ಹಿರಿಯ ಪತ್ರಕರ್ತ, ಚಲನಚಿತ್ರ ನಿರ್ದೇಶಕ ಹಾಗೂ ಪ್ರಸಿದ್ದ ಬರಹಗಾರ ಎನ್.ಎಸ್. ಶಂಕರ್ ಜೂನ್.28, 2026ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎನ್.ಶಂಕರ್ ತೀಕ್ಷ್ಣ ಬರೆಹಗಳಿಂದ ಪ್ರಸಿದ್ದರಾದವರು. ಇವರು ಚಿತ್ರರಂಗದಲ್ಲೂ ಕೆಲಸ ಮಾಡಿದ್ದು, 1997ರಲ್ಲಿ ಕಾಮಿಡಿ ಸಿನಿಮಾ ಉಲ್ಟಾ-ಪಲ್ಟಾ ಕನ್ನಡ ಚಲನಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಕನ್ನಡದ ಮುಂಗಾರು ಪತ್ರಿಕೆ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ಲಂಕೇಶ್ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಇವರ ಲೇಖನಗಳು ಗಂಭೀರ ಚರ್ಚೆಗಳನ್ನು ಹುಟ್ಟು ಹಾಕಿದ್ದವು. ಎನ್.ಎಸ್.ಶಂಕರ್ ಅವರು ಲಂಕೇಶ್ ಅವರಿಗೆ ಆಪ್ತರಾಗಿದ್ದರು.
ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಎನ್.ಶಂಕರ್ ಚಿಕಿತ್ಸೆ ಪಡೆಯುತ್ತಿದ್ದರು.
ಎನ್.ಎಸ್. ಶಂಕರ್ ನೆನಪು ಮಾಡಿಕೊಂಡ ದಿನೇಶ್ ಅಮೀನ್ ಮಟ್ಟು
ಮುಂಗಾರು ಪತ್ರಿಕೆಯ ಅಳಿದುಳಿದ ಪ್ರತಿಗಳ ಡಿಜಿಟಲೈಷೇಶನ್ ನಡೆಯುತ್ತಿರುವ ಕಾರಣಕ್ಕೆ ನನ್ನಲ್ಲಿರುವ ಒಂದಷ್ಟು ಪತ್ರಿಕೆಗಳನ್ನು ಹುಡುಕಾಡುತ್ತಿದ್ದೆ. ನಿನ್ನೆ ಸಂಜೆಯಷ್ಟೇ ಈ ಬಗ್ಗೆ ಓಂಪ್ರಕಾಶ್ ಅವರ ಬಳಿ ಮಾತನಾಡಿದ್ದೆ. ಇಂದು ಅವುಗಳನ್ನು ತಲುಪಿಸೋಣ ಎಂದು ಬೆಳಿಗ್ಗೆ ಎದ್ದು ಹಳೆಯಪತ್ರಿಕೆಗಳನ್ನು ಬಿಡಿಸಿಕೊಂಡು ಕೂತಿದ್ದಾಗ ಎನ್ ಎಸ್ ಶಂಕರ್ ಸಾವಿನ ಸುದ್ದಿ ಬಂತು. ಹರಡಿಕೊಂಡ ಪತ್ರಿಕೆಗಳ ತುಣುಕುಗಳ ತುಂಬಾ ಅವರದ್ದೇ ಮುಖ. ನೋವು, ದು:ಖ, ಸ್ವಲ್ಪ ಗಿಲ್ಟ್ ಎಲ್ಲವೂ ಮುತ್ತಿಕೊಂಡು ಮನಸ್ಸು ಭಾರವಾಗಿದೆ. .ಹಳೆಯ ನೆನಪುಗಳು ಒತ್ತೊತ್ತಿ ಬರುತ್ತಿವೆ,
ಮುಂಗಾರು ಪತ್ರಿಕೆಯಲ್ಲಿ ಅವರು ಇದ್ದದ್ದೇ ಕೆಲವು ತಿಂಗಳು, ಕೈಹಿಡಿದು ನನ್ನನ್ನೇನು ಅವರು ಬರೆಸಿಲ್ಲ. ಅವರನ್ನು ನೋಡಿ ಕಲಿತದ್ದೇ ಹೆಚ್ಚು. ಕುರ್ತಾ ಪೈಜಾಮ, ಸೋಡಾಗ್ಲಾಸ್ ನ ಶಂಕರ್ ಅವರಲ್ಲಿ ಏನೋ ಒಂದು ಆಕರ್ಷಣೆ ಇತ್ತು. ಪತ್ರಿಕಾವೃತ್ತಿಗೆ ಅವರು ನನ್ನ ಒಬ್ಬ ಗುರು ಎಂದು ಅವರು ಬದುಕಿದ್ದಾಗಲೇ ಬರೆದಿದ್ದೆ. ಮುಂಗಾರು ಪತ್ರಿಕೆಗೆ ಅವರು ಸಂಪಾದಕೀಯ ಸಂಯೋಜಕರಾಗಿದ್ದರು. ನನ್ನ ಮೊದಲ ನೇಮಕಾತಿ ಪತ್ರದಲ್ಲಿ ಅವರದ್ದೇ ಸಹಿ ಇದೆ. ಅವರ ಕೆಲಸಗಳನ್ನು ನೋಡಿ ಅವರನ್ನು ನಾವು ಸಕಲಕಲಾವಲ್ಲಭ ಎಂದು ಕರೆಯುತ್ತಿದ್ದೆವು. ಅವರೊಂದು ವಿಶ್ವವಿದ್ಯಾಲಯದಂತಿದ್ದರು.
