ಜಾತಿ ಪ್ರಮಾಣ ಪತ್ರ ಇಲ್ಲದೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದಕಾರಣ ಕಾಡುಗೊಲ್ಲರಿಗೆ ಜಾತಿ ಪತ್ರಗಳನ್ನು ತ್ವರಿತವಾಗಿ ವಿತರಣೆ ಮಾಡುವಂತೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಅಭಿವೃದ್ದಿ ನಿಗಮದ ಅಧ್ಯಕ್ಷ ಮಹೇಶ್ ಹಾರೋಗೆರೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ತುಮಕೂರು ಜಿಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಕಂದಾಯ ಅಧಿಕಾರಿಗಳಿಗೆ ನಡೆಸಿದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಡುಗೊಲ್ಲ ಸಮುದಾಯ ಅತ್ಯಂತ ಹಿಂದುಳಿದ ಒಂದು ಬುಡಕಟ್ಟು ಸಮುದಾಯವಾಗಿದೆ. ಈ ಜನರಿಗೆ ಸರ್ಕಾರದ ಸವಲತ್ತುಗಳು ಸರಿಯಾದ ರೀತಿಯಲ್ಲಿ ತಲುಪುತ್ತಿಲ್ಲ. ಅವರಿಗೆ ಅಷ್ಟು ಜ್ಞಾನವಿಲ್ಲ. ಸರ್ಕಾರ ಇದನ್ನು ಅರಿತು ಕಾಡುಗೊಲ್ಲ ಸಮುದಾಯಕ್ಕೆಂದೇ ಪ್ರತ್ಯೇಕ ನಿಗಮ ಮಾಡಿದೆ. ಈ ನಿಗಮದ ಮೂಲಕ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದರು.
ಆದರೆ ಈ ಜನಕ್ಕೆ ಅಭಿವೃದ್ದಿ ನಿಗವiದಿಂದ ಸಿಗುವ ಯೋಜನೆಗಳನ್ನು ತಲುಪಿಸಲು ಜಾತಿ ಪ್ರಮಾಣ ಪತ್ರ ಮುಖ್ಯವಾಗಿದ್ದು ಇದು ಇಲ್ಲದೆ ಎಷ್ಟೋ ಜನ ಅರ್ಜಿ ಹಾಕಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ತಾಲೂಕು ಮಟ್ಟದ ಕಂದಾಯ ಅಧಿಕಾರಿಗಳು, ತಹಶೀಲ್ದಾರ್ ಅವರುಗಳು ಗಮನಹರಿಸಿ ಶೀಘ್ರ ಜಾತಿ ಪತ್ರ ವಿತರಣೆ ಮಾಡುವಂತೆ ತಿಳಿಸಿದರು.
ರಾಜ್ಯದ ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಈ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಇರುವುದರಿಂದ ಹಾಗೂ ಜಾತಿ ಪ್ರಮಾಣ ಪತ್ರ ಬೇಗನೇ ಸಿಗುತ್ತಿಲ್ಲವಾದ ಕಾರಣ ವಿವಿಧ ಯೋಜನೆಗಳಿಗೆ ಅರ್ಜಿ ಹಾಕುತ್ತಿಲ್ಲ. ಅಧಿಕಾರಿಗಳು ಇದನ್ನು ಗಮನಿಸಬೇಕು. ಸರ್ಕಾರವೂ ಸಹ ಈಗಾಗಲೇ ಸುತ್ತೋಲೆ ಹೊರಡಿಸಿದೆ. ಇದಕ್ಕೆ ತಹಶೀಲ್ದಾರ್ ಅವರು ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಗಂಗಾ ಕಲ್ಯಾಣ, ನೇರ ಸಾಲ ಯೋಜನೆ, ಸಾರಥಿ ಯೋಜನೆ ಅಡಿಯಲ್ಲಿ ವಾಹನ ಸೌಲಭ್ಯ, ಅರಿವು ಶೈಕ್ಷಣಿಕ ಯೋಜನೆ, ವಿದೇಶಿ ವ್ಯಾಸಂಗಕ್ಕೆ ಸಾಲ ಹೊಲಿಗೆ ಯಂತ್ರ ಹೀಗೆ ಹಲವು ರೀತಿಯ ಸಾಲ ಯೋಜನೆಗಳಿದ್ದು ಕಾಡುಗೊಲ್ಲ ಜನಾಂಗದವರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ತುಮಕೂರು ಜಿಲ್ಲೆಯ ಸಮಾಜದ ಜನರಿಗೆ ಈ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದಾಕ್ಷಣ ಬೇಗನೇ ತಾಲೂಕು ಮಟ್ಟದ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ಸಭೆ ಕರೆದು ಅವರಿಗೆ ಮಾಹಿತಿ ನೀಡಲು ಸಹಕರಿಸಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ತ್ವರಿತವಾಗಿ ಜಾತಿ ಪತ್ರ ವಿತರಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ತಾಲೂಕುಗಳ ತಹಶೀಲ್ದಾರ್ ಅವರು ಜಾತಿ ಪ್ರಮಾಣ ಪತ್ರ ವಿತರಿಸಲು ಗಮನಹರಿಸಬೇಕು. ಪ್ರಮಾಣ ಪತ್ರ ಇಲ್ಲದೆ ಫಲಾನುಭವಿಗಳಾಗಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ತಳ ಸಮುದಾಯಗಳ ಜನ ಮೇಲೆ ಬರಬೇಕೆಂದರೆ ಅವರಿಗೆ ಸರ್ಕಾರದ ಯೋಜನೆಗಳು ತ್ವರಿತವಾಗಿ ತಲುಪಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿಗಳಾದ ನಾಹಿದಾ ಜಮ್ ಜಮ್ ಹಾಗೂ ಎಲ್ಲ ತಾಲೂಕುಗಳ ತಹಶೀಲ್ದಾರರು ಇದ್ದರು.


