ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕೊವಿಡ್-19 ಸೋಂಕಿನಿಂದ 37 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿಧಾನಪರಿಷತ್ ಗೆ ತಿಳಿಸಿದ್ದಾರೆ.
ಮಾರ್ಚ್ 2020 ರಿಂದ ಆಗಸ್ಟ್ 31, 2021ರವರೆಗಿನ ಅವಧಿಯಲ್ಲಿ ಒಟ್ಟು 37,423 ಮಂದಿ ಕೊರೊನ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ರಾಜ್ಯದಲ್ಲಿ ವಿವಿಧ ಕಾಯಿಲೆಗಳಿಂದ 9.4 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಜನನ ಮತ್ತು ಮರಣ ದಾಖಲೆಗಳ 46 ಕಾರಣಗಳಿಗಾಗಿ ಮೃತಪಟ್ಟವರವರನ್ನು ವಿಂಗಡಿಸಲಾಗಿದೆ ಎಂದು ಹೇಳಿದ್ಧಾರೆ.
ಆರ್.ಟಿ.ಪಿ.ಆರ್ ನಲ್ಲಿ ಪಾಸಿಟೀವ್ ಬಂದು ಸಾವನ್ನಪ್ಪಿದವರನ್ನು ಒಂದು ಗುಂಪಿಗೆ ಸೇರಿಸಿದ್ದೇವೆ. ಅದೇ ರೀತಿ ಆರ್.ಟಿ.ಪಿ.ಸಿ
ಆರ್ ನಲ್ಲಿ ನೆಗೆಟಿವ್ ಬಂದು ಚಿಕಿತ್ಸೆ ಪಡೆದ ನಂತರವೂ ಸಾವನ್ನಪ್ಪಿದವರನ್ನು ಮತ್ತೊಂದು ಗುಂಪಿಗೆ ಸೇರಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಪ್ರತಿಯೊಂದು ದಾಖಲೆಯೂ ನಮ್ಮ ಬಳಿ ಇದೆ. ಯಾವ ಕಾರಣ-ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂಬುದನ್ನು ದಾಖಲು ಮಾಡಿದ್ದೇವೆ. ಜಿಲ್ಲಾವಾರು ಮರಣ ಪ್ರಕರಣಗಳನ್ನು ದಾಖಲಿಸಿದ್ದೇವೆ. ಆರೋಗ್ಯ ಇಲಾಖೆಯ ಐಸಿಎಂಆರ್ ಪೋರ್ಟಲ್ ಗೆ ಪ್ರತಿನಿತ್ಯ ಕೊರೊನ ಸಾವುಗಳನ್ನು ದಾಖಲು ಮಾಡಿರುವುದರಿಂದ ಅದು ಅಧಿಕೃತ ದಾಖಲೆಯಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಎರಡು ವರ್ಷದಲ್ಲಿ 221 ಸೋಂಕುಗಳು ಕಂಡುಬಂದಿದ್ದು ಆ ಸಾವುಗಳನ್ನು ದಾಖಲೆಗಳಲ್ಲಿ ಕಾಣಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಮಾತನಾಡಿ, ಸರ್ಕಾರ ನೀಡುವ ದಾಖಲೆಗಳ ಅಂಕಿಅಂಶಗಳಿಗಿಂತಲೂ ಹೆಚ್ಚು ಮಂದಿ ಕೊರೊನಕ್ಕೆ ಬಲಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಕೊರೊನ ಸೋಂಕಿಗೆ ಒಳಗಾದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಮೇಲೆ ಮೃತಪಟ್ಟಿರುವ ಮಾಹಿತಿ ಇದ್ದು ಆ ಸಾವಿನ ಪ್ರಕರಣಗಳನ್ನು ದಾಖಲೆ ಮಾಡಿಲ್ಲ ಎಂದು ದೂರಿದ್ದಾರೆ.