ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಮನಸ್ಸುಗಳು ಅಧಿಕಾರದಲ್ಲಿ ಇದ್ದರೆ, ಯುದ್ದದಂತಹ ಮನುಷ್ಯ ವಿರೋಧಿ ಕೃತ್ಯಗಳಿಗೆ ಅವಕಾಶ ಇರುವುದಿಲ್ಲ. ಇಂದಿನ ಮಧ್ಯಪ್ರಾಚ್ಯ ಬಿಕ್ಕಟ್ಟಿಗೆ ಅಮೆರಿಕಾ, ಇಸ್ರೇಲ್ ಮತ್ತಿತರರ ರಾಷ್ಟ್ರಗಳಲ್ಲಿ ಇರುವ ತಾಯಿ ಹೃದಯದ ಮನಸ್ಸುಗಳು ಇಲ್ಲದಿರುವುದೇ ಕಾರಣ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ನಗರದಲ್ಲಿ ಆಯೋಜಿಸಿದ್ದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರ ಬದುಕು-ಬರಹ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ವಿಭಾಗವೇ ಆಗಲಿ ತನ್ನಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ದೃಷ್ಟಿಕೋನ ಅಳವಡಿಸಿಕೊಳ್ಳದಿದ್ದರೆ, ಆ ವಿಭಾಗ ಹಳ್ಳ ಹಿಡಿದಂತೆಯೇ ಸರಿ. ಇತ್ತೀಚಿನ ಟ್ರಂಪ್, ನೇತನ್ಯಹು ಅವರ ಆಡಳಿತವೇ ಇದಕ್ಕೆ ಸಾಕ್ಷಿ. 165 ಜನ ಮುಗ್ಧ ಮಕ್ಕಳನ್ನು ಕೊಲೆ ಮಾಡಿದಾಗ, ಕನಿಷ್ಠ ಪಾಪ ಪ್ರಜ್ಞೆ ಕಾಡದಿರುವುದು ದುರಂತವೇ ಸರಿ ಎಂದು ವಿಷಾದಿಸಿದರು.
ಸಾಹಿತಿಯಾಗಿ, ವಿಮರ್ಶಕರಾಗಿ, ಆಡಳಿತಾಧಿಕಾರಿಯಾಗಿ, ಉಪನ್ಯಾಸಕರಾಗಿ ಬಹುಮುಖ್ಯ ವ್ಯಕ್ತಿತ್ವದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ತಾಯಿಯ ಅಂತಃಕರಣ ಹೊಂದಿದ್ದವರು. ಕ್ರಿಯೆ ಇಲ್ಲದ ಅರಿವು ಪ್ರಯೋಜನಕ್ಕೆ ಬಾರದು. ಆದರೆ ನಿರಂತರ ಅಧ್ಯಯನಶೀಲರಾಗಿದ್ದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯನವರ ಭಾಷಾ ಪಾಂಡಿತ್ಯ, ವಿದ್ವತ್, ಅಧ್ಯಾಪನ ಕ್ರಮ ಎಲ್ಲವೂ ಇಂದಿನವರಿಗೆ ಮಾದರಿ. ಈ ಮಾದರಿ ವ್ಯಕ್ತಿತ್ವವನ್ನು ಯುವ ಪಿಳೀಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಸಾಹಿತ್ಯ ಪರಿಷತ್ತಿ ವತಿಯಿಂದ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರ ಕಾವ್ಯಾವಲೋಕನ ಕುರಿತು ಮಾತನಾಡಿದ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ಕಾವ್ಯಕ್ಕೆ ಎಲ್ಲಾ ಸಮಸ್ಯೆಗಳಿಗೆ ಮದ್ದಾಗಿ ಕೆಲಸ ಮಾಡುವ ಶಕ್ತಿ ಇದೆ. ಇಡೀ ಜಗತ್ತೇ ಪ್ರಕ್ಷÄಬ್ದ ವಾತಾವರಣದಲ್ಲಿ ಇರುವ ಸಂದರ್ಭದಲ್ಲಿ ಕಾವ್ಯದ ಅಗತ್ಯತೆ ಇದೆ. ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರದ್ದು ಬಹುಮುಖ ವ್ಯಕ್ತಿತ್ವ. ಕಾವ್ಯ, ಗದ್ಯ, ವಚನ, ಆಡಳಿತಾಧಿಕಾರಿ ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು ಎಂದರು.
ಸಾಹಿತಿ ಪ್ರೊ. ಲಕ್ಷ್ಮೀನಾರಾಯಣ, ಪ್ರಾಧ್ಯಾಪಕ ಪ್ರೊ. ನಾಗಭೂಷಣ್.ಸಿ ಮಾತನಾಡಿದರು. ಇದೇ ವೇಳೆ ಸೊಂದಲಗೆರೆ ಲಕ್ಷ್ಮೀಪತಿ ಅವರು ತಮ್ಮ ಪೋಷಕರ ಹೆಸರಿನಲ್ಲಿ ಸ್ಥಾಪಿಸಿರುವ ಶ್ರೀಮತಿ ಮಲ್ಲಮ್ಮ, ಶ್ರೀ ಪಟೇಲ್ ನಾರಸೇಗೌಡ ದತ್ತಿ ಪ್ರಶಸ್ತಿಯನ್ನು ಸಾಹಿತಿಗಳಾದ ಯಲಚಗೆರೆ ಉಮೇಶ್, ರೇಖಾ ಹಿಮಾನಂದ್ ಮತ್ತು ಕೆ.ಬಿ.ನೇತ್ರಾವತಿ ಅವರುಗಳಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ವಹಿಸಿದ್ದರು. ಡಾ.ಡಿ.ಎನ್. ಯೋಗೀಶ್ವರಪ್ಪ, ಪ್ರಾಂಶುಪಾಲರಾದ ಡಾ.ಟಿ.ಬಿ.ನಿಜಲಿಂಗಪ್ಪ, ಡಾ.ಹೆಚ್.ಎಂ.ದಕ್ಷಿಣಮೂರ್ತಿ, ಕಸಾಪ ಕಾರ್ಯದರ್ಶಿ ಡಾ.ಕಂಟಲಗೆರೆ ಸಣ್ಣಹೊನ್ನಯ್ಯ, ಕೋಶಾಧ್ಯಕ್ಷ ಎಂ.ಹೆಚ್.ನಾಗರಾಜು, ಡಾ.ಪದ್ಮಜ. ವೈ.ಎಂ, ಡಾ.ಸಿ.ವಿ.ಶಕುಂತಲ ಇದ್ದರು.


