Friday, May 15, 2026
Google search engine
Homeಮುಖಪುಟಲಭ್ಯತೆ ಆಧರಿಸಿ ತುಮಕೂರು ಕೆರೆಗಳಿಗೆ ನೀರು ತುಂಬಿಸಿ-ಸೊಗಡು ಶಿವಣ್ಣ ಆಗ್ರಹ

ಲಭ್ಯತೆ ಆಧರಿಸಿ ತುಮಕೂರು ಕೆರೆಗಳಿಗೆ ನೀರು ತುಂಬಿಸಿ-ಸೊಗಡು ಶಿವಣ್ಣ ಆಗ್ರಹ

ಮಳೆ ವಿಳಂಬವಾಗಿ ತುಮಕೂರು ಜಿಲ್ಲೆಯ ಜನ, ಜಾನುವಾರು, ಹಕ್ಕಿಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ತುಮಕೂರು ಜಿಲ್ಲೆಯ ಕೆರೆಗಳಿಗೆ ತುಂಬಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಒತ್ತಾಯಿಸಿದರು.

ಕಳೆದ ಮೂರು ದಿನಗಳಿಂದ ಜಿಲ್ಲೆಗೆ ಹೇಮಾವತಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಸೊಗಡು ಶಿವಣ್ಣ ಹಾಗೂ ನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್ ಶುಕ್ರವಾರ ಬುಗುಡನಹಳ್ಳಿ ಕೆರೆಗೆ ಭೇಟಿ ನೀಡಿ, ಹರಿದು ಬರುತ್ತಿರುವ ನೀರಿನ ಪ್ರಮಾಣ ಪರಿಶೀಲಿಸಿದರು. ಇಲ್ಲಿನ ನಾಲೆಯಲ್ಲಿ ಅಳವಡಿಸಿರುವ ಮಾಪಕದಲ್ಲಿ 2.40 ಮೀಟರ್ ಎತ್ತರ ನೀರು ಹರಿಯುತ್ತಿದ್ದು ಸುಮಾರು 450 ಕ್ಯೂಸೆಕ್ಸ್ ಇರುತ್ತದೆ. ಮಾಹಿತಿ ಪ್ರಕಾರ ಬುಗುಡನಹಳ್ಳಿ ಕೆರೆಯಲ್ಲಿ ಒಟ್ಟು 118 ಎಂಸಿಎಫ್‌ಟಿ ನೀರು ಲಭ್ಯವಿದ್ದು, ಅದರಲ್ಲಿ 98 ಎಂಸಿಎಫ್‌ಟಿ ನೀರನ್ನು ಮಾತ್ರ ಕುಡಿಯುವ ಉದ್ದೇಶಕ್ಕೆ ಉಪಯೋಗಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಈ ನೀರು ತುಮಕೂರು ನಗರಕ್ಕೆ 45-50 ದಿನಗಳವರೆಗೆ ಮಾತ್ರ ಬಳಸಿಕೊಳ್ಳಲು ಸಾಧ್ಯ. ಆದುದರಿಂದ ಮುಂದೆ ಎದುರಾಗಬಹುದಾದ ಕುಡಿಯುವ ನೀರಿಗೆ ಸಮಸ್ಯೆ ತಪ್ಪಿಸಲು ಅವಶ್ಯವಿರುವ ನೀರನ್ನು ಹರಿಸಬೇಕು ಎಂದು ಒತ್ತಾಯಿಸಿದರು. ನೀರಿಗೆ ಹಾಹಾಕಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಕೆರೆಗಳಿಗೆ ತುರ್ತಾಗಿ ಹೇಮಾವತಿ ನೀರು ಹರಿಸಬೇಕು ಎಂದು ನೀರಾವರಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಒತ್ತಾಯಿಸಿದ್ದರು. ಮನವಿಗೆ ಸ್ಪಂದಿಸಿ ನೀರು ಹರಿಸಿರುವ ಕಾರಣ ಸಚಿವರಿಗೆ, ಜಿಲ್ಲಾಡಳಿತಕ್ಕೆ ಸೊಗಡು ಶಿವಣ್ಣ ಧನ್ಯವಾದ ತಿಳಿಸಿದರು.

ನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ್ ಮತ್ತು ಮುಖಂಡರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular