ಅವರಿಗಿಲ್ಲ. ಇದು ಅವಮಾನಕರ ಸಂಗತಿ ಎಂದು ಕಿಡಿಕಾರಿದ್ದಾರೆ.
ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾರ್ಮಿಕ ನಾಯಕಿ ಕವಿತಾ ಕೃಷ್ಣನ್ ‘ಸತ್ತು ನೆಲಕ್ಕೆ ಬಿದ್ದ ವ್ಯಕ್ತಿಯ ದೇಹದ ಮೇಲೆ ದ್ವೇಷದಿಂದ ಜಿಗಿಯುವ ನಾಗರಿಕ ಉಡುಪಿನ ವ್ಯಕ್ತಿ ಯಾರು ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ “ನಾನು ಅಸ್ಸಾಂ ಅಣ್ಣತಂಗಿಯರ ಜೊತೆ ನಿಲ್ಲುತ್ತೇನೆ. ಪೊಲೀಸರ ಬರ್ಬರ ಕೃತ್ಯವನ್ನು ಖಂಡಿಸುತ್ತೇನೆ. ಇದು ಅಸ್ಸಾಂ ಸರ್ಕಾರದ ಪ್ರಾಯೋಜಿತ ದಾಳಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.