ಹತ್ತಿ ಬೀಜ ಬೆಳೆದುಕೊಟ್ಟ ತುಮಕೂರು ಜಿಲ್ಲೆಯ ಮಧುಗಿರಿ, ಸಿರಾ, ಪಾವಗಡ ಮತ್ತು ಕೊರಟಗೆರೆ ತಾಲೂಕುಗಳ ರೈತರಿಗೆ ಬೀಜ ಉತ್ಪಾದನಾ ಕಂಪನಿಗಳಿದ ಸುಮಾರು 500 ಕೋಟಿ ರೂ ಬಾಕಿ ಬರಬೇಕಿದ್ದು, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರೈತರ ಬಾಕಿ ಕೊಡಿಸುವುದರ ಜೊತೆಗೆ, ಬೀಜ ಉತ್ಪಾದನಾ ಕಾಯ್ದೆ ಅನ್ವಯ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸೂಕ್ತ ನಿರ್ದೇಶನ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಒತ್ತಾಯಿಸಿದ್ದಾರೆ.
ತುಮಕೂರು ನಗರದ ವಿಜ್ಞಾನ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕಳೆದ 10-20 ವರ್ಷಗಳಿಂದ ಜಿಲ್ಲೆಯ ಸುಮಾರು 9000ಕ್ಕೂ ಹೆಚ್ಚು ರೈತರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳದೆ 19,000 ಎಕರೆ ಪ್ರದೇಶದಲ್ಲಿ ಹತ್ತಿ ಬೀಜ ಉತ್ಪಾದನೆ ಮಾಡಿಸಲಾಗುತ್ತಿದೆ. ರೈತರು ತಮ್ಮ ಭೂಮಿಗಳಲ್ಲಿ ಉತ್ಪಾದಿಸಿದ 2024ರ ಸಾಲಿನಲ್ಲಿ ಬೀಜ ನೀಡಿದ ಬಾಕಿ 52 ಕೋಟಿಯ ಜೊತೆಗೆ, 2025ರಲ್ಲಿ ಬೀಜ ಬೆಳೆದು ನೀಡಿದ 3 ತಿಂಗಳು ಕಳೆದರೂ ರೈತರಿಗೆ ನೀಡಬೇಕಾದ 500 ಕೋಟಿ ರೂ ಬಾಕಿ ನೀಡಿಲ್ಲ. ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ, ಔಷಧಗಳನ್ನು ನೀಡದೆ ರೈತರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಬೀಜ ಉತ್ಪಾದನಾ ಕಂಪನಿಗಳಿAದ ಮೋಸ ಹೋಗಿರುವ ರೈತರಿಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಂದು ಎಕರೆಯಲ್ಲಿ ಹತ್ತಿ ಬಿತ್ತನೆ ಬೀಜ ಬೆಳೆಯಲು ಸುಮಾರು 2 ಲಕ್ಷ ರೂ ಖರ್ಚು ಬರುತ್ತದೆ. ನೆರೆ ರಾಜ್ಯಗಳಾದ ಆಂಧ್ರ, ತೆಲಂಗಾಣ, ಮಹಾರಾಷ್ಟçಗಳ 22 ಬೀಜ ಉತ್ಪಾದನಾ ಕಂಪನಿಗಳಿಗೆ ರೈತರಿಗೆ ಒಂದಿಷ್ಟು ಮುಂಗಡ ಹಣ ನೀಡಿ, ಹತ್ತಿ ಬೀಜಗಳನ್ನು ಬೆಳೆಸಿಕೊಳ್ಳುತ್ತಿದ್ದು, ಸಂಸ್ಕರಣಾ ವೆಸ್ಟ್ ಎಂದು 100 ಕೆ.ಜಿ.