ರೈತರು ಜಮೀನು, ಭೂಮಿ ಹೊಂದಿರುವುದಷ್ಟೇ ಅಲ್ಲ, ತಮ್ಮ ಜಮೀನಿನ ಬಗ್ಗೆ ಕಾನೂನು ಅರಿವು, ಹಕ್ಕುಗಳು ಮತ್ತು ದಾಖಲಾತಿಗಳ ಬಗ್ಗೆ ಸರ್ಕಾರ ಕೈಗೊಂಡಿರುವ ಯೋಜನೆಗಳ ಭೂ ಸುಧಾರಣೆ ಬಗ್ಗೆ ರೈತರು ತಿಳಿದುಕೊಳ್ಳಬೇಕು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಕೆ.ಎನ್.ಲಿಂಗಪ್ಪ ಹೇಳಿದರು.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಮ್ಮನಹಳ್ಳಿಯ ಲೋಹಿಯಾ ಸಮತಾ ವಿದ್ಯಾಲಯದಲ್ಲಿ ರೈತರಿಗಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ನಾಯಕತ್ವದ ಶಿಬಿರದಲ್ಲಿ ಭೂಮಿ ಮತ್ತು ಭೂಕಂದಾಯ ಕಾನೂನುಗಳು, ರೈತರ ಹಕ್ಕಗಳು ಮತ್ತು ಪರಿಹಾರ ವಿಷಯ ಕುರಿತು ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಭೂ ಕಂದಾಯ ಆಡಳಿತದಲ್ಲಿ ಹೊಸ ಸವಾಲುಗಳು ಮತ್ತು ಅವಕಾಶಗಳನ್ನು ಪರಿಚಯಿಸುತ್ತದೆ. ತಂತ್ರಜ್ಞಾನದ ಆಗಮನ ಕರ್ನಾಟಕದಲ್ಲಿ ‘ಭೂಮಿ’ ಯೋಜನೆಯಂತಹ ಡಿಜಿಟಲೀಕರಣ ಉಪಕ್ರಮಗಳ ಮೂಲಕ ಭೂ ದಾಖಲೆಗಳ ನಿರ್ವಹಣೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಇ-ಆಡಳಿತದ ವೇದಿಕೆ ಪಾರದರ್ಶಕತೆಯನ್ನು ಹೆಚ್ಚಿಸಿದೆ, ಭ್ರಷ್ಟಾಚಾರವನ್ನು ಕಡಿಮೆ ಮಾಡಿದೆ ಮತ್ತು ಭೂ ಮಾಲೀಕರಿಗೆ ಅವರ ದಾಖಲೆಗಳು ಸುಲಭವಾಗಿ ದೊರಕುವುದರಿಂದ ಅವರಿಗೆ ಸಬಲೀಕರಣ ನೀಡಿದೆ ಎಂದು ತಿಳಿಸಿದರು.
ಆಶಯ ನುಡಿಗಳನ್ನಾಡಿದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಅಭಿವೃದ್ಧಿಯ ಹೆಸರಿನಲ್ಲಿ ರೈತರ ಭೂಮಿ ದರೋಡೆಯಾಗುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಗಳನ್ನೆಲ್ಲಾ ನಡೆಸುವ ಮೊದಲು ಸರ್ಕಾರ ಮಾಡಬೇಕಾದ ಪ್ರಪ್ರಥಮ ಕೆಲಸವೇನೆಂದರೆ ಇದುವರೆವಿಗೂ ಕೈಗಾರಿಕಾ ಪ್ರದೇಶಕ್ಕಾಗಿ ಎಷ್ಟು ರೈತರನ್ನು ಒಕ್ಕಲೆಬ್ಬಿಸಿದೆ, ಸ್ವಾಧೀನಪಡಿಸಿಕೊಂಡಿರುವ ಭೂಮಿ ಯಾರ ಒಡೆತನದಲ್ಲಿದೆ, ರೈತರನ್ನು ಒಕ್ಕಲೆಬ್ಬಿಸಿದ ಮೇಲೆ ಆ ರೈತರ ಬದುಕೇನಾಯಿತು ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು.
ಎಲ್ಲಕ್ಕಿಂತ ಮುಖ್ಯವಾಗಿ ಇಷ್ಟು ಅಮೂಲ್ಯವಾದ ಭೂಮಿಯನ್ನು ವಶಪಡಿಸಿಕೊಂಡು ಯಾರಿಗೆ ಕೊಟ್ಟಿದೆ, ಸರ್ಕಾರಕ್ಕೆ ಬದ್ಧತೆ ಇದ್ದರೆ ತಕ್ಷಣವೇ ಶ್ವೇತಪತ್ರ ಹೊರಡಿಸಬೇಕು. ಅಲ್ಲಿಯವರೆಗೆ ಯಾವುದೇ ಭೂಸ್ವಾಧೀನಕ್ಕೆ ಕೈಹಾಕಬಾರದು, ಸಮಗ್ರ ಮಾಹಿತಿಯನ್ನು ರಾಜ್ಯದ ರೈತರಿಗೆ, ಜನರಿಗೆ ತಿಳಿಸುವ ತನಕ ಯಾವುದೇ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳಬಾರದು, ಅದರ ಬಗ್ಗೆ ವಿವರವಾದ ಅಧ್ಯಯನ ಮಾಡಿ ಸಮಾಜಕ್ಕೆ ತಿಳಿಸಬೇಕೆಂದು ಒತ್ತಾಯಿಸಿದರು.
ಶಿರಾ ತಹಶೀಲ್ದಾರ್ ಮಾತನಾಡಿದರು. ರೈತ ಹೋರಾಟಗಾರ್ತಿ ಅನಸೂಯಮ್ಮ, ದೊ.ರಂಗನಾಥಗೌಡ, ಪೂಜಾರಪ್ಪ, ಕೆ.ಟಿ.ಗಂಗಾಧರ್, ರಾಮಕೃಷ್ಣ ನೀರಕಲ್ಲು ಭಾಗವಹಿಸಿದ್ದರು.