ರಾಜ್ಯ, ದೇಶ, ಅಂತಾರಾಷ್ಟ್ರೀಯ ರಾಜಕೀಯ, ಸಾಹಿತ್ಯ, ಸಂಗೀತ, ವಿಜ್ ಸಿನೆಮಾ, ಕ್ರೀಡೆ ..ಎಲ್ಲ ವಿಷಯಗಳಲ್ಲಿ ಅವರು ಕೇವಲ ಜಾಕ್ ಆಫ್ ಟ್ರೇಡ್ ಆಗಿರಲ್ಲ ಅವರು ಮಾಸ್ಟರ್ ಕೂಡಾ ಆಗಿದ್ದರು. ಕಾರ್ಟೂನ್ ಬಿಡಿಸುತ್ತಿದ್ದರು. ಕತೆಗಳಿಗೆ ಇಲಸ್ಟ್ರೇಷನ್ ಬರೆಯುತ್ತಿದ್ದರು. ಒಬ್ಬಂಟಿಯಾಗಿಯೇ ಒಂದು ದಿನಪತ್ರಿಕೆಗೆ ಎಲ್ಲವನ್ನೂ ಬರೆದು ಹೊರತರುವಂತಹ ಬಹುಮುಖಿ ಪ್ರತಿಭಾಶಾಲಿ. ಜೊತೆಗೆ ಅತ್ಯಂತ ಶ್ರಮಜೀವಿ. ರಾತ್ರಿ ಒಂದು ಗಂಟೆಗೋ ಎರಡು ಗಂಟೆಗೋ ಕಚೇರಿಯಿಂದ ಹೊರಟುತ್ತಿದ್ದ ಅವರು ಬೆಳಿಗ್ಗೆ 10-11 ಗಂಟೆಗೆ ಮತ್ತೆ ಕಚೇರಿಯಲ್ಲಿರುತ್ತಿದ್ದರು. ‘’ಗಡಿಯಾರ ನೋಡಿ ಕೆಲಸ ಮಾಡುವ ಪತ್ರಕರ್ತ ಇತಿಹಾಸದ ಕಸದ ಬುಟ್ಟಿ ಸೇರ್ತಾನೆ ಕಣೋ’’ ಎಂದು ವಡ್ಡರ್ಸೆಯ ಮಾತಿಗೆ ಶಂಕರ್ ಒಂದು ಮಾಡೆಲ್ ಆಗಿದ್ದರು. ಯಾವುದೇ ಮುಖ್ಯವಾಹಿನಿ ಪತ್ರಿಕೆಗೆ ಸಂಪಾದಕರಾಗುವ ಎಲ್ಲ ಅರ್ಹತೆಗಳಿತ್ತು.
ದ್ವೇಷ, ಅಸೂಯೆಯನ್ನು ಎಂದೂ ಹತ್ತಿರ ಬಿಟ್ಟುಕೊಡದ, ಎಂದೂ ಸಿಟ್ಟು ಮಾಡಿಕೊಳ್ಳದ, ದನಿ ಎತ್ತಿ ಮಾತನಾಡದಿದ್ದ ಮತ್ತು ಪ್ರತಿಭಾವಂತ ಕಿರಿಯರನ್ನು ಗುರುತಿಸಿ ಪ್ರೊತ್ಸಾಹದ ನುಡಿಗಳನ್ನು ಆಡುತ್ತಿದ್ದ ಶಂಕರ್ ಅವರಂತಹ ಇನ್ನೊಂದು ಪ್ರತಿಭೆಯನ್ನು ನಾನು ಕಂಡಿಲ್ಲ. ಇತ್ತೀಚೆಗಷ್ಟೇ ಪತ್ನಿಯನ್ನು ಕಳೆದುಕೊಂಡಿದ್ದರು. ಆರ್ಥಿಕವಾಗಿ ಕಷ್ಟದಲ್ಲಿದ್ದರೂ ಯಾರಿಂದಲೂ ನೆರವು ಯಾಚಿಸಿದಷ್ಟು ಸ್ವಾಭಿಮಾನಿ.
ಪತ್ರಿಕಾ ಬರಹಗಳಲ್ಲಿಯೇ ಅವರು ಕಳೆದುಹೋದರೇನೋ ಎಂದು ಒಮ್ಮೊಮ್ಮೆ ಅನಿಸುತ್ತಿತ್ತು, ಅವರು ಇನ್ನಷ್ಟು ಗಂಭೀರ ವಿಷಯಗಳ ಮೇಲೆ ಬರೆಯಬೇಕಾಗಿತ್ತು. ಅಂತಹ ವಿದ್ವತ್ ಅವರಲ್ಲಿತ್ತು. ಇನ್ನಷ್ಟು ಸಿನೆಮಾಗಳನ್ನು ಮಾಡಬೇಕಾಗಿತ್ತು. ಜೊತೆಯಲ್ಲಿದ್ದು ಕಿರಿಯರಿಗೆ ಮಾರ್ಗದರ್ಶನ ಮಾಡಬೇಕಾಗಿತ್ತು.. ಈ ಸಾವು ಕನ್ನಡ ಸಾಂಸ್ಕೃತಿಕ ಲೋಕದ ದೊಡ್ಡ ನಷ್ಟ, ಈ ನಿರ್ವಾತವನ್ನು ತುಂಬುವುದು ಕಷ್ಟ ಎಂದು ಹೇಳಿದ್ದಾರೆ.