ಗೆ ಬದಲಾಗಿ 107 ತೂಕ ಮಾಡುವುದಲ್ಲದೆ, 45 ಕೆ.ಜಿ ಬ್ಯಾಗ್ ಮಾಡುವಾಗ 45.5 ಕೆ.ಜಿ. ತೂಗುವ ಮೂಲಕ ರೈತರನ್ನು ಶೋಷಣೆ ಮಾಡಲಾಗುತ್ತಿದೆ. ಬೀಜ ಕೊಂಡ ತಕ್ಷಣ ಹಣ ನೀಡುತ್ತಿಲ್ಲ. ಕಂಪನಿ ನೇರವಾಗಿ ವ್ಯವಹರಿಸದೆ ಏಜೆಂಟರ್ ಮೂಲಕ ಕೆಲಸ ನಡೆಸುತ್ತಿದೆ. ರೈತರಿಗೆ ಗುಣಮಟ್ಟದ ಬೀಜ, ಗೊಬ್ಬರ, ಔಷಧಗಳನ್ನು ನೀಡಿಲ್ಲ. ಬೆಳೆ ನಷ್ಟವಾದರೆ ಪರಿಹಾರವಿಲ್ಲ. ಹಾಗಾಗಿ ಹತ್ತಿ ಬೀಜ ಉತ್ಪಾದನಾ ಬೆಳೆಯನ್ನು ಫಸಲ್ ಭೀಮ ಯೋಜನೆಯ ಅಡಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಹತ್ತಿ ಬೀಜ ಉತ್ಪಾದನಾ ಕಂಪನಿಗಳು ಬೀಜೋತ್ಪಾದನಾ ಕಾಯ್ದೆಯ ನಿಯಮಗಳನ್ನೇ ಗಾಳಿಗೆ ತೂರಿ, ರೈತರೊಂದಿಗೆ ಯಾವುದೇ ಒಡಂಬಡಿಕೆ ಮಾಡಿಕೊಳ್ಳದೆ ಬೀಜವನ್ನು ಕೊಂಡು ಹಣ ನೀಡದೆ ಸತಾಯಿಸುತ್ತಿವೆ. ಇದೊಂದು ರೀತಿ ಹಗಲು ದರೋಡೆಯಂತಿದ್ದು, ಜಿಲ್ಲಾಡಳಿತ ಗಮನಹರಿಸಿ, ಸಮಸ್ಯೆಗೆ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದರು.
ರಾಜ್ಯದಲ್ಲಿ ಪೂರ್ವ ಮುಂಗಾರು ವಿಫಲವಾಗಿದೆ. ಹೆಸರು, ಉದ್ದು, ತೊಗರಿ, ಅಲಸಂದೆ ಬೆಳೆಯುತ್ತಿದ್ದ ರೈತರು ತಮ್ಮ ಭೂಮಿಯನ್ನು ಉಳುಮೆ ಮಾಡಲು ಸಾಧ್ಯವಾಗಿಲ್ಲ. ಜೊತೆಗೆ ವಿದ್ಯುತ್ ಕಣ್ಣಾಮುಚ್ಚಾಲೆ ರೈತರನ್ನು ಮತ್ತಷ್ಟು ಕಂಗೆಡಿಸಿದೆ. ಅತಿ ಹೆಚ್ಚು ಕೊಳವೆ ಬಾವಿಗಳಿರುವ ಗುಬ್ಬಿ ತಾಲೂಕಿಗೆ ದಿನವೊಂದಕ್ಕೆ ನೀಡಬೇಕಾದ 437 ಮೇಗಾ ವ್ಯಾಟ್ ವಿದ್ಯುತ್ಗೆ ಬದಲಾಗಿ 127 ಮೆ.ವ್ಯಾ ಮಾತ್ರ ನೀಡುತ್ತಿದ್ದಾರೆ. ಇದರಿಂದ ತೋಟ, ತುಡಿಕೆಗಳನ್ನು ಉಳಿಸಿಕೊಳ್ಳಲು ರೈತರು ಹೆಣಗಾಡುತಿದ್ದಾರೆ. ಕನಿಷ್ಠ ದಿನಕ್ಕೆ 6 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ನೀಡಬೇಕೆಂಬುದು ರೈತರ ಆಗ್ರಹವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ನಾಗರತ್ನಮ್ಮ, ಚಿಕ್ಕಬೋರೇಗೌಡ, ಕೆಂಚಪ್ಪ, ನಾಗರಾಜು, ಷಬ್ಬೀರ್ ಪಾಷ, ಲೋಕೇಶ್, ಷಪಿ ಅಹಮದ್, ಟಿ.ಕೆ.ಲಕ್ಷö್ಮಣಗೌಡ ಇದ್ದರು.


