ಕುಟುಂಬಗಳು ವಿಘಟನೆಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಕೌಟುಂಬಿಕ ಸಂಬಂಧಗಳನ್ನು ಉತ್ತಮಗೊಳಿಸುವ ವಾತಾವರಣ ನಿರ್ಮಾಣ ಅತ್ಯಂತ ಅಗತ್ಯ ಎಂದು ಲೇಖಕಿ, ವರದಕ್ಷಿಣೆ ವಿರೋಧಿ ವೇದಿಕೆ ಅಧ್ಯಕ್ಷೆ ಎಂ.ಸಿ.ಲಲಿತ ತಿಳಿಸಿದರು.
ವರದಕ್ಷಿಣೆ ವಿರೋಧಿ ವೇದಿಕೆ ತುಮಕೂರಿನ ಸಾಂತ್ವನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತಾಯಂದಿರ ದಿನಾಚರಣೆಯ ಮಹತ್ವ ಕುರಿತಾದ ಚರ್ಚಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವರ್ಷಗಳು ಉರುಳಿದಂತೆ ಕೌಟುಂಬಿಕ ವ್ಯವಸ್ಥೆ ಶಿಥಿಲವಾಗುತ್ತಿವೆ. ಸಂಬಂಧಗಳು ಸಡಿಲಗೊಳ್ಳುತ್ತಿವೆ. ಕೌಟುಂಬಿಕ ಮೌಲ್ಯಗಳು ಮರೆಯಾಗುತ್ತಿವೆ. ಇಂತಹ ಕಾಲಘಟ್ಟದಲ್ಲಿ ಹೆಣ್ಣು ಮತ್ತು ಗಂಡು ಎಂಬ ತಾರತಮ್ಯ ದೂರ ಮಾಡಿ ಕುಟುಂಬದಲ್ಲಿ ಸೌಹಾರ್ದ ಪ್ರೀತಿ ಉಂಟು ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕಿದೆ. ಇಲ್ಲದೆ ಹೋದರೆ ಮುಂದಿನ ದಿನಗಳು ಮತ್ತಷ್ಟು ಸೂಕ್ಷ್ಮವಾಗಲಿವೆ ಎಂದು ಎಚ್ಚರಿಸಿದರು.
ತಂದೆ ಇರಲಿ, ತಾಯಿ ಇರಲಿ ಅವರು ಬದುಕಿದ್ದಾಗ ಮಕ್ಕಳಿಗೆ ಅರ್ಥ ತಿಳಿಯುವುದಿಲ್ಲ, ಮೌಲ್ಯ ಗೊತ್ತಾಗುವುದಿಲ್ಲ. ಸತ್ತಾಗ ಅಳುತ್ತಾರೆ. ಆದರೆ, ಎಲ್ಲವನ್ನೂ ಕಳೆದುಕೊಂಡ ಮೇಲೆ ಅತ್ತೂ ಪ್ರಯೋಜನವೇನು ಎಂದು ಪ್ರಶ್ನಿಸಿದ ಅವರು, ಇರುವಷ್ಟು ದಿನಗಳ ಕಾಲ ತಾಯಿ ಪ್ರೀತಿ ಮತ್ತು ಕೌಟುಂಬಿಕ ಸೌಹಾರ್ದ ಕಾಪಾಡಿಕೊಂಡರೆ ಅದಕ್ಕಿಂತ ಉತ್ತಮವಾದ ಸಾಧನೆ ಮತ್ತೊಂದಿಲ್ಲ ಎಂದರು.
ಲೇಖಕಿ ಸಿ.ಎಲ್.ಸುನಂದಮ್ಮ ಮಾತನಾಡಿ ಪ್ರಾಣಿಗಳಲ್ಲಿ ಇರುವ ಮಮತೆ ಮನುಷ್ಯರಲ್ಲಿ ಕಾಣೆಯಾಗುತ್ತಿದೆ. ಯಾವುದಾದರೂ ಪ್ರಾಣಿಗಳಿಗೆ ಹಾನಿಯಾದಾಗ ಇತರೆ ಪ್ರಾಣಿಗಳು ಅದರ ಸಹಾಯಕ್ಕೆ ಬರುತ್ತವೆ. ಮರಿಯನ್ನು ಯಾರಾದರೂ ಅಪಾಯಕ್ಕೆ ಸಿಲುಕಿಸಲು ಹೋದರೆ ಅದರ ತಾಯಿ ಪ್ರಾಣದ ಹಂಗು ತೊರೆದು ಮೇಲೆ ಬೀಳುತ್ತದೆ. ಅಂದರೆ, ಅಷ್ಟರ ಮಟ್ಟಿಗೆ ಪ್ರಾಣಿಗಳಲ್ಲಿ ರಕ್ಷಣಾ ಮನೋಭಾವ ಇರುತ್ತದೆ. ಆದರೆ ಮನುಷ್ಯರಲ್ಲಿ ಸ್ವಾರ್ಥ ಮನೋಭಾವ ಹೆಚ್ಚುತ್ತಿದ್ದು, ಹಣ ಮತ್ತು ಆಸ್ತಿಯ ಹಿಂದೆ ಬೀಳುತ್ತಿದ್ದಾರೆ. ಇದರ ಪರಿಣಾಮವಾಗಿ ಕೌಟುಂಬಿಕ ಸಂಬAಧಗಳು ಮೌಲ್ಯ ಕಳೆದುಕೊಳ್ಳುತ್ತಿವೆ ಎಂದು ವಿಷಾದಿಸಿದರು.
