ಪಶ್ಚಿಮಬಂಗಾಳ ಮಿಡ್ನಾಪುರ ಲೋಕಸಭಾ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ದಿಲೀಪ್ ಘೋಷ್ ಅವರನ್ನು ಅಧ್ಯಕ್ಷಸ್ಥಾನದಿಂದ ತೆಗೆದುಹಾಕಿ ಆ ಸ್ಥಾನಕ್ಕೆ ಸಂಸದ ಸುಕಂತ ಮಜುಂದಾರ್ ಅವರನ್ನು ನೇಮಕ ಮಾಡಲಾಗಿದೆ.
ಬಾಲರ್ ಘಟ್ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿರುವ 41 ವರ್ಷದ ಸುಕಂತ ಮಜುಂದಾರ್ ಆರ್.ಎಸ್.ಎಸ್ ಮೂಲದವರು. ವಿಧಾನಸಭಾ ಚುನಾವಣೆಯಲ್ಲಿ ಅಧ್ಯಕ್ಷರ ವೈಫಲ್ಯ ಕಾರಣಕ್ಕಾಗಿ ದಿಲೀಪ್ ಘೋಷ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ವರದಿಗಳು ತಿಳಿಸಿವೆ.
ಬಿಜೆಪಿಯನ್ನು ತೊರೆದು ತೃಣಮೂಲ ಕಾಂಗ್ರೆಸ್ ಸೇರಿದ ಬಾಬುಲ್ ಸುಪ್ರಿಯೋ ಮತ್ತು ಶಾಸಕ ಹಾಗೂ ಪ್ರತಿಪಕ್ಷ ನಾಯಕ ಸುವೇಂಧು ಅಧಿಕಾರಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಪಶ್ಚಿಮಬಂಗಾಳ ಘಟಕಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 200 ಸ್ಥಾನಗಳನ್ನು ಗೆಲ್ಲುವ ಗುರಿಹೊಂದಲಾಗಿತ್ತು. ಆದರೆ 77 ಸ್ಥಾನಗಳು ಮಾತ್ರ ಬಿಜೆಪಿಗೆ ದೊರೆತವು. ಚುನಾವಣೆಯ ಬಳಿಕ ನಾಲ್ವರು ಶಾಸಕರು ಬಿಜೆಪಿ ತೊರೆದು ಟಿಎಂಸಿ ಸೇರ್ಪಡೆಯಾದರು. ಈ ಎಲ್ಲಾ ಕಾರಣಗಳನ್ನು ಮುಂದೊಡ್ಡಿ ದಿಲೀಪ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಹೊರಹಾಕಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