ತುಮಕೂರು ವಿಜ್ಞಾನ ಕೇಂದ್ರದ ಅಧ್ಯಕ್ಷೆ ಎನ್.ಅಕ್ಕಮ್ಮ ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ಹೇಳುತ್ತಾರೆ. ಒಂದು ಕುಟುಂಬದ ಪ್ರಗತಿ ಮತ್ತು ಸೌಹಾರ್ದಯುತ ಬಾಳ್ವೆಗೆ ಆ ಕುಟುಂಬದ ಹೆಣ್ಣೇ ಕಾರಣಳಾಗುತ್ತಾಳೆ. ಆದರೆ, ಕೆಲವೊಮ್ಮೆ ದೌರ್ಜನ್ಯಗಳಿಗೆ ಸಿಲುಕಿ ನಲುಗುತ್ತಾಳೆ. ಯಾವುದೇ ಕುಟುಂಬ ಇರಲಿ ಅಲ್ಲಿ ಹೆಣ್ಣು ಮಕ್ಕಳು ನಗುನಗುತ್ತಾ ಇದ್ದರೆ ಅಂತಹ ಕುಟುಂಬಗಳು ಉತ್ತಮ ಏಳಿಗೆ ಹೊಂದಲು ಸಹಕಾರಿಯಾಗುತ್ತದೆ. ಅಂತಹ ವಾತಾವರಣವನ್ನು ವಿದ್ಯಾವಂತರಾದವರು ಎಚ್ಚೆತ್ತುಕೊಂಡು ಕಾಪಾಡಿಕೊಳ್ಳಬೇಕಿದೆ ಎಂದರು.
ನಿವೃತ್ತ ಉಪನ್ಯಾಸಕಿ ಜಯಮ್ಮ ಮಾತನಾಡಿ, ಈ ಜಗತ್ತಿನಲ್ಲಿ ಹಣಕ್ಕೆ ಖರೀದಿಸಲಾಗದ ಯಾವುದಾದರೂ ವಸ್ತು ಒಂದಿದ್ದರೆ ಅದು ತಾಯಿ ಮಾತ್ರ. ಅಂತಹ ತಾಯಿ ಪ್ರೀತಿಯನ್ನು ಯಾವತ್ತೂ ಕಳೆದುಕೊಳ್ಳಬಾರದು, ದೂರ ಮಾಡಿಕೊಳ್ಳಲೂ ಬಾರದು. ಹೆತ್ತು ಹೊತ್ತು ಸಲಹಿದ ತಾಯಂದಿರನ್ನು ಕೊನೆಯ ಹಂತದಲ್ಲಿ ಗೌರವಯುತವಾಗಿ ನಡೆಸಿಕೊಳ್ಳಬೇಕಿದೆ ಎಂದು ಹೇಳಿದರು.
ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ, ಹೆಣ್ಣು ಮಕ್ಕಳಿಗೆ ಸಮಾನತೆ ನೀಡಲೆಂದು ತಂದೆಯ ಆಸ್ತಿಯಲ್ಲಿ ಪಾಲು ಸಿಗುವಂತೆ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಇತ್ತೀಚಿನ ದಿನಗಳಲ್ಲಿ ಆಸ್ತಿಯ ಹಕ್ಕಿಗೆ ದುಂಬಾಲು ಬೀಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರ ಹಿಂದೆ ಪ್ರಚೋದನೆಗಳೂ ಇವೆ. ಆಸ್ತಿಗಾಗಿ ಕೌಟುಂಬಿಕ ಸಂಬAಧಗಳನ್ನು ಅಂತ್ಯಗೊಳಿಸಿಕೊಳ್ಳುವ ಪ್ರಮೇಯ ಬಾರದಿರಲಿ ಎಂದರು.
ಸಾಂತ್ವನ ಕೇಂದ್ರದ ಪಾರ್ವತಮ್ಮ, ವೇದಿಕೆಯ ಪದಾಧಿಕಾರಿ ಗಂಗಲಕ್ಷ್ಮಿ ಮಾತನಾಡಿದರು.


